ಟ್ವಿಟ್ಟರಲ್ಲೂ ಕಂಬಳದ ಓಟಗಾರನದ್ದೇ ಸದ್ದು, ಮಹೀಂದ್ರಾ ಮೆಚ್ಚುಗೆ
ಬೆಂಗಳೂರು, ಫೆಬ್ರವರಿ 15: ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳ ಪರ ವಿರೋಧ ಚರ್ಚೆ ನಡೆದಿರಬಹುದು. ಆದರೆ, ಕಂಬಳದ ಓಟಗಾರರು ಹಲವು ಬಾರಿ ಗಮನ ಸೆಳೆಯುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಶ್ರೀನಿವಾಸಗೌಡ ಈಗ ಉದ್ಯಮಿ ಆನಂದ್ ಮಹೀಂದ್ರಾರನ್ನು ಸೆಳೆದಿದ್ದಾನೆ. ಮಹೀಂದ್ರಾ ಮಾಡಿದ ಟ್ವೀಟ್ ಕ್ರೀಡಾ ಸಚಿವಾಲಯದ ತನಕ ತಲುಪಿದ್ದು, ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಶ್ರೀನಿವಾಸ್ ಗೌಡಗೆ ಕ್ರೀಡಾ ಪ್ರಾಧಿಕಾರಕ್ಕೆ ಬರುವಂತೆ ಆಹ್ವಾನಿಸಿದ್ದಾರೆ.
ಕಂಬಳದ ಓಟಗಾರ ಶ್ರೀನಿವಾಸ್ ಗೌಡರನ್ನು ಜಗದೇಕ ಓಟಗಾರ ಉಸೇನ್ ಬೋಲ್ಟ್ ಗೆ ಹೋಲಿಸಿ ಸಾಮಾಜಿಕ ಜಾಲ ತಾಣ, ಟಿವಿ ಮಾಧ್ಯಮಗಳಲ್ಲಿ ಹೊಗಳಲಾಗುತ್ತಿದೆ. ಈ ಬಗ್ಗೆ ಎಎನ್ಐ ಜೊತೆ ಮಾತನಾಡಿದ ಶ್ರೀನಿವಾಸ್, ಬೋಲ್ಟ್ ವಿಶ್ವ ಚಾಂಪಿಯನ್ ನಾನು ಇಲ್ಲಿ ಕೆಸರಿನ ಗದ್ದೆಯಲ್ಲಿ ಓಡುವವ, ಹೋಲಿಕೆ ಏಕೆ ಎಂದು ವಿನಮ್ರವಾಗಿ ಉತ್ತರಿಸಿದ್ದಾರೆ.
ಫೆಬ್ರವರಿ 01ರಂದು ಮಂಗಳೂರಿನ ಐಕಳದಲ್ಲಿ ನಡೆದ ಕಂಬಳದಲ್ಲಿ ಶ್ರೀನಿವಾಸ ಗೌಡ ತನ್ನ ಕೋಣದ ಜೊತೆಗೆ 142. 50 ಮೀಟರ್ ದೂರದವನ್ನು 13.63 ಸೆಕೆಂಡುಗಳಲ್ಲಿ ಕ್ರಮಿಸಿದ್ದಾರೆ. ಇದು ಇಲ್ಲಿ ತನಕ ಕಂಬಳ ಕ್ರೀಡೆ ಓಟದ ದಾಖಲೆಯಾಗಿದೆ.
100 ಮೀಟರ್ ಗೆ ಇಳಿಸಿ ಹೋಲಿಕೆ ಮಾಡಿದರೆ
ಇದೇ ದೂರವನ್ನು 100 ಮೀಟರ್ ಗೆ ಇಳಿಸಿ ಹೋಲಿಕೆ ಮಾಡಿ ನೋಡಿದರೆ ಶ್ರೀನಿವಾಸ್ ಗೌಡ ತೆಗೆದುಕೊಂಡ ಸಮಯ 9.55 ಸೆಕೆಂಡು ಮಾತ್ರ ಎಂದು ತಿಳಿದು ಬರುತ್ತದೆ. ಅಂದರೆ, ವಿಶ್ವದಾಖಲೆ ಬರೆದ ಬೋಲ್ಟ್ ಗಿಂತಲೂ ಶ್ರೀನಿವಾಸ್ ವೇಗವಾಗಿ ಓಡಿದ್ದಾರೆ ಎನ್ನಬಹುದು. 100 ಮೀಟರ್ ದೂರವನ್ನು 9.58 ಸೆಕೆಂಡುಗಳಲ್ಲಿ ಕ್ರಮಿಸಿರುವುದು ಇಲ್ಲಿ ತನಕದ ವಿಶ್ವದಾಖಲೆಯಾಗಿದೆ.
ಶ್ರೀನಿವಾಸ್ ಗೌಡ ಓಟದ ಬಗ್ಗೆ ಬಂದಿರುವ ವರದಿಯನ್ನು ಉಲ್ಲೇಖಿಸಿರುವ ಆನಂದ್ ಮಹೀಂದ್ರಾ, ಟ್ವೀಟ್ ಮಾಡಿ, ಒಲಿಂಪಿಕ್ಸ್ ಗೆ ಕಂಬಳವನ್ನು ಸೇರಿಸಿ ಇಲ್ಲದಿದ್ದರೆ ಈತನಿಗೆ ಒಲಿಂಪಿಕ್ಸ್ ಗೆ ತೆರಳಲು ತರಬೇತಿ ಕೋಡಿ ಎಂದು ಕ್ರೀಡಾ ಸಚಿವ ಕಿರಣ್ ರಿಜಿಜುಗೆ ಟ್ಯಾಗ್ ಮಾಡಿ ಕೋರಿದ್ದಾರೆ.
|
ಆನಂದ್ ಮಹೀಂದ್ರಾ ಟ್ವೀಟ್
ಈತನ ದೇಹಾದಾರ್ಢ್ಯವನ್ನು ಒಮ್ಮೆ ನೋಡಿ, ಈತನಿಗೆ ಅಥ್ಲೆಟಿಕ್ಸ್ ನಲ್ಲಿ ಅತ್ಯುತ್ತಮ ಪ್ರಗತಿ ಹೊಂದುವ ಸಾಮರ್ಥ್ಯವಿದೆ ಎಂಬ ನಂಬಿಕೆ ನನಗಿದೆ. ಕಿರಣ್ ರಿಜಿಜು ಅವರೇ ನೀವು ಈತನಿಗೆ 100 ಮೀಟರ್ ಸ್ಪ್ರಿಂಟ್ ತರಬೇತಿ ಕೊಡಿಸಿ ಇಲ್ಲ ಕಂಬಳವನ್ನು ಒಲಿಂಪಿಕ್ಸ್ ಗೆ ಸೇರಿಸಿ, ಈ ಎರಡರಲ್ಲಿ ಏನಾದರೂ ಶ್ರೀನಿವಾಸ ನಮಗೆ ಚಿನ್ನದ ಪದಕ ತಂದು ಕೊಡಬಲ್ಲ ಎಂದು ಹೊಗಳಿದ್ದಾರೆ.
|
ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಟ್ವೀಟ್
ಆನಂದ್ ಮಹೀಂದ್ರಾ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ಭಾರತೀಯ ಕ್ರೀಡಾ ಪ್ರಾಧಿಕಾರದ ಕೋಚ್ ಗಳಿಗೆ ಶ್ರೀನಿವಾಸ ಗೌಡ ಅವರ ಟ್ರಯಲ್ ತೆಗೆದುಕೊಳ್ಳಲು ಸೂಚಿಸುತ್ತೇನೆ. ಅಥ್ಲೆಟಿಕ್ಸ್ ಅದರಲ್ಲೂ ಒಲಿಂಪಿಕ್ಸ್ ನ ಗುಣಮಟ್ಟ ಹಾಗೂ ಸೌಲಭ್ಯದ ಸರಿಯಾದ ಜ್ಞಾನ ಎಲ್ಲರಿಗೂ ಇರುವುದಿಲ್ಲ. ಭಾರತದ ಯಾವುದೇ ಪ್ರತಿಭೆಗಳು ಕತ್ತಲಲ್ಲಿ ಇರಲು ಬಿಡುವುದಿಲ್ಲ ಎಂದಿದ್ದಾರೆ.
ಕೋಣಕ್ಕೆ ಶ್ರೇಯಸ್ಸು ನೀಡಿದ ಶ್ರೀನಿವಾಸ
ಶ್ರೀನಿವಾಸ್ ಗೌಡ ಅವರು ಕಂಬಳದಲ್ಲಿ ಓಡಿದ ವಿಡಿಯೋವನ್ನು ಹಲವರು ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದು, ಉಸೇನ್ ಬೋಲ್ಟ್ ಗೆ ಹೋಲಿಸಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಶ್ರೀನಿವಾಸ್ ಗೌಡ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, 'ವಿಡಿಯೋಗಳನ್ನು ಹಲವರು ಹಂಚಿಕೊಂಡು ಅಭಿನಂದಿಸಿದ್ದಾರೆ, ಇದು ಸಂತಸ ತಂದಿದೆ, ನನ್ನ ಗೆಲುವಿನ ಹಿಂದೆ ಕೋಣಗಳ ಶ್ರಮವೂ ಇದೆ' ಎಂದು ಕಂಬಳದಲ್ಲಿ ಓಡಿದ ತಾಟೆ ಹಾಗೂ ಮೋಡ ಜೋಡಿ ಕೋಣಗಳನ್ನು ನೆನಪಿಸಿಕೊಂಡಿದ್ದಾರೆ.