ಒಬ್ಬನೇ ಒಬ್ಬ ಅಕ್ರಮ ವಲಸಿಗನನ್ನು ಇಲ್ಲಿರಲು ಬಿಡೊಲ್ಲ: ಅಮಿತ್ ಶಾ
ಗುವಾಹಟಿ, ಸೆಪ್ಟೆಂಬರ್ 9: ರಾಷ್ಟ್ರೀಯ ಪೌರತ್ವ ನೋಂದಣಿಯಲ್ಲಿ (ಎನ್ಆರ್ಸಿ) ಯಾವುದೇ ಅಕ್ರಮ ವಲಸಿಗರಿಗೆ ಸ್ಥಾನ ಸಿಗದಂತೆ ನೋಡಿಕೊಳ್ಳುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಸ್ಸಾಂನ ಪಕ್ಷದ ಘಟಕಕ್ಕೆ ಭಾನುವಾರ ಭರವಸೆ ನೀಡಿದರು.
ಎನ್ಆರ್ಸಿ ಸಂಬಂಧ ಅಮಿತ್ ಶಾ ಅವರಿಗೆ ಅಸ್ಸಾಂನ ಬಿಜೆಪಿ ಘಟಕ ಮನವಿ ಪತ್ರ ಸಲ್ಲಿಸಿತ್ತು. ಎನ್ಆರ್ಸಿಯ ಸಾಧಕ ಬಾದಕಗಳ ಕುರಿತು ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಲಾಯಿತು ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರಂಜಿತ್ ದಾಸ್ ತಿಳಿಸಿದರು.
ಅಸ್ಸಾಂ: ರಾಷ್ಟ್ರೀಯ ಪೌರತ್ವ ನೋಂದಣಿ ಪಟ್ಟಿ ಬಿಡುಗಡೆ
'ಭಾರತದಲ್ಲಿ ಒಬ್ಬನೇ ಒಬ್ಬ ಅಕ್ರಮ ವಲಸಿಗನಿಗೆ ಅವಕಾಶ ನೀಡುವುದಿಲ್ಲ ಎಂಬ ಬಿಜೆಪಿಯ ನಿಲುವು ಎಂದಿಗೂ ಬದಲಾಗುವುದಿಲ್ಲ ಎಂದು ಅಮಿತ್ ಶಾ ಭರವಸೆ ನೀಡಿರುವುದಾಗಿ ದಾಸ್ ಹೇಳಿದರು.
ಈ ಬಗ್ಗೆ ಪಕ್ಷದ ರಾಜ್ಯ ಘಟಕವು ಚಿಂತೆ ಮಾಡುವುದು ಬೇಡ ಎಂದು ಶಾ ಹೇಳಿದರು. 1971ಕ್ಕೂ ಮೊದಲು ಭಾರತಕ್ಕೆ ಬಂದ ಎಲ್ಲರಿಗೂ ಅಗತ್ಯ ರಕ್ಷಣೆ ನೀಡಲಾಗುವುದು ಎಂದು ಕೂಡ ಭರವಸೆ ನೀಡಿದ್ದಾಗಿ ಮಾಹಿತಿ ನೀಡಿದರು.
ರಾಷ್ಟ್ರೀಯ ಪೌರತ್ವ ನೋಂದಣಿ ಎಂದರೇನು?, ವಿವಾದ, ವಿವರ
ಈಶಾನ್ಯ ಸಮಿತಿ (ಎನ್ಇ) ಅಧ್ಯಕ್ಷರಾಗಿರುವ ಅಮಿತ್ ಶಾ, ದೇಶದಲ್ಲಿ ಯಾವ ಅಕ್ರಮ ವಲಸಿಗನೂ ಉಳಿದುಕೊಳ್ಳಲು ಕೇಂದ್ರ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು.
''ವಿಭಿನ್ನ ವರ್ಗಗಳಿಂದ ಎನ್ಆರ್ಸಿ ಕುರಿತು ಪ್ರಶ್ನೆಗಳು ಏಳುತ್ತಿವೆ. ಆದರೆ ಇಂದು ನಾನು ಹೇಳಲು ಬಯಸುವುದೇನೆಂದರೆ, ಈ ಪ್ರದೇಶದಲ್ಲಿ ಒಬ್ಬನೇ ಒಬ್ಬ ಅಕ್ರಮ ವಲಸಿಗ ಪ್ರವೇಶಿಸಲು ಸಾಧ್ಯವಿಲ್ಲ ಎಂಬುದನ್ನು ಬಿಜೆಪಿ ಸರ್ಕಾರ ಖಚಿತಪಡಿಸಲು ಬದ್ಧವಾಗಿದೆ'' ಎಂದು ಶಾ ತಿಳಿಸಿದ್ದರು.