ರಾಜೇ- ಅಮಿತ್ ಶಾ ಧುಸುಮುಸು, ರಾಜಸ್ತಾನ ಬಿಜೆಪಿಯಲ್ಲಿ ಏನು ಮುನಿಸು?
ರಾಜಸ್ತಾನದ ಬಿಜೆಪಿಯಲ್ಲಿ ಏನಾಗ್ತಿದೆ ಎಂದು ಇಡೀ ದೇಶ ಅತ್ತ ತಿರುಗಿ ನೋಡುವಂತಾಗಿದೆ. ವಿಧಾನಸಭೆ ಚುನಾವಣೆ ನಡೆಯಲಿರುವ ಆ ರಾಜ್ಯದಲ್ಲಿ ಏನೋ ಮಹತ್ವದ ಬದಲಾವಣೆ ಆಗಿರಬೇಕು ಅಂತೇನಾದರೂ ಅಂದುಕೊಂಡರೆ ಅದು ತಪ್ಪು. ಅಲ್ಲಿ ಅಮಿತ್ ಶಾ ವಿಜೃಂಭಿಸುತ್ತಿದ್ದರೆ, ಮುಖ್ಯಮಂತ್ರಿ ವಸುಂಧರಾ ರಾಜೇ ಆ ವೇದಿಕೆಯಲ್ಲೇ ಕಾಣ್ತಿಲ್ಲ.
ರಾಜಸ್ತಾನ ವಿಧಾನಸಭೆ ಚುನಾವಣೆಗೆ ಅಬ್ಬಬ್ಬಾ ಅಂದರೆ ಇನ್ನೆರಡು ತಿಂಗಳಿದೆ. ವಸುಂಧರಾ ರಾಜೇ ಆ ರಾಜ್ಯದಲ್ಲಿ ಬಿಜೆಪಿ ಪಾಲಿಗೆ ಪರಿಚಿತ- ಹೆಸರಾದ ಮುಖವೇ ಹೌದಾದರೂ ಬಿಜೆಪಿಯ ರಾಜಕೀಯ ತಂತ್ರಗಾರಿಕೆ ಮತ್ತು ಕಾರ್ಯಕರ್ತರನ್ನು ಒಗ್ಗೂಡಿಸುವುದನ್ನೆಲ್ಲ ಮಾಡುತ್ತಿರುವುದು ಪಕ್ಷ ರಾಷ್ಟ್ರಾಧ್ಯಕ್ಷ ಅಮಿತ್ ಶಾ.
ರಾಜಸ್ಥಾನದಲ್ಲಿ ಬಿಜೆಪಿಗೆ ಹಿನ್ನಡೆ, ಪಕ್ಷ ತೊರೆದ ಜಸ್ವಂತ್ ಸಿಂಗ್ ಪುತ್ರ
ಇವೆಲ್ಲ ಗಮನಿಸುವವರಿಗೆ ತುಂಬ ಸ್ಪಷ್ಟವಾಗಿ ಗೋಚರಿಸುವುದೇನೆಂದರೆ, ಅಮಿತ್ ಶಾ ಹಾಗೂ ವಸುಂಧರಾ ರಾಜೇ ಮಧ್ಯೆ ಅಸಮಾಧಾನ ಧುಮುಧುಮು ಎನ್ನುತ್ತಿದೆ. ವಸುಂಧರಾ ರಾಜೇ ಪಕ್ಷದ ಹಿರಿಯರಾದ ಎಲ್.ಕೆ.ಅಡ್ವಾಣಿ ಅವರಿಗೆ ಆಪ್ತೆ. ಕಳೆದ ಏಪ್ರಿಲ್ ನಲ್ಲಿ ಅಶೋಕ್ ಪರ್ಣಮಿ ರಾಜೀನಾಮೆ ನೀಡಿದರು. ಆ ಮೇಲೆ ರಾಜಸ್ತಾನದ ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರವಾಗಿ ಕೇಂದ್ರ ನಾಯಕತ್ವದ ಜತೆಗೆ ವಸುಂಧರಾ ರಾಜೇಗೆ ತಿಕ್ಕಾಟ ಇತ್ತು.
ಕಾಂಗ್ರೆಸ್ ಎರಚಿದ ಕೆಸರಿನಲ್ಲಿ ಕಮಲ ಅರಳಿ ಹೊಳೆಯುತ್ತಿದೆ: ಮೋದಿ
ಅಮಿತ್ ಶಾ ಸೂಚಿಸಿದ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ರನ್ನು ಒಪ್ಪಲು ರಾಜೇ ಸಿದ್ಧರಿರಲಿಲ್ಲ. ಎರಡು ತಿಂಗಳ ಕಾಲ ಇದೇ ವಿಚಾರವಾಗಿ ತಿಕ್ಕಾಟ ಮುಂದುವರಿದೇ ಇತ್ತು. ಅಂತಿಮವಾಗಿ ಎರಡೂ ಕಡೆಯವರು ಒಪ್ಪುವಂಥ ಅಭ್ಯರ್ಥಿ ಮದನ್ ಲಾಲ್ ಸೈನಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಸಭೆಗಳಿಗೆ ತಲೆ ಹಾಕದ ವಸುಂಧರಾ ರಾಜೇ
ರಾಜಸ್ತಾನದಲ್ಲಿ ಅಮಿತ್ ಶಾ ಬಹಳ ಚಟುವಟಿಕೆಯಿಂದ ತೊಡಗಿಸಿಕೊಂಡಿದ್ದಾರೆ. ಕಳೆದ ಇಪ್ಪತ್ತೈದು ವರ್ಷಗಳಿಂದ ಇಲ್ಲಿ ಯಾವುದೇ ಪಕ್ಷ ಸತತ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಏರಿಲ್ಲ. ಲೆಕ್ಕವಿಲ್ಲದಷ್ಟು ಚುನಾವಣೆ ಪ್ರಚಾರ ಸಭೆಗಳಲ್ಲಿ ತೊಡಗಿರುವ ಅಮಿತ್ ಶಾ, ಬುಡುಕಟ್ಟು ಜನರು, ರೈತರು ಹಾಗೂ ಪಕ್ಷದ ಕಾರ್ಯಕರ್ತರನ್ನು ತಲುಪುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅವರ ಜತೆ ಮುಖ್ಯಮಂತ್ರಿ ವಸುಂಧರಾ ರಾಜೇ ಇಲ್ಲ. ಅಮಿತ್ ಶಾ ನಡೆಸುವ ಸಭೆಗಳಿಗೆ ಅನುಮಾನಾಸ್ಪದ ರೀತಿಯಲ್ಲಿ ವಸುಂಧರಾ ರಾಜೇ ಗೈರಾಗುತ್ತಿದ್ದಾರೆ. ಸೆಪ್ಟೆಂಬರ್ ಹದಿನಾರನೇ ತಾರೀಕು ಜೋಧ್ ಪುರದಲ್ಲಿ ಅಮಿತ್ ಶಾ ಯುವ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು. ಅಂದು ಅವರ ಜತೆಗೆ ಗಜೇಂದ್ರ ಸಿಂಗ್ ಶೇಖಾವತ್ ಇದ್ದರೆ ವಿನಾ ವಸುಂಧರಾ ರಾಜೇ ಅತ್ತ ತಲೆ ಹಾಕಲಿಲ್ಲ. ಆ ನಂತರ ಸೆಪ್ಟೆಂಬರ್ ಹದಿನೆಂಟನೇ ತಾರೀಕು ಉದಯ್ ಪುರ್ ನಲ್ಲಿ ಎಸ್ ಟಿ ಸಮ್ಮೇಳನ, ನಾಗೋರ್ ನಲ್ಲಿ ನಡೆದ ಕಿಸಾನ್ ಸಮ್ಮೇಳನದಲ್ಲಿ ರಾಜೇ ಭಾಗವಹಿಸಿರಲಿಲ್ಲ. ನಾಗೋರ್, ಅಜ್ಮೇರ್ ನಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಯಲ್ಲೂ ಮುಖ್ಯಮಂತ್ರಿ ಹಾಜರಿರಲಿಲ್ಲ.
ಮಧ್ಯಪ್ರದೇಶ, ಛತ್ತೀಸ್ ಗಢದಲ್ಲಿ ತದ್ವಿರುದ್ಧ ಪರಿಸ್ಥಿತಿ
ಆದರೆ, ರಾಜಸ್ತಾನದ ಪರಿಸ್ಥಿತಿಗೆ ಪೂರ್ತಿ ತದ್ವಿರುದ್ಧವಾಗಿ ಮಧ್ಯಪ್ರದೇಶ ಹಾಗೂ ಛತ್ತೀಸ್ ಗಢದಲ್ಲಿದೆ. ಅಲ್ಲಿ ಅಮಿತ್ ಶಾ ನಡೆಸುವ ವಿಧಾನಸಭಾ ಚುನಾವಣಾ ಪ್ರಚಾರ ಸಭೆಗಳಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ರಮಣ್ ಸಿಂಗ್ ಇಬ್ಬರೂ ತಪ್ಪದೇ ಪಾಲ್ಗೊಳ್ಳುತ್ತಿದ್ದಾರೆ. ಮೇನಲ್ಲಿ ನಡೆದ ಮಧ್ಯಪ್ರದೇಶ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅಮಿತ್ ಶಾ ಜತೆ ಚೌಹಾಣ್ ಇದ್ದರು. ಮುಖ್ಯಮಂತ್ರಿಗಳ ವಿಕಾಸ್ ಯಾತ್ರೆ ಮತ್ತು ಜನ್ ಆಶೀರ್ವಾದ್ ಯಾತ್ರೆಯಲ್ಲಿ ಅಮಿತ್ ಶಾ- ಚೌಹಾಣ್ ಜತೆಗೇ ಇದ್ದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಮಧ್ಯಪ್ರದೇಶದ ಕಾರ್ಯಕರ್ತ ಮಹಾಕುಂಭ್ ನಲ್ಲಿ ಮಾತನಾಡುವ ಸಾಧ್ಯತೆ ಇದೆ.
ಚುನಾವಣೆ ಯಾತ್ರೆಯ ಮೇಲೆ ಮಾತ್ರ ಗಮನ ಹರಿಸಲು ಸಲಹೆ
ಇನ್ನು ಛತ್ತೀಸ್ ಗಢದಲ್ಲಿ ಸೆಪ್ಟೆಂಬರ್ ನಲ್ಲಿ ಶಕ್ತಿ ಸಮ್ಮೇಳನ ಕಾರ್ಯಕ್ರಮವನ್ನು ಉದ್ದೇಶಿಸಿ ರಮಣ್ ಸಿಂಗ್ ಜತೆ ಸೇರಿ ಅಮಿತ್ ಶಾ ಮಾತನಾಡಿದರು. ಸಭಾಂಗಣದ ಉದ್ಘಾಟನೆ ವೇಳೆಯೂ ಇಬ್ಬರೂ ಒಟ್ಟಿಗಿದ್ದರು. ಇದರ ಜತೆಗೆ ಹಲವು ಕಾರ್ಯಕ್ರಮಗಳ ಉದ್ಘಾಟನೆ ವೇಳೆಯೂ ಇಬ್ಬರೂ ಜತೆಗಿದ್ದರು. ವಸುಂಧರಾ ರಾಜೇ ಅವರ ಚುನಾವಣೆ ಯಾತ್ರೆ ಉದ್ಘಾಟನೆ ವೇಳೆ ಅಮಿತ್ ಶಾ ಇದ್ದರು. ಉಳಿದಂತೆ ಬಿಜೆಪಿ ರಾಷ್ಟ್ರಾಧ್ಯಕ್ಷರ ಕಾರ್ಯಕ್ರಮಗಳಲ್ಲಿ ವಸುಂಧರಾ ರಾಜೇ ಗೈರಾಗಿದ್ದದ್ದು ಎದ್ದು ಕಾಣುತ್ತಿತ್ತು. ರಾಜಸ್ತಾನದಲ್ಲಿ ಸಭೆಗಳು ನಡೆಯುವಾಗ ಜತೆಗೆ ಇರುವುದಾಗಿ ವಸುಂಧರಾ ರಾಜೇ ಹೇಳಿದರೂ ಅಮಿತ್ ಶಾ, ಚುನಾವಣೆ ಯಾತ್ರೆ ಮೇಲೆ ನಿಮ್ಮ ಗಮನ ಹರಿಸಿ ಎಂದಿದ್ದಾರೆ ಎನ್ನುತ್ತವೆ ಪಕ್ಷದ ಮೂಲಗಳು. ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಭಾಗದಲ್ಲಿ ನಡೆಯುವ ಸಭೆ-ಕಾರ್ಯಕ್ರಮಗಳಲ್ಲಿ ಒಬ್ಬರನ್ನೊಬ್ಬರು ಎದುರುಬದರಾಗದಂತೆ ರೂಪಿಸಲಾಗಿದೆ ಎಂದು ಬಿಜೆಪಿ ನಾಯಕರು ಹೇಳುತ್ತಾರೆ.
ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನವಿದೆ
ವಸುಂಧರಾ ರಾಜೇ ವಿರುದ್ಧ ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನ ಇದೆ. ಆದ್ದರಿಂದಲೇ ಶಕ್ತಿ ಕೇಂದ್ರಗಳು ಮತ್ತು ಪಕ್ಷದ ಕಾರ್ಯಕರ್ತರ ಸಮ್ಮೇಳನದಲ್ಲಿ ಅಮಿತ್ ಶಾ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕರು ಹೇಳುತ್ತಾರೆ. ಒಂದು ವೇಳೆ ವಸುಂಧರಾ ರಾಜೇ ತುಂಬ ಸಕ್ರಿಯರಾಗಿ ಕಾಣಿಸಿಕೊಂಡರೆ ಕಾರ್ಯಕರ್ತರನ್ನು ಉತ್ತೇಜಿಸಲು ವಿಫಲರಾಗಬಹುದು. ಜತೆಗೆ ಮುಖ್ಯಮಂತ್ರಿ ಹಾಗೂ ರಾಷ್ಟ್ರಾಧ್ಯಕ್ಷರ ಮಧ್ಯೆ ಇರುವ ಭಿನ್ನಾಭಿಪ್ರಾಯ ಕೂಡ ಅಷ್ಟರ ಮಟ್ಟಿಗೆ ಬಯಲಾಗದಂತೆ ಆಗುತ್ತದೆ ಎಂದು ಪಕ್ಷದ ನಾಯಕರು ಅಭಿಪ್ರಾಯ ಪಡುತ್ತಾರೆ.