ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನ ಬದಲಾವಣೆ: ಅಮಿತ್ ಶಾ ನಂತರ ಯಾರು?
ನವದೆಹಲಿ, ಮೇ 25: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭಾರಿ ವಿಜಯ ಗಳಿಸಿರುವ ಬೆನ್ನಲ್ಲೆ ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನವನ್ನು ಬದಲಾಯಿಸಲು ಚಿಂತನೆ ಆರಂಭಗೊಂಡಿದೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಕೇಂದ್ರ ಕ್ಯಾಬಿನೆಟ್ನಲ್ಲಿ ಪ್ರಭಾವಿ ಸಚಿವ ಸ್ಥಾನವನ್ನು ನೀಡುವ ಸಾದ್ಯತೆ ದಟ್ಟವಾಗಿದೆ. ಹಾಗಾಗಿಯೇ ಅವರನ್ನು ಅಧ್ಯಕ್ಷ ಸ್ಥಾನದಿಂದ ಬಿಡುಗಡೆಗೊಳಿಸಲಾಗುತ್ತಿದೆ.
ಬಿಜೆಪಿ ನಿಯಮದ ಪ್ರಕಾರ ಒಬ್ಬರು ಎರಡು ಪ್ರಮುಖ ಹುದ್ದೆಗಳನ್ನು ಹೊಂದುವಂತಿಲ್ಲ, ಹಾಗಾಗಿ ಅಮಿತ್ ಶಾ ಅವರಿಗೆ ಕೇಂದ್ರ ಮಂತ್ರಿ ಸ್ಥಾನ ನೀಡಿದಲ್ಲಿ ಅಧ್ಯಕ್ಷ ಸ್ಥಾನವನ್ನು ಬೇರೆಯವರಿಗೆ ನೀಡಲೇ ಬೇಕಾಗುತ್ತದೆ. ಅಲ್ಲದೆ ಅಮಿತ್ ಶಾ ಅವರ ಅಧ್ಯಕ್ಷ ಅವಧಿ ಈಗಾಗಲೇ ಮುಗಿದಿದೆ. ಹಾಗಾಗಿ ಅದಕ್ಕಾಗಿ ಹುಡುಕಾಟವು ಆರಂಭವಾಗಿದೆ.
ಸೆಲ್ಫಿ ತೆಗೆದುಕೊಳ್ಳಲು ನಿಲ್ಲುತ್ತಿದ್ದ ವ್ಯಕ್ತಿ 'ಮಹಾರಾಜ'ನನ್ನೇ ಸೋಲಿಸಿದರು!
ಬಿಜೆಪಿಯ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯವಾಗಿ ಆರ್ಎಸ್ಎಸ್ ಹಿನ್ನೆಲೆಯಿರುವವರಿಗೆ, ಆರ್ಎಸ್ಎಸ್ ಮತ್ತು ಬಿಜೆಪಿಯನ್ನು ಜೊಜತೆಯಾಗಿ ತೆಗೆದುಕೊಂಡು ಹೋಗುವವರಿಗೆ ಕೊಡುವ ಸಂಪ್ರದಾಯ ಬಿಜೆಪಿಯಲ್ಲಿ ಈ ಮೊದಲಿನಿಂದಲೂ ಇದೆ.
ಉತ್ತರ ಭಾರತದವರೇ ಅಧ್ಯಕ್ಷರಾಗುವ ಸಾಧ್ಯತೆ
ಅದರಲ್ಲಿಯೂ ಸಾಮಾನ್ಯವಾಗಿ ಉತ್ತರ ಭಾರತದವರೇ ಬಿಜೆಪಿಯ ಅಧ್ಯಕ್ಷ ಸ್ಥಾನವನ್ನು ನಿಭಾಯಿಸಿದ್ದಾರೆ. ಹಾಗಾಗಿ ಈ ಬಾರಿ ಸಹ ಉತ್ತರ ಭಾರತದವರೇ ಬಿಜೆಪಿ ಅಧ್ಯಕ್ಷರಾಗುವ ಸಾಧ್ಯತೆ ಇದೆ. ಬಿಜೆಪಿ ಅಧ್ಯಕ್ಷ ಸ್ಥಾನವನ್ನು ಬಿಜೆಪಿಯ ಕಾರ್ಯಕಾರಿಣಿಯವರು ಆಯ್ಕೆ ಮಾಡುತ್ತಾರಾದರೂ ಆರ್ಎಸ್ಎಸ್ನ ಪ್ರಭಾವ ಇದರಲ್ಲಿ ಹೆಚ್ಚಿಗೆ ಇರುತ್ತದೆ.
ಒನ್ ಇಂಡಿಯಾ ಎಕ್ಸ್ ಕ್ಲೂಸಿವ್ : ಟೀಂ ಮೋದಿಯ ಚಕ್ರವರ್ತಿ ಸೂಲಿಬೆಲೆ ಸಂದರ್ಶನ
ಶಿವರಾಜ್ ಸಿಂಗ್ ಮತ್ತು ಸ್ಮೃತಿ ಇರಾನಿ ಹೆಸರು ಚಾಲ್ತಿಯಲ್ಲಿ
ಪ್ರಸ್ತುತ ಕೇಳಿಬರುತ್ತಿರುವ ಹೆಸರುಗಳೆಂದರೆ, ಶಿವರಾಜ್ ಸಿಂಗ್ ಚೌಹಾಣ್, ಸ್ಮೃತಿ ಇರಾನಿ, ರಾಜನಾಥ್ ಸಿಂಗ್ ಈ ಮೂವರ ಹೆಸರುಗಳು ಪ್ರಾಥಿಕ ಹಂತದಲ್ಲಿ ಕೇಳಿಬರುತ್ತಿದೆ. ಇದರಲ್ಲಿ ರಾಜನಾಥ್ ಸಿಂಗ್ ಅವರು ಈಗಾಗಲೇ ಒಮ್ಮೆ ಪಕ್ಷದ ಅಧ್ಯಕ್ಷರಾಗಿದ್ದಾರೆ ಹಾಗಾಗಿ ಅವರಿಗೆ ಅವಕಾಶ ಕಡಿಮೆ. ಇನ್ನು ಸ್ಮೃತಿ ಅವರಿಗೆ ಕೇಂದ್ರ ಮಂತ್ರಿ ಮಂಡಲದಲ್ಲಿ ಸ್ಥಾನ ಕೊಡುವ ಸಾಧ್ಯತೆ ಹೆಚ್ಚಿಗಿದೆ. ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ವಯಸ್ಸಿನ ಕಾರಣಕ್ಕೆ ಹುದ್ದೆ ನಿರಾಕರಿಸುವ ಸಾಧ್ಯತೆಯೂ ಇದೆ.
ಸಂಘಟನಾ ಶಕ್ತಿ ಇರುವವರಿಗೆ ಅಧ್ಯಕ್ಷ ಸ್ಥಾನ
ಬಿಜೆಪಿಯು ಸಾಮಾನ್ಯವಾಗಿ ಸಂಘಟನಾ ಶಕ್ತಿ ಇರುವವರನ್ನೇ ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತದೆ. ಈ ವರೆಗೆ ಹೆಸರೂ ಸಹಿತ ಕೇಳದ, ತೆರೆಯ ಹಿಂದೆ ಕೆಲಸ ಮಾಡುತ್ತಿರುವ ಹಲವು ಮುಖಂಡರು ಬಿಜೆಪಿ ಪಟ್ಟಿಯಲ್ಲಿದ್ದಾರೆ ಅಂತಹವರಲ್ಲಿ ಯಾರನ್ನಾದರೂ ಒಬ್ಬರನ್ನು ಆರ್ಎಸ್ಎಸ್ ಮತ್ತು ಬಿಜೆಪಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಕೂರಿಸುವ ಸಾಧ್ಯತೆ ಇದೆ.
ಇಬ್ಬರೇ ಸಂಸದರಿಂದ 303 ಸಂಸದರವರೆಗೆ ಬಿಜೆಪಿ ಬೆಳವಣಿಗೆಯ ರೋಚಕ ಕತೆ
ಬಿಎಲ್ ಸಂತೋಷ್ ಅವರಿಗೂ ಅವಕಾಶ ಇದೆ
ರಾಜ್ಯ ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರಿಗೂ ಅವಕಾಶ ಇಲ್ಲದೇ ಇಲ್ಲ. ರಾಜ್ಯದಲ್ಲಿ 25 ಲೋಕಸಭಾ ಸ್ಥಾನಗಳು ಬರುವಲ್ಲಿ ಅವರ ಪಾತ್ರ ಇದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ ಗೆಲ್ಲುವಲ್ಲಿಯೂ ಅವರ ಶ್ರಮ ಮಹತ್ವವವಾದುದು. ಅವರನ್ನು ಬಿಜೆಪಿ ರಾಷ್ಟ್ರ ಮಟ್ಟದ ಸಂಘಟನೆಗೆ ಕರೆಸಿಕೊಳ್ಳಬೇಕೆಂದು ಈ ಮೊದಲೇ ಚರ್ಚೆ ಎದ್ದಿತ್ತು. ಈಗ ಅಮಿತ್ ಶಾ ನಿರ್ಗಮನದಿಂದ ಉಂಟಾಗುವ ನಿರ್ವಾತವನ್ನು ಸಂತೋಷ್ ಅವರು ತುಂಬಿದರೆ ಆಶ್ಚರ್ಯವೇನೂ ಇಲ್ಲ. ಆದರೆ ಬಿಜೆಪಿ ದಕ್ಷಿಣದವರ ಬಗ್ಗೆ ತೋರುವ ನಿರ್ಲಕ್ಷ್ಯ ಬಿಡಬೇಕಷ್ಟೆ.