ಲೋಕಸಭೆ ಚುನಾವಣೆಗೆ ದೋಸ್ತಿ ಹುಡುಕಾಟ, ಬಿಜೆಪಿ ಅಧ್ಯಕ್ಷರ ಹುಕುಂ ಏನು?
ನವದೆಹಲಿ, ಜುಲೈ 10: 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮಾಡಿದ ಜಾದೂ ಮರುಕಳಿಸಲಿದೆಯಾ? 2019ರ ಸಂಸತ್ ಚುನಾವಣೆಗೆ ಹೊಸ ದೋಸ್ತಿಗಳ ಹುಡುಕಾಟದಲ್ಲಿ ಪಕ್ಷ ತೊಡಗಿಕೊಂಡಿದೆಯಾ? ಇದೀಗ ಕೇಸರಿ ಪಕ್ಷವು ತನ್ನ ಮತದಾರರ ಸಂಖ್ಯೆ ಹೆಚ್ಚಿಸಿಕೊಳ್ಳುವ ಬಗ್ಗೆ ಮಾತ್ರ ಯೋಚಿಸುತ್ತಿಲ್ಲ. ಜತೆಗೆ ವಿರೋಧಿ ಪಾಳಯಕ್ಕೆ ಎದುರೇಟು ಕೊಡುವ ದಿಸೆಯಲ್ಲೂ ಚಿಂತಿಸುತ್ತಿದೆ.
ಆದ್ದರಿಂದಲೇ ಯಾವ ರಾಜ್ಯದಲ್ಲಿ ಏನು ಪರಿಸ್ಥಿತಿ ಇದೆ? ಯಾರ ಜತೆಗೆ ಬಿಜೆಪಿಯು ದೋಸ್ತಿ ಮಾಡಿಕೊಳ್ಳಬಹುದು ಎಂಬುದನ್ನು ತಿಳಿಸುವಂತೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಯಾ ರಾಜ್ಯಗಳ ಮುಖ್ಯಸ್ಥರಿಗೆ ಸೂಚನೆ ಕೊಟ್ಟಿದ್ದಾರೆ. ಪಟ್ಟಿಯನ್ನು ಸಿದ್ಧ ಮಾಡಿಟ್ಟುಕೊಂಡರೆ, ಆಯಾ ರಾಜ್ಯದ ಪ್ರವಾಸ ಮಾಡುವ ವೇಳೆಯಲ್ಲಿ ಅಮಿತ್ ಶಾ ಆ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಮೋದಿಯನ್ನು ಸದೆಬಡಿಯಲು ಹೆಗಡೆ ತಂತ್ರಕ್ಕೆ ಕಾಂಗ್ರೆಸ್ ಮೊರೆ!
ಲೋಕಸಭೆ ಚುನಾವಣೆ ಹೊತ್ತಿಗೆ ಪಕ್ಷವನ್ನು ಮತ್ತಷ್ಟು ಬಲಗೊಳಿಸುವುದು ಅಮಿತ್ ಶಾ ಇರಾದೆ. ಮುಖ್ಯವಾಗಿ ಮಿತ್ರ ಪಕ್ಷದ ಬಲ- ಸಾಮರ್ಥ್ಯಕ್ಕಿಂತ ಯಾವ ಸಾಮಾಜಿಕ ವರ್ಗದ ಮೇಲೆ, ಯಾವ ಮಟ್ಟದ ಪ್ರಭಾವ ಬೀರುತ್ತದೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
543ರ ಪೈಕಿ 334 ಸ್ಥಾನಗಳನ್ನು ಪಡೆದಿತ್ತು ಎನ್ ಡಿಎ
ಉದಾಹರಣೆಗೆ ಬಿಹಾರದಲ್ಲಿ ರಾಷ್ಟ್ರೀಯ ಲೋಕ್ ಸಮತಾ ಪಾರ್ಟಿ, ಉತ್ತರ ಪ್ರದೇಶದಲ್ಲಿ ಸುಹೇಲ್ ದೇವ್ ಭಾರತೀಯ ಸಮಾಜ ಪಾರ್ಟಿ ಮತ್ತು ಅಪ್ನಾ ದಳ. 2014ರ ಲೋಕಸಭೆ ಚುನಾವಣೆಯಲ್ಲಿ ಇಂಥ ಇಪ್ಪತ್ತೆಂಟು ಸಣ್ಣ ಹಾಗೂ ದೊಡ್ಡ ಪ್ರಾದೇಶಿಕ ಪಕ್ಷಗಳನ್ನು ಒಟ್ಟು ಹಾಕಿಕೊಂಡು ಮೈತ್ರಿಕೂಟ ಮಾಡಿಕೊಂಡಿತ್ತು ಬಿಜೆಪಿ. ಹೀಗೆ ಈ ಮೈತ್ರಿ ಕೂಟ ಒಟ್ಟು 543ರ ಪೈಕಿ 334 ಸ್ಥಾನಗಳನ್ನು ಪಡೆದಿತ್ತು. ಅದರಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ಪಡೆದಿದ್ದ ಸ್ಥಾನಗಳ ಸಂಖ್ಯೆ 282.
ಆಡಳಿತ ವಿರೋಧಿ ಅಲೆ ಕಾಣಿಸಿಕೊಳ್ಳಬಹುದು
ಅಂದಹಾಗೆ, ಈ ವರೆಗೆ ತುಂಬ ದೊಡ್ಡ ಮಟ್ಟದಲ್ಲಿ ಮೋದಿ ವರ್ಚಸ್ಸು ಕುಸಿಯದೇ ಇರಬಹುದು. ಆದರೆ ಚುನಾವಣೆ ಹೊತ್ತಿಗೆ ಆಡಳಿತ ವಿರೋಧಿ ಅಲೆ ಕಾಣಿಸಿಕೊಳ್ಳಬಹುದು. ಇನ್ನು ಬಿಜೆಪಿ ಅಧಿಕಾರದಲ್ಲಿರುವ ಇಪ್ಪತ್ತು ರಾಜ್ಯಗಳಲ್ಲಿ ಆಡಳಿತವಿರೋಧಿ ಅಲೆ ದುಪ್ಪಟ್ಟು ಕೂಡ ಆಗಬಹುದು. ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ವಿರೋಧಿ ಗುಂಪು ದೊಡ್ಡ ಮಟ್ಟದಲ್ಲಿ ಕೆಲಸ ಮಾಡದೇ ಇದ್ದರೂ ಆದರೆ ಆಯಾ ರಾಜ್ಯಗಳಲ್ಲಂತೂ ಮೈತ್ರಿಗಳು ಸವಾಲು ಎಸೆಯುವುದರಲ್ಲಿ ಯಾವ ಅನುಮಾನವೂ ಇಲ್ಲ.
ಗಣನೀಯ ಪ್ರಮಾಣದಲ್ಲಿ ಸ್ಥಾನಗಳನ್ನು ಕಳೆದುಕೊಳ್ಳಬಹುದು
ಕಳೆದ ಲೋಕಸಭೆ ಚುನಾವಣೆಯ ಕ್ಷೇತ್ರವಾರು ಫಲಿತಾಂಶದ ಅವಲೋಕನವನ್ನೇ ಮಾಡುವುದಾದರೆ, ಕಾಂಗ್ರೆಸ್, ಬಿಎಸ್ ಪಿ, ಎಸ್ ಪಿ, ಆರ್ ಎಲ್ ಡಿ, ಆರ್ ಜೆಡಿ, ಜೆಎಂಎಂ ಮತ್ತು ಜೆವಿಎಂ ಮೈತ್ರಿ ಆಗಿಬಿಟ್ಟರೆ ಬಿಜೆಪಿಯು ಅರವತ್ನಾಲ್ಕು ಸ್ಥಾನಗಳನ್ನು ಕಳೆದುಕೊಳ್ಳಬಹುದು. ಈ ಪೈಕಿ ಈಗ ಪ್ರಸ್ತಾವ ಮಾಡಿರುವ ಮೊದಲ ನಾಲ್ಕು ಪಕ್ಷಗಳ ಮೈತ್ರಿಯಾದರೆ ಉತ್ತರ ಪ್ರದೇಶವೊಂದರಲ್ಲೇ 49 ಸ್ಥಾನಗಳನ್ನು ಬಿಜೆಪಿ ಕಳೆದುಕೊಳ್ಳುವ ಸಾಧ್ಯತೆ ಇದೆ. ಕಳೆದ ಬಾರಿ ಉ.ಪ್ರ,ದಲ್ಲಿ 80 ಸ್ಥಾನಗಳ ಪೈಕಿ 71 ಸ್ಥಾನಗಳಲ್ಲಿ ಬಿಜೆಪಿ ಗೆದ್ದಿತ್ತು.
ಸಣ್ಣ-ಪುಟ್ಟ ಪ್ರಾದೇಶಿಕ ಪಕ್ಷಗಳೇ ಕೇಸರಿ ಪಕ್ಷದ ಗುರಿ
ತಜ್ಞರ ಅಭಿಪ್ರಾಯದಂತೆ, ಸಣ್ಣ ಸಣ್ಣ ಪ್ರಾದೇಶಿಕ ಪಕ್ಷಗಳೇ ಬಿಜೆಪಿಯ ಗುರಿ. ಏಕೆಂದರೆ, ದೊಡ್ಡ ಪ್ರಾದೇಶಿಕ ಪಕ್ಷಗಳನ್ನು ಸೆಳೆಯುವುದು ಕಷ್ಟ. ಉದಾಹರಣೆಗೆ ಬಿಹಾರದಲ್ಲಿ ಉಪೇಂದ್ರ ಕುಶ್ ವಾರ ಆರ್ ಎಲ್ ಎಸ್ ಪಿ ಹಿಂದುಳಿದ ವರ್ಗಗಳ ಮತಗಳನ್ನು ಬಿಜೆಪಿ ಪಾಲಿಗೆ ಸೆಳೆಯುವ ಶಕ್ತಿ ಹೊಂದಿದೆ. ಒಂದು ವೇಳೆ ಹಾಗೆ ಆಗದಿದ್ದರೂ ದಲಿತ ಹಾಗೂ ಹಿಂದುಳಿದ ವರ್ಗಗಳ ಮತಗಳನ್ನು ಒಡೆಯುವಲ್ಲಿಯಂತೂ ಸಫಲವಾಗುತ್ತದೆ.
ಗೆಲ್ಲಬಹುದಾದ ಕ್ಷೇತ್ರಗಳನ್ನು ಗುರುತಿಸಲು ಸೂಚನೆ
ವಿರೋಧಿ ಪಾಳಯದಲ್ಲಿ ಯಾವ ತಂತ್ರಗಾರಿಕೆ ನಡೆಯುತ್ತಿದೆ ಎಂಬ ಬಗ್ಗೆ ಕೂಡ ನಿಗಾ ಮಾಡುವಂತೆ ರಾಜ್ಯ ಮಟ್ಟದ ನಾಯಕರಿಗೆ ಸೂಚನೆ ನೀಡಲಾಗಿದೆ. ಆ ಮೂಲಕ ಅದಕ್ಕೆ ಪ್ರತಿತಂತ್ರ ಹೆಣೆಯಲು ಸಿದ್ಧವಾಗಬಹುದು ಎಂಬ ಲೆಕ್ಕಾಚಾರ ಇದೆ. ಕಣ್ಣು, ಕಿವಿ ತೆರೆದಿಟ್ಟಿರಿ. ವಿರೋಧಿ ಪಾಳಯದವರಲ್ಲಿ ಸ್ನೇಹಿತರನ್ನು ಮಾಡಿಟ್ಟುಕೊಳ್ಳಿ ಎಂದು ಅಮಿತ್ ಶಾ ಈಗಾಗಲೇ ಸೂಚನೆ ನೀಡಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳು ತಿಳಿಸುತ್ತವೆ. ಜತೆಗೆ ಆಯಾ ರಾಜ್ಯದಲ್ಲಿ ಮತ ಧ್ರುವೀಕರಣ ಮಾಡಬಹುದಾದ ಅಂಶಗಳನ್ನು ಪಟ್ಟಿ ಮಾಡುವುದಕ್ಕೆ ಹಾಗೂ ಗೆಲ್ಲುವ ಸಾಧ್ಯತೆ ಹೆಚ್ಚಿರುವ ಕ್ಷೇತ್ರಗಳನ್ನು ಗುರುತಿಸುವುದಕ್ಕೆ ಕೂಡ ಸೂಚಿಸಲಾಗಿದೆ.