83 ದಿನಗಳ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರವಾಸ
ಕೋಲ್ಕತ್ತಾ, ಮೇ.22: ಅಂಫಾನ್ ಚಂಡಮಾರುತ ಅಪ್ಪಳಿಸಿದ ಹೊಡೆತಕ್ಕೆ ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳ ಕರಾವಳಿ ಪ್ರದೇಶದ ಸಂಪೂರ್ಣ ಚಿತ್ರಣವೇ ಬದಲಾಗಿ ಬಿಟ್ಟಿದೆ. ಪಶ್ಚಿಮ ಬಂಗಾಳವೊಂದರಲ್ಲೇ ಚಂಡಮಾರುತಕ್ಕೆ ಸಿಲುಕಿ 72 ಮಂದಿ ಪ್ರಾಣ ಬಿಟ್ಟಿದ್ದಾರೆ.
ಅಂಫಾನ್ ಚಂಡಮಾರುತಕ್ಕೆ ನಲುಗಿದ ರಾಜ್ಯಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಪರಿಸ್ಥಿತಿ ಪರಿಶೀಲನೆ ನಡೆಸಲಿದ್ದಾರೆ.
ಅಂಫಾನ್ ಚಂಡಮಾರುತ: 'ಈ' ಸುರಕ್ಷತಾ ಕ್ರಮಗಳನ್ನು ಚಾಚೂತಪ್ಪದೆ ಪಾಲಿಸಿ
ಕೊರೊನಾ ವೈರಸ್ ಹಾಗೂ ಭಾರತದಲ್ಲಿ ಲಾಕ್ ಡೌನ್ ಘೋಷಣೆಯಾದ ದಿನದಿಂದಲೂ ಪ್ರಧಾನಮಂತ್ರಿ ಯಾವುದೇ ಪ್ರವಾಸ ಕೈಗೊಂಡಿರಲಿಲ್ಲ. 83 ದಿನಗಳ ನಂತರದಲ್ಲಿ ಮೊದಲ ಬಾರಿಗೆ ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಲ್ಲಿ ಮೋದಿ ಪ್ರವಾಸ ಕೈಗೊಂಡಿದ್ದಾರೆ. ಕಳೆದ ಫೆಬ್ರವರಿ.29ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಉತ್ತರ ಪ್ರದೇಶದ ಪ್ರಯಾಗ್ ರಾಜ್ ಚಿತ್ರಕೂಟ್ ಗೆ ಭೇಟಿ ನೀಡಿದ್ದರು.
ಪಶ್ಚಿಮ ಬಂಗಾಳದಲ್ಲಿ 1 ಲಕ್ಷ ಕೋಟಿ ನಷ್ಟ:
ಅಂಫಾನ್ ಚಂಡಮಾರುತಕ್ಕೆ ಪಶ್ಚಿಮ ಬಂಗಾಳ ರಾಜ್ಯವು ತತ್ತರಿಸಿ ಹೋಗಿದೆ. ಸುಮಾರು 1 ಲಕ್ಷ ಕೋಟಿಗೂ ಅಧಿಕ ಮೌಲ್ಯದ ಆಸ್ತಿ-ಪಾಸ್ತಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಇದರ ಜೊತೆಗೆ ಅಂಫಾನ್ ಚಂಡಮಾರುತಕ್ಕೆ 72 ಮಂದಿ ಬಲಿಯಾಗಿದ್ದು, ಈ ಪೈಕಿ 17 ಮಂದಿ ಕೋಲ್ಕತ್ತಾ ಮೂಲದವರೇ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ ಎರಡು ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.