ಮೋದಿ ಇಳಿಸಲು ಊರೆಲ್ಲಾ ಸುತ್ತಿ ಬಂದಾಗ ತನ್ನ ಕುರ್ಚಿಯೇ ಹೋಗಿತ್ತು!
ಮತ್ತೆ ಅಧಿಕಾರಕ್ಕೆ ಬರುವುದು ಹಾಗಿರಲಿ, ಸ್ವಲ್ಪ ಯಾಮಾರಿದರೂ ಶಾಸಕ ಸ್ಥಾನವೂ ಹೋಗುತ್ತಿತ್ತು. ಅತ್ತ ಲೋಕಸಭೆಯಲ್ಲಿ, ಇತ್ತ ಅಸೆಂಬ್ಲಿಯಲ್ಲೂ ಹೀನಾಯ ಸೋಲು ಅನುಭವಿಸಿದ ಚಂದ್ರಬಾಬು ನಾಯ್ಡುಗಾರು ಕಥೆಯಿದು.
ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿ ಕುರ್ಚಿ ಏರದಂತೆ ತಡೆಯಲು ದೇಶವೆಲ್ಲಾ ಸುತ್ತಿ ಆಂಧ್ರಪ್ರದೇಶಕ್ಕೆ ಚಂದ್ರಬಾಬು ನಾಯ್ಡು ಬಂದಾಗ, ಅವರ ಕುರ್ಚಿಯನ್ನು ಮತದಾರ ಜಗನ್ಮೋಹನ್ ರೆಡ್ಡಿಗೆ ನೀಡಿದ್ದರು.
ಆಂಧ್ರದಲ್ಲಿ ಚಂದ್ರಬಾಬು ನಾಯ್ಡುಗೆ ಇದು ಅಂತಿಂಥ ಮುಖಭಂಗವಲ್ಲ!
ಮೋದಿ ಮತ್ತೆ ಪ್ರಧಾನಿಯಾಗದಂತೆ ತಡೆಯಲು ವಿಪಕ್ಷಗಳು ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ನಡೆಸಿದ್ದವು. ಅದರಲ್ಲಿ ರಾಹುಲ್, ಶರದ್ ಪವಾರ್, ಸ್ಟಾಲಿನ್, ಅಖಿಲೇಶ್, ಮಾಯಾವತಿ ಎಲ್ಲರೂ ಇದ್ದರು.
ಆಂಧ್ರದಲ್ಲಿ ನಾಯ್ಡು ಯುಗಾಂತ್ಯ! ಮೇ 30 ರಂದು ಜಗನ್ ಗದ್ದುಗೆಗೆ
ಆದರೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತೆಲುಗುದೇಶಂ ಮುಖ್ಯಸ್ಥ ಚಂದ್ರಬಾಬು ನಾಯ್ಡು ಪಟ್ಟ ಪರಿಶ್ರಮ ಅಂತಿಂದಲ್ಲ. ಅತ್ತ, ವಿಪಕ್ಷಗಳು ಇವರ ಪ್ರಯತ್ನಕ್ಕೆ ಸಾಥ್ ನೀಡಲಿಲ್ಲ, ಇತ್ತ ತಮ್ಮತಮ್ಮ ರಾಜ್ಯದ ಚುನಾವಣೆಯಲ್ಲೂ ಬಹುತೇಕ ಅವಮಾನ ಎದುರಿಸುವಂತಾಯಿತು.
30 ಸಾವಿರ ಮತಗಳ ಅಂತರದಿಂದ ಗೆದ್ದ ನಾಯ್ಡು
ಕುಪ್ಪಂ ಅಸೆಂಬ್ಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಚಂದ್ರಬಾಬು ನಾಯ್ಡು, ಕೆಲವು ರೌಂಡ್ ಮತಎಣಿಕೆಯಲ್ಲಿ ತಮ್ಮ ಸಮೀಪದ ಪ್ರತಿಸ್ಪರ್ಧಿ ವೈಎಸ್ಆರ್ ಕಾಂಗ್ರೆಸ್ಸಿನ, ಸ್ಥಳೀಯವಾಗಿ ಸಜ್ಜನ ಎಂದೇ ಹೆಸರಾಗಿರುವ ಕೃಷ್ಣಚಂದ್ರ ಮೌಳಿ ವಿರುದ್ದ ಹಿನ್ನಡೆಯನ್ನು ಅನುಭವಿಸಿದ್ದರು. ಕೊನೆಗೆ, ಸುಮಾರು ಮೂವತ್ತು ಸಾವಿರ ಮತಗಳ ಅಂತರದಿಂದ ವಿಜಯ ಸಾಧಿಸಿದರು. ಇನ್ನು ಆಂಧ್ರದ ಮಂಗಳಗಿರಿ ಅಸೆಂಬ್ಲಿ ಕ್ಷೇತ್ರದಲ್ಲಿ ನಾಯ್ಡು ಪುತ್ರ ನಾರಾ. ಲೋಕೇಶ್ ಸೋಲು ಅನುಭವಿಸಿದ್ದು, ಟಿಡಿಪಿಗೆ ಆದ ಇನ್ನೊಂದು ಹಿನ್ನಡೆ.
ಏಳೂ ಹಂತದ ಚುನಾವಣೆಯಲ್ಲಿ ರಾಜ್ಯ ಬಿಟ್ಟು ಬರದಂತಾದಾಗ
ಏಳೂ ಹಂತದ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಬಿಟ್ಟು ಬರದಂತ ಸ್ಥಿತಿ ನಿರ್ಮಾಣವಾದಾಗ, ಮಮತಾಗೆ ಇದ್ದ ಒಂದೇ ಒಂದು ಸೋರ್ಸ್ ಅಂದರೆ ಅದು ಚಂದ್ರಬಾಬು ನಾಯ್ಡು. ಮೊದಲ ಹಂತದ ಚುನಾವಣೆಯಲ್ಲೇ ಆಂಧ್ರದ ಅಸೆಂಬ್ಲಿ ಮತ್ತು ಲೋಕಸಭಾ ಚುನಾವಣೆ ಮುಗಿದ ನಂತರ, ಖಾಲಿಯಾಗಿದ್ದ ನಾಯ್ಡು ಅವರನ್ನು ಮೋದಿ ವಿರುದ್ದ ಒಗ್ಗೂಡಿಸಲು ಬಳಸಿಕೊಳ್ಳಲಾಯಿತು.
ಭಾರೀ ಮುಖಭಂಗದ ನಂತರ ದೀದಿ ಮೊದಲ ಟ್ವೀಟ್!
ಮಮತಾ ಪ್ರಧಾನಿಯನ್ನು ಔಟ್ ಡೇಟೆಡ್ ಎಂದು ಜರಿದರು
ಎನ್ಡಿಎ ಮೈತ್ರಿಕೂಟದಿಂದ ತೆಲುಗುದೇಶಂ ಹೊರಬಂದ ನಂತರ, ಮೋದಿ ವಿರುದ್ದ ನಾಯ್ಡು ಬಳಸಿದ ಪದಪ್ರಯೋಗ, ತೋರಿದ ಅಸಹನೆ, ರಾಜಕೀಯ ವ್ಯವಸ್ಥೆಗೆ ಅವಮಾನವಾಗುವಂತದ್ದು. ಯಾಕೆಂದರೆ, ಅವರಿಗೆ ಬೇಕೋ ಬೇಡವೋ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಯ್ಕೆಯಾದ ಸಿಟ್ಟಿಂಗ್ ಪ್ರಧಾನಿ ಅವರು. ಇನ್ನೊಂದೆಡೆ, ಮಮತಾ ಪ್ರಧಾನಿಯನ್ನು ಔಟ್ ಡೇಟೆಡ್ ಎಂದು ಜರಿದರು.
ಹೇಗೂ, ಜಗನ್ ಈಗಾಗಲೇ ಬಿಜೆಪಿ ಕಡೆ ಸ್ವಲ್ಪ ಜಾಸ್ತಿ ವಾಲಿದ್ದಾರೆ
ಒಂದು ಕಡೆ ಜಗನ್ ರಾಜ್ಯವೆಲ್ಲಾ ಪಾದಯಾತ್ರೆಯ ಮೂಲಕ ಸುತ್ತಾಡಿದರೆ, ಇನ್ನೊಂದು ಕಡೆ ಚಂದ್ರಬಾಬು ನಾಯ್ಡು, ಮೋದಿ ವಿರುದ್ದ ವಿಪಕ್ಷಗಳನ್ನು ಒಗ್ಗೂಡಿಸುವಲ್ಲಿ ನಿರತರಾದರು. ಆಂಧ್ರದಲ್ಲಿ ಬಿಜೆಪಿಗೆ ನೆಲೆಯಿಲ್ಲ, ಆದರೆ, ಎಲ್ಲಿ ನಾಯ್ಡು ಅವರನ್ನು ಹೆಡೆಮುರಿ ಕಟ್ಟಬೇಕಿತ್ತೋ ಆ ಕೆಲಸವನ್ನು ಪರೋಕ್ಷವಾಗಿ ಅಮಿತ್ ಶಾ ಮಾಡಿ ಮುಗಿಸಿದ್ದಾರೆ. ಹೇಗೂ, ಜಗನ್ ಈಗಾಗಲೇ ಬಿಜೆಪಿ ಕಡೆ ಸ್ವಲ್ಪ ಜಾಸ್ತಿ ವಾಲಿದ್ದಾರೆ.
ಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರು
ಮತದಾರ ನೀಡಿದ ಮ್ಯಾನ್ ಡೇಟ್ ಗೆ ನಾಯ್ಡು ಸುಸ್ತು
ಬಿಜೆಪಿಗೆ ಬಹುಮತ ಬರದೇ ಇದ್ದಲ್ಲಿ, ಎಲ್ಲಾ ವಿಪಕ್ಷಗಳನ್ನು ಒಗ್ಗೂಡಿಸಿ, ಏನು ಮಹತ್ವಾಕಾಂಕ್ಷೆಯ ಹುದ್ದೆಯನ್ನು ಪಡೆಯಬೇಕೆಂದು ಚಂದ್ರಬಾಬು ನಾಯ್ಡು ಇಟ್ಟುಕೊಂಡಿದ್ದರೋ, ಒಟ್ಟಿನಲ್ಲಿ ಮತದಾರ ನೀಡಿದ ಮ್ಯಾನ್ ಡೇಟ್ ಗೆ ಅವರು ಸುಸ್ತಾಗಿ ಹೋಗಿದ್ದಾರೆ. ರಾಜಕೀಯದಲ್ಲಿ ಏರಿಳಿತ ಸಹಜ, ಎಚ್ಚರಿಕೆಯಿಂದ ಹೆಜ್ಜೆಯಿಡಬೇಕು ಎನ್ನುವುದು ರಾಜಕಾರಣಿಗಳಿಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.