ಹಿಂದಿ ಹೇರಿಕೆ ಬಗ್ಗೆ ಹೇಳಿಯೇ ಇಲ್ಲ: ಅಮಿತ್ ಶಾ ಸ್ಪಷ್ಟನೆ
ರಾಂಚಿ, ಸೆಪ್ಟೆಂಬರ್ 18: ಒಂದು ದೇಶ, ಒಂದು ಭಾಷೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ನೀಡಿದ್ದಾರೆ.
'ತಾಯ್ನುಡಿ ಎಂದರೆ ಹಿಂದಿ ಎಂದರ್ಥವಲ್ಲ. ಪ್ರತಿ ರಾಜ್ಯಕ್ಕೂ ಅದರದ್ದೇ ಭಾಷೆಯಿದೆ. ನನ್ನ ರಾಜ್ಯದಲ್ಲಿ ಗುಜರಾತಿ ಇದ್ದಂತೆ. ಆದರೆ ದೇಶದಲ್ಲಿ ಒಂದು ಭಾಷೆ ಎನ್ನುವುದು ಇರಬೇಕು. ಯಾರಾದರೂ ಇನ್ನೊಂದು ಭಾಷೆ ಕಲಿಯಲು ಬಯಸಿದರೆ ಅದು ಹಿಂದಿಯಾಗಿರಬೇಕು' ಎಂದು ಅಮಿತ್ ಶಾ ಹೇಳಿದರು.
ಒಂದು ದೇಶ, ಒಂದೇ ಭಾಷೆ: ಅಮಿತ್ ಶಾ ವಿವಾದ
'ನಾನು ಕೇವಲ ಮನವಿಯನ್ನಷ್ಟೇ ಮಾಡಿದ್ದೆ. ಅದರಲ್ಲಿ ಯಾವುದು ತಪ್ಪಾಯಿತು ಎನ್ನುವುದನ್ನು ಅರ್ಥಮಾಡಿಕೊಳ್ಳುವುದರಲ್ಲಿ ನಾನು ವಿಫಲನಾಗಿದ್ದೇನೆ' ಎಂದು ಅಮಿತ್ ಶಾ ಹೇಳಿದರು.
ಜಾರ್ಖಂಡ್ನ ರಾಂಚಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿ ದಿವಸ್ ವೇಳೆ ತಾವು ನೀಡಿದ ಹೇಳಿಕೆಯಿಂದ ವಿವಾದ ಹೊತ್ತಿಕೊಂಡಿರುವುದಕ್ಕೆ ಸ್ಪಷ್ಟೀಕರಣ ನೀಡಿದರು. ಹಿಂದಿ ಹೇರಿಕೆಗೆ ತಾವು ಪ್ರತಿಪಾದಿಸಿಯೇ ಇಲ್ಲ, ಆದರೆ ಎರಡನೆಯ ಭಾಷೆಯ ಬಗ್ಗೆ ಒಲವು ವ್ಯಕ್ತಪಡಿಸಿದ್ದಾಗಿ ಹೇಳಿದರು.
ರಾಜಕೀಯ ಮಾಡುವುದು ಅವರಿಷ್ಟ
'ನಾನೂ ಕೂಡ ಹಿಂದಿಯೇತರ ಭಾಷೆ ಮಾತನಾಡುವ ರಾಜ್ಯದಿಂದ ಬಂದಿದ್ದೇನೆ. ನಾನು ಗುಜರಾತ್ನಿಂದ ಬಂದಿರುವುದು. ಅಲ್ಲಿ ಗುಜರಾತಿ ಮಾತೃಭಾಷೆಯೇ ವಿನಾ ಹಿಂದಿಯಲ್ಲ. ನನ್ನ ಭಾಷಣವನ್ನು ನೀವು ಸೂಕ್ಷ್ಮವಾಗಿ ಕೇಳಿಸಿಕೊಳ್ಳಬೇಕು. ಯಾರಾದರೂ ಇದರಲ್ಲಿ ರಾಜಕೀಯ ಮಾಡಬೇಕು ಎಂದುಕೊಂಡಿದ್ದರೆ ಅದು ಅವರ ಆಯ್ಕೆ' ಎಂದು ಪ್ರತಿಕ್ರಿಯಿಸಿದರು.
ಮಾತೃಭಾಷೆಯಿಂದ ಬೆಳವಣಿಗೆ ಸಾಧ್ಯ
'ಮಗುವೊಂದು ತನ್ನ ಮಾತೃಭಾಷೆಯಲ್ಲಿ ಅಭ್ಯಾಸ ಮಾಡಿದಾಗ ಮಾತ್ರ ಅದರ ಸೂಕ್ತ ಮಾನಸಿಕ ಬೆಳವಣಿಗೆ ಮತ್ತು ಉತ್ತಮ ಪ್ರಗತಿ ಸಾಧ್ಯ. ಮಾತೃಭಾಷೆ ಎಂದರೆ ಹಿಂದಿ ಎಂದರ್ಥವಲ್ಲ. ಅದು ಸಂಬಂಧಿಸಿದ ರಾಜ್ಯದ ಭಾಷೆ. ನನ್ನ ರಾಜ್ಯ ಗುಜರಾತ್ನಂತೆ. ಆದರೆ ದೇಶದಲ್ಲಿ ಒಂದು ಭಾಷೆ ಇರಬೇಕು. ಯಾರಾದರೂ ಇನ್ನೊಂದು ಭಾಷೆಯನ್ನು ಕಲಿಯಬೇಕು ಎಂದು ಬಯಸಿದರೆ ಅದು ಹಿಂದಿಯಾಗಬೇಕು' ಎಂದರು.
ಹಿಂದಿ ಹೇರಿಕೆ: ಯಡಿಯೂರಪ್ಪ ಹೇಳಿಕೆಗೆ ಅಮಿತ್ ಶಾ ಚೆಕ್ ಮೇಟ್!
ದೇಶವನ್ನು ಒಂದುಗೂಡಿಸುವ ಭಾಷೆ
'ಪ್ರತಿಭಾಷೆಯೂ ತನ್ನದೇ ಆದ ಮಹತ್ವ ಹೊಂದಿವೆ. ಆದರೆ ಜಾಗತಿಕ ಮಟ್ಟದಲ್ಲಿ ದೇಶದ ಅಸ್ಮಿತೆಯಾಗಿ ಇಡೀ ದೇಶಕ್ಕೆ ಒಂದು ಭಾಷೆ ಇರುವುದು ಅಗತ್ಯವಾಗಿದೆ. ಯಾವುದಾದರೂ ಒಂದು ಭಾಷೆ ಇಡೀ ದೇಶವನ್ನು ಒಂದುಗೂಡಿಸುತ್ತದೆ ಎಂದಾದರೆ ಅದು ಅತಿ ಹೆಚ್ಚು ಜನರು ಮಾತನಾಡುವ ಹಿಂದಿ' ಎಂದು ಅಮಿತ್ ಶಾ ಅವರು ಹೇಳಿದ್ದರು.
ಅಮಿತ್ ಶಾ ಹೇಳಿಕೆಗೆ ವಿರೋಧ
ಅಮಿತ್ ಶಾ ಅವರ ಹೇಳಿಕೆ ಭಾರಿ ವಿವಾದ ಸೃಷ್ಟಿಸಿತ್ತು. ಅತಿ ಹೆಚ್ಚು ಜನರು ಮಾತನಾಡುವ ಭಾಷೆ ಎಂಬ ಕಾರಣಕ್ಕೆ ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡಬೇಕು ಎಂಬ ಅಭಿಪ್ರಾಯಕ್ಕೆ ವಿರೋಧ ವ್ಯಕ್ತವಾಗಿತ್ತು. ವೈವಿಧ್ಯದಲ್ಲಿ ಏಕತೆ ಭಾರತದ ಹೆಗ್ಗುರುತು. ಹೀಗಿರುವಾಗ ಹಿಂದಿಯ ಬಳಕೆಯನ್ನು ಹೆಚ್ಚಿಸುವ ನೆಪದಲ್ಲಿ ಪ್ರಾದೇಶಿಕ ಭಾಷೆಗಳ ಮೇಲೆ ಪ್ರಹಾರ ನಡೆಸುವುದು ಸರಿಯಲ್ಲ ಎಂದು ಖಂಡಿಸಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಕರ್ನಾಟಕದಲ್ಲಿ ಕನ್ನಡವೇ ಪ್ರಧಾನ ಭಾಷೆ. ಅದರ ಮಹತ್ವದ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದಿದ್ದರು.