''ಸಿಎಎ ಹಾಗೂ ಎನ್ಆರ್ಸಿ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ವಿಪಕ್ಷ''
ಭುವನೇಶ್ವರ, ಫೆಬ್ರವರಿ 28: ಪೌರತ್ವ ತಿದ್ದುಪಡಿ ಕಾಯಿದೆ(ಸಿಎಎ) ಹಾಗೂ ರಾಷ್ಟ್ರೀಯ ನಾಗರಿಕ ನೊಂದಣಿ(ಎನ್ಆರ್ಸಿ) ಜಾರಿಗೊಂಡರೆ ಅಲ್ಪಸಂಖ್ಯಾತ ಸಮುದಾಯಕ್ಕೆ ತೊಂದರೆಯಾಗಲಿದೆ ಎಂದು ವಿಪಕ್ಷಗಳು ಸುಳ್ಳು ಸುದ್ದಿ ಹಬ್ಬಿಸುತ್ತಿವೆ. ಸಿಎಎ ಜಾರಿಯಾಗುವುದರಿಂಡ ಯಾವುದೇ ನಾಗರಿಕರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಾರ್ವಜನಿಕ ಸಮಾರಂಭದಲ್ಲಿಂದು ಹೇಳಿದರು.
ಭುವನೇಶ್ವರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅಮಿತ್ ಶಾ, ಸಿಎಎ ಮತ್ತು ಎನ್ಆರ್ಸಿ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ, ಪ್ರಚೋದನೆಗೆ ಎಡೆ ಮಾಡಿಕೊಟ್ಟಿದ್ದಾರೆ. ಇದರಿಂದ ದೇಶದ ಅನೇಕ ಕಡೆ ಗಲಭೆ, ಹಿಂಸಾಚಾರ ಹೆಚ್ಚಾಗಿವೆ. ಸಿಎಎ ಕಾಯ್ದೆ ಯಾರೊಬ್ಬರ ಪೌರತ್ವ ಅಥವಾ ಯಾವುದೇ ಹಕ್ಕು ಕಸಿದುಕೊಳ್ಳುವ ಉದ್ದೇಶ ಹೊಂದಿಲ್ಲ ಎಂದು ಅಮಿತ್ ಸಮರ್ಥನೆ ನೀಡಿದರು.
ಬಹುಜನ ಸಮಾಜ ಪಕ್ಷ, ಸಮಾಜವಾದಿ ಪಕ್ಷ, ಕಮ್ಯೂನಿಸ್ಟ್, ಕಾಂಗ್ರೆಸ್, ಟಿಎಂಸಿ ಜತೆಗೆ ಹಲವು ಪಕ್ಷಗಳು ಸಿಎಎ ವಿರುದ್ಧ ನಿಂತಿದ್ದಾರೆ. ಸಿಎಎ ಅಲ್ಪಸಂಖ್ಯಾತರ ಪೌರತ್ವ ಕಸಿದುಕೊಳ್ಳಲಿದೆ ಎಂದು ಸುಳ್ಳು ಹೇಳುವ ಮೂಲಕ ಇಡೀ ದೇಶವನ್ನು ದಿಕ್ಕು ತಪ್ಪಿಸುತ್ತಿವೆ. ನಿರಾಶ್ರಿತರಿಗೆ ಪೌರತ್ವ ನೀಡುವ ಕಾಯ್ದೆ ಸಿಎಎ, ಯಾವುದೇ ಒಬ್ಬ ಮುಸ್ಲಿಂ ಅಥವಾ ಒಬ್ಬ ಅಲ್ಪಸಂಖ್ಯಾತ ವ್ಯಕ್ತಿಗೂ ಅನ್ಯಾಯವಾಗದಂತೆ ಸಿಎಎ ನೋಡಿಕೊಳ್ಳಲಿದೆ.
ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರ ನಿರಾಶ್ರಿತರಿಗೆ ಪೌರತ್ವ ನೀಡಲಿದೆ. ಈ ಉದ್ದೇಶದಿಂದಲೇ ಸಿಎಎ ಜಾರಿಗೆ ತರಲಾಗಿದೆ ಎಂದು ಪುನರುಚ್ಚರಿಸಿದರು.