ಮಮತಾ ವಿರುದ್ದ ಬಿಜೆಪಿ ಬೃಹತ್ ಶಕ್ತಿ ಪ್ರದರ್ಶನ: ಅಮಿತ್ ಶಾ ರ್ಯಾಲಿಗೆ ಜನಸಾಗರ
ಕೊಲ್ಕತ್ತಾ, ಆಗಸ್ಟ್ 11: ಅಸ್ಸಾಂ NRC ವಿದ್ಯಮಾನದ ನಂತರ ಮೊದಲ ಬಾರಿಗೆ ಪಶ್ಚಿಮ ಬಂಗಾಳಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ರಾಜ್ಯದ ಜನತೆ ಭಾರೀ ಸ್ವಾಗತವನ್ನು ಕೋರಿದ್ದಾರೆ. ನಗರದ ಮಿಯಾ ರೋಡ್ ಮೈದಾನದಲ್ಲಿ ನಡೆದ ರ್ಯಾಲಿಗೆ ಜನಸಾಗರವೇ ಹರಿದುಬಂದಿದೆ.
ಶನಿವಾರ (ಆ 11) ಮಧ್ಯಾಹ್ನ ಆರಂಭವಾದ ಅಮಿತ್ ಶಾ ಅವರ 'ಯುವ ಸ್ವಾಭಿಮಾನ ಸಮಾವೇಶ'ಕ್ಕೆ ರಾಜ್ಯ ಬಿಜೆಪಿ ಘಟಕ ನಿರೀಕ್ಷೆ ಮಾಡದಷ್ಟು ಸಾರ್ವಜನಿಕರು ಮಿಯಾ ರೋಡ್ ನಲ್ಲಿ ಜಮಾಯಿಸಿದ್ದರು. ಪಶ್ಚಿಮ ಬಂಗಾಳದಲ್ಲಿ ಬೃಹತ್ ಶಕ್ತಿಪ್ರದರ್ಶನ ನಡೆಸಿ ಮುಂಬರುವ ಲೋಕಸಭಾ ಚುನಾವಣೆಗೆ ರಣಕಹಳೆ ಊದುವ ಪ್ರಯತ್ನ ಬಿಜೆಪಿಯದ್ದಾಗಿತ್ತು.
ಕೊಲ್ಕತ್ತಾದಲ್ಲಿ ಅಮಿತ್ ಶಾ ರ್ಯಾಲಿ : ಮಮತಾ ಬ್ಯಾನರ್ಜಿ ಮಾಡಿಕೊಂಡ ಸಿದ್ದತೆ
ಸಮಾವೇಶದಲ್ಲಿ ಮಾತನಾಡುತ್ತಿದ್ದ ಅಮಿತ್ ಶಾ, ಇದೇ ಹದಿಮೂರು ವರ್ಷಗಳ ಹಿಂದೆ, ಅಸ್ಸಾಂ ಅಕ್ರಮ ವಲಸೆಗಾರರನ್ನು ದೇಶದಿಂದ ಹೊರಗೆ ಹಾಕಬೇಕೆಂದು ಮಮತಾ ಬ್ಯಾನರ್ಜಿ ಲೋಕಸಭೆಯಲ್ಲಿ ಪಟ್ಟು ಹಿಡಿದಿದ್ದರು. ಲೋಕಸಭೆಯ ಸ್ಪೀಕರ್ ಮುಂದೆ ಮನವಿ ಪತ್ರವನ್ನು ಹರಿದುಹಾಕಿದ್ದರು.
ಈ ವಿಚಾರದಲ್ಲಿ ಪಾರ್ಲಿಮೆಂಟ್ ಕಲಾಪಕ್ಕೂ ಅಡ್ಡಿ ತಂದಿದ್ದ ಮಮತಾ ಬ್ಯಾನರ್ಜಿ ಈಗ ಎನ್ಆರ್ಸಿ ವಿಚಾರದಲ್ಲಿ ಅಕ್ರಮ ವಲಸೆಗಾರರ ಪರವಾಗಿ ಮಾತನಾಡುತ್ತಿದ್ದಾರೆ. ಯಾಕೆಂದರೆ ತೃಣಮೂಲ ಕಾಂಗ್ರೆಸ್ಸಿಗೆ ಅವರೇ ವೋಟ್ ಬ್ಯಾಂಕ್. ಮಮತಾ ದೀದಿಯ ಈ ನಾಟಕ ಅರಿಯದಷ್ಟು ಜನರ ಮೂರ್ಖರಲ್ಲ ಎಂದು ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆ ಚುನಾವಣೆ : ದಕ್ಷಿಣದ ರಾಜ್ಯಗಳಿಗೆ ಬೆಂಗಳೂರಲ್ಲಿ ಅಮಿತ್ ಶಾ ಕಚೇರಿ!
ಕೇಂದ್ರದಿಂದ ಪಶ್ಚಿಮ ಬಂಗಾಳಕ್ಕೆ ಕೋಟ್ಯಾಂತರ ರೂಪಾಯಿ ಅನುದಾನ ಬಿಡುಗಡೆ ಮಾಡಿದರೂ, ಮಮತಾ ಸರಕಾರ ಯಾವುದನ್ನೂ ಸದ್ಬಳಕ್ಕೆ ಮಾಡಿಕೊಳ್ಳಲಿಲ್ಲ. ನರೇಂದ್ರ ಮೋದಿ ಸರಕಾರವನ್ನು ಟೀಕಿಸುವುದೇ ಕಾಯಕ ಮಾಡಿಕೊಂಡಿರುವ ಇಂತವರಿಂದ ರಾಜ್ಯ ಏನು ಅಭಿವೃದ್ದಿ ಕಾಣಲು ಸಾಧ್ಯ ಎಂದು ಶಾ ಟೀಕಾ ಪ್ರಹಾರ ನಡೆಸಿದ್ದಾರೆ.
ದುರ್ಗಾ ವಿಸರ್ಜನೆಗೂ ಮಮತಾ ಸರಕಾರ ಅಡ್ಡಗಾಲು ಹಾಕಿತು. ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಇಂತಹ ತೆಲೆಕೆಟ್ಟ ಆದೇಶಗಳನ್ನು ವಾಪಸ್ ಪಡೆಯುತ್ತೇವೆ. ನಾವೆಲ್ಲಾ ಪ್ರಮಾಣ ಮಾಡೋಣ, 'ಪಶ್ಚಿಮ ಬಂಗಾಳವನ್ನು ಶ್ಯಾಂ ಪ್ರಸಾದ್ ಮುಖರ್ಜಿ ಬಯಸಿದ್ದ ಬಂಗಾಳವನ್ನಾಗಿ ಮಾಡೋಣ' ವಂದೇ ಮಾತರಂ ಎಂದು ಅಮಿತ್ ಶಾ ಭಾಷಣಕ್ಕೆ ಮಂಗಳ ಹಾಡಿದ್ದಾರೆ.
ಸಮಾವೇಶ ನಡೆದ ಮಿಯಾ ರೋಡ್ ಸುತ್ತಮುತ್ತ ಮತ್ತು ಇಲ್ಲಿಗೆ ಬರುವ ದಾರಿಯುದ್ದಕ್ಕೂ, "ಬಿಜೆಪಿ ಗೋಬ್ಯಾಕ್' , " Anti ಬೆಂಗಾಲ್ ಬಿಜೆಪಿ ಗೋಬ್ಯಾಕ್ " ಎನ್ನುವ ಪೋಸ್ಟರುಗಳು ನಗರದಲ್ಲೆಡೆ ರಾರಾಜಿಸುತ್ತಿದ್ದವು. ಜೊತೆಗೆ, ಟಿಎಂಸಿಯ ಧ್ವಜಗಳೂ ಹಾರಾಡುತ್ತಿದ್ದವು. ಅಮಿತ್ ಶಾ ತಮ್ಮ ಭಾಷಣದಲ್ಲಿ, ಮಮತಾ ಸರಕಾರದ ನೆಗೆಟೆವ್ ಕ್ಯಾಂಪೇನ್ ಇದು ಎಂದು ಲೇವಡಿ ಮಾಡಿದ್ದಾರೆ.