ಕರ್ಣಿ ಸೇನಾ ಏಟಿಗೆ ಡಿ.1 ಬಿಟ್ಟು ಮುಂದೆ ಓಡಿದ ‘ಪದ್ಮಾವತಿ’
ಮುಂಬೈ, ನವೆಂಬರ್ 20 : ತೀವ್ರ ವಿವಾದಕ್ಕೆ ಗುರಿಯಾಗಿರುವ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಹಿಂದಿ ಚಿತ್ರ ಬಿಡುಗಡೆ ದಿನಾಂಕವನ್ನು ಚಿತ್ರ ತಂಡ ಮುಂದೂಡಿದೆ.
'ಶೂರ್ಪನಕಿ ಮೂಗು ಕತ್ತರಿಸಿದ ಹಾಗೆ ದೀಪಿಕಾಳ ಮೂಗು ಕತ್ತರಿಸುತ್ತೇವೆ'
ಪದ್ಮಾವತಿ ಚಿತ್ರ ಬಿಡುಗಡೆಗೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿರುವುದರಿಂದ ಸದ್ಯದ ಬಿಡುಗಡೆಯನ್ನು ಮುಂದೂಡಿದೆ. ಈ ಹಿಂದೆ ಡಿಸೆಂಬರ್ 1ರಂದು ಚಿತ್ರವನ್ನು ಬಿಡುಗಡೆ ಮಾಡಲು ದಿನಾಂಕ ನಿಗದಿಯಾಗಿತ್ತು.
ಡಿಸೆಂಬರ್ 1ರಂದು ಪದ್ಮಾವತಿ ಚಿತ್ರ ಬಿಡುಗಡೆ ದಿನದಂದು ದೇಶಾದ್ಯಂತ ಬೃಹತ್ ಪ್ರತಿಭಟನೆ ಮಾಡುವುದಾಗಿಯೂ ಕರ್ಣಿ ಸೇನಾ ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲದೇ ಪದ್ಮಾವತಿ ಚಿತ್ರ ತಂಡ ಸೆನ್ಸಾರ್ ಮಂಡಳಿಗೆ ಕಳುಹಿಸಿದ ಅರ್ಜಿ ಅಪೂರ್ಣವಾಗಿದೆ ಎಂದು ಮಂಡಳಿ ವಾಪಸ್ ಕಳುಹಿಸಿದೆ.
ಇವೆಲ್ಲವುಗಳ ವಿಘ್ನದಿಂದಾಗಿ ಚಿತ್ರ ಬಿಡುಗಡೆಯನ್ನು ಮುಂದೂಡಲಾಗಿದ್ದು, ಬಿಡುಗಡೆ ದಿನಾಂಕವನ್ನು ಚಿತ್ರ ತಂಡ ಪ್ರಕಟಿಸಿಲ್ಲ.
ಪದ್ಮಾವತಿ ಚಲನಚಿತ್ರದಲ್ಲಿ ರಜಪೂತರನ್ನು ಕೀಳಾಗಿ ತೋರಿಸಲಾಗಿದೆ. ಪದ್ಮಾವತಿ ಚಿತ್ರದಲ್ಲಿರುವ ದೀಪಿಕಾ ಪಡುಕೋಣೆಯವರು ಮಾಡಿರುವ ನೃತ್ಯವನ್ನು ಕೈಬಿಡಬೇಕು. ಹಿಂದಿನ ರಜಪೂತ ಇತಿಹಾಸವನ್ನು ನೋಡಿದಾಗ ರಾಣಿ ಪದ್ಮಿನಿಯವರು ಸಖಿಯರು ಮಾಡುವ ನೃತ್ಯವನ್ನು ವೀಕ್ಷಿಸುತ್ತಿರೇ ವಿನಃ ತಾವು ನೃತ್ಯ ಮಾಡುತ್ತಿರಲಿಲ್ಲ. ಇದು ರಜಪೂತ ಇತಿಹಾಸಕ್ಕೆ ಕಳಂಕ ತರುವಂತಿದೆ ಎಂದು ರಜಪೂತ ಕರ್ಣಿ ಸೇನೆ ಆಕ್ರೋಶ ವ್ಯಕ್ತಪಡಿಸಿದೆ.