ಅರ್ನಬ್ ಗೋಸ್ವಾಮಿ ಬೆಂಬಲಕ್ಕೆ ನಿಂತ ಅಮಿತ್ ಶಾ, ಸ್ಮೃತಿ, ನಡ್ಡಾ
ನವದೆಹಲಿ, ನವೆಂಬರ್ 4: ಎರಡು ವರ್ಷಗಳ ಹಿಂದಿನ ಪ್ರಕರಣವನ್ನು ಮತ್ತೆ ತೆರೆದಿರುವ ಮಹಾರಾಷ್ಟ್ರ ಸಿಐಡಿ ಪೊಲೀಸರು ಬುಧವಾರ ಬೆಳಿಗ್ಗೆ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ಬಂಧಿಸಿರುವ ಕ್ರಮವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಚಿವರಾದ ಸ್ಮೃತಿ ಇರಾನಿ, ಪ್ರಹ್ಲಾದ್ ಜೋಷಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಅನೇಕರು ಖಂಡಿಸಿದ್ದಾರೆ.
'ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಪ್ರಜಾಪ್ರಭುತ್ವವನ್ನು ಮತ್ತೊಮ್ಮೆ ಅವಮಾನಿಸಿದ್ದಾರೆ. ರಿಪಬ್ಲಿಕ್ ಟಿವಿ ಮತ್ತು ಅರ್ನಬ್ ಗೋಸ್ವಾಮಿ ವಿರುದ್ಧ ರಾಜ್ಯ ಸರ್ಕಾರವು ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ನಾಲ್ಕನೇ ಅಂಗದ ಮೇಲಿನ ಹಲ್ಲೆಯಾಗಿದೆ. ಇದು ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತಿದೆ. ಮುಕ್ತ ಪತ್ರಿಕೋದ್ಯಮದ ಮೇಲಿನ ಈ ದಾಳಿಯನ್ನು ವಿರೋಧಿಸಲಾಗುವುದು' ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಅರ್ನಬ್ ಗೋಸ್ವಾಮಿ ಬಂಧನವಾಗಿರುವುದು ಯಾವ ಪ್ರಕರಣದಲ್ಲಿ?: ಇಲ್ಲಿದೆ ವಿವರ
'ತುರ್ತು ಪರಿಸ್ಥಿತಿಗಾಗಿ ಇಂದಿರಾ ಗಾಂಧಿ ಅವರನ್ನು ಭಾರತ ಕ್ಷಮಿಸಲಿಲ್ಲ. ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಹಲ್ಲೆಗಾಗಿ ಭಾರತವು ರಾಜೀವ್ ಗಾಂಧಿಯನ್ನು ಎಂದಿಗೂ ಕ್ಷಮಿಸಲಿಲ್ಲ. ಈಗ ಭಾರತವು ಪತ್ರಕರ್ತರ ಮೇಲಿನ ರಾಜ್ಯ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದಕ್ಕೆ ಪುನಃ ಸೋನಿಯಾ-ರಾಹುಲ್ ಗಾಂಧಿಯವರನ್ನು ಶಿಕ್ಷಿಸಲಿದೆ' ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ. ಮುಂದೆ ಓದಿ.
ಪ್ರತಿಕಾರದ ಕ್ರಮ
'ರಿಪಬ್ಲಿಕ್ ವಾಹಿನಿಯ ಸಂಪಾದಕ ಅರ್ನಬ್ ಗೋಸ್ವಾಮಿಯವರನ್ನು ಮುಂಬೈ ಪೊಲೀಸರು ಅವರ ಮನೆಯಿಂದ ಬಂಧಿಸಿರುವ ರೀತಿ ಅತ್ಯಂತ ಅವಮಾನಕರ. ಪತ್ರಿಕಾ ಸ್ವಾತಂತ್ರ್ಯದ ವಿರುದ್ಧ ಮಹಾರಾಷ್ಟ್ರ ಸರ್ಕಾರದ ಪ್ರತಿಕಾರದ ಈ ಕ್ರಮ ಅತ್ಯಂತ ಖಂಡನೀಯ' ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ನಾಳೆ ನಿಮಗೂ ಆಗಬಹುದು
'ಮಾಧ್ಯಮದಲ್ಲಿದ್ದು ಇಂದು ಅರ್ನಬ್ ಅವರ ಪರವಾಗಿ ನಿಲ್ಲದೆ ಇರುವವರು ತಾರ್ಕಿಕವಾಗಿ ಫ್ಯಾಸಿಸಂಅನ್ನು ಬೆಂಬಲಿಸುತ್ತಿದ್ದೀರಿ ಎಂದರ್ಥ. ನೀವು ಅವನ್ನು ಇಷ್ಟಪಡದೆ ಇರಬಹುದು, ಅವರನ್ನು ಒಪ್ಪಿಕೊಳ್ಳದೆಯೇ ಇರಬಹುದು, ನೀವು ಅವರನ್ನು ತಿರಸ್ಕರಿಸಬಹುದು. ಆದರೆ ನೀವು ಮೌನವಾಗಿದ್ದರೆ ದಬ್ಬಾಳಿಕೆಯನ್ನು ಬೆಂಬಲಿಸಿದಂತೆ. ನೀವು ನಂತರದವರಾಗಿದ್ದರೆ ನಿಮ್ಮ ಪರವಾಗಿ ಯಾರು ಮಾತನಾಡುತ್ತಾರೆ?' ಎಂದು ಸ್ಮೃತಿ ಇರಾನಿ ಪ್ರಶ್ನಿಸಿದ್ದಾರೆ.
ಮುಂಬೈನಲ್ಲಿ ಬೆಳ್ಳಂಬೆಳಿಗ್ಗೆ ಹೈಡ್ರಾಮಾ: ಅರ್ನಬ್ ಗೋಸ್ವಾಮಿ ಬಂಧನ
ಕಾಂಗ್ರೆಸ್ ಜತೆ ಕೈಜೋಡಿಸಿದ ಶಿವಸೇನಾ
'ತುರ್ತು ಪರಿಸ್ಥಿತಿಯು 1977ರಲ್ಲಿ ಅಂತ್ಯಗೊಂಡಿತ್ತು, ಆದರೆ ಅದನ್ನು ಹೇರುವ ಪ್ರವೃತ್ತಿ ಈಗಲೂ ಅಸ್ತಿತ್ವದಲ್ಲಿದೆ. ಕಾಂಗ್ರೆಸ್ ಮತ್ತು ತುರ್ತುಪರಿಸ್ಥಿತಿಯನ್ನು ಅನುಮೋದಿಸಿರುವ ಶಿವಸೇನಾ, ಕಾಂಗ್ರೆಸ್ ಜತೆ ಕೈಜೋಡಿಸಿ ರಾಜ್ಯದಲ್ಲಿ ಅದನ್ನು ಹೇರುವ ಪ್ರವೃತ್ತಿ ತೋರಿಸಿದೆ. ಸರ್ಕಾರದ ವಿರುದ್ಧದ ಧ್ವನಿಯನ್ನು ಅಡಗಿಸುವ ಇಂತಹ ಪ್ರಯತ್ನಗಳು ಪ್ರಜಾಪ್ರಭುತ್ವಕ್ಕೆ ಮಾರಕ. ಅಂತಹ ಪ್ರಯತ್ನಗಳ ವಿರುದ್ಧ ದೇಶ ಯಾವಾಗಲೂ ಎದ್ದು ನಿಲ್ಲಲಿದೆ' ಎಂದು ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಟ್ವೀಟ್ ಮಾಡಿದ್ದಾರೆ.
ಮೋದಿ ಸರ್ಕಾರದಿಂದ ರಕ್ಷಣೆ
'ಅರ್ನಬ್ ಅವರ ವಾಹಿನಿಯು 80 ಲಕ್ಷ ರೂ ನೀಡದೆ ಹೋಗಿದ್ದರಿಂದ ಅನ್ವಯ್ ನಾಯ್ಕ್ ಮತ್ತು ಅವರ ತಾಯಿ ಆತ್ಮಹತ್ಯೆಗೆ ಒಳಗಾಗಿದ್ದರು. ಫಡ್ನವೀಸ್ ಸರ್ಕಾರ ಈ ತನಿಖೆಯಲ್ಲಿ ವಿಫಲವಾಗಿ ಕುಟುಂಬಕ್ಕೆ ನ್ಯಾಯ ದೊರಕಿಸುವಲ್ಲಿ ವಿಫಲವಾಗಿತ್ತು. ಆಗ ಫಡ್ನವೀಸ್ ಸರ್ಕಾರದ ಮೇಲೆ ಪ್ರಕರಣ ಮುಚ್ಚಿಹಾಕಲು ರಾಜಕೀಯ ಒತ್ತಡ ಎದುರಿಸಿತ್ತು. ಆ ಚಾನೆಲ್ ತಮ್ಮ ಪರವಾಗಿರುವುದರಿಂದ ಅರ್ನಬ್ ಅವರನ್ನು ಮೋದಿ ಸರ್ಕಾರ ರಕ್ಷಿಸುತ್ತಿತ್ತು. ತಪ್ಪಿತಸ್ಥನ ವಿರುದ್ಧದ ಕ್ರಮವನ್ನು ಖಂಡಿಸುವ ಬದಲು ಬಿಜೆಪಿ ನಾಯ್ಕ್ ಕುಟುಂಬಕ್ಕೆ ನ್ಯಾಯ ಒದಗಿಸುವಲ್ಲಿ ವಿಫಲವಾಗಿದ್ದಕ್ಕೆ ನಾಚಿಕೆ ಪಡಬೇಕು' ಎಂದು ಮಹಾರಾಷ್ಟ್ರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಚಿನ್ ಸಾವಂತ್ ಹೇಳಿದ್ದಾರೆ.