ಫೆಬ್ರವರಿ.25ರಂದು ಪುದುಚೇರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ಪುದುಚೇರಿ, ಫೆಬ್ರವರಿ.19: ವಿಧಾನಸಭಾ ಚುನಾವಣೆ ನಡೆಯಲಿರುವ ಪುದುಚೇರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಫೆಬ್ರವರಿ.25ರಂದು ಭೇಟಿ ನೀಡಲಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ ರಾಜ್ಯ ಘಟಕ ತಿಳಿಸಿದೆ.
ಪುದುಚೇರಿಯ ಎಎಫ್ ಟಿ ಮಿಲ್ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಕಾರ್ಯಕ್ರಮಗಳನ್ನು ಅಂತಿಮಗೊಳಿಸಿಲ್ಲ ಎಂದು ಬಿಜೆಪಿಯ ಪುದುಚೇರಿ ರಾಜ್ಯಾಧ್ಯಕ್ಷ ವಿ. ಸಾಮಿನಾಥನ್ ತಿಳಿಸಿದ್ದಾರೆ.
ಆರೋಪವನ್ನು ಹೊಗಳಿಕೆ ಎಂದು ರಾಹುಲ್ಗೆ ಹೇಳಿದ ಸಿಎಂ!
2018 ಫೆಬ್ರವರಿಯಿಂದ ಈವರೆಗೂ ಪುದುಚೇರಿ ಕೇಂದ್ರಾಡಳಿತ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಎರಡನೇ ಬಾರಿ ಭೇಟಿ ನೀಡಲಿದ್ದಾರೆ. ಕೇಂದ್ರಾಡಳಿತ ಪ್ರದೇಶದಲ್ಲಿ ಸರ್ಕಾರಕ್ಕೆ ಪತನ ಭೀತಿ ಎದುರಾಗಿರುವ ಸಂದರ್ಭದಲ್ಲಿ ಪ್ರಧಾನಿ ಭೇಟಿ ಕುತೂಹಲ ಕೆರಳಿಸಿದೆ.
ಪುದುಚೇರಿಯಲ್ಲಿ ರಾಜಕೀಯ ಬಿಕ್ಕಟ್ಟು:
ಪುದುಚೇರಿ ಮುಖ್ಯಮಂತ್ರಿ ನಾರಾಯಣಸಾಮಿ ಅವರು ಫೆಬ್ರವರಿ.22ರ ಸಂಜೆ 5 ಗಂಟೆಗೆ ವಿಶ್ವಾಸ ಮತಯಾಚನೆ ನಡೆಸುವಂತೆ ಲೆಫ್ಟಿನೆಂಟ್ ಗವರ್ನರ್ ಡಾ. ತಮಿಳುಸಾಯಿ ಸುಂದರ್ ರಾಜನ್ ಈಗಾಗಲೇ ಆದೇಶಿಸಿದ್ದಾರೆ. ಈ ಬಗ್ಗೆ ಹಿನ್ನೆಲೆ ಪಕ್ಷದ ಶಾಸಕರ ಜೊತೆಗೆ ಒಂದು ಸುತ್ತಿನ ಸಭೆ ನಡೆಸಲಾಗಿದೆ. ವಿಶ್ವಾಸ ಮತಯಾಚನೆ ಬಗ್ಗೆ ಪಕ್ಷದ ಶಾಸಕರೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆಯಾದರೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ನಮ್ಮ ಮಿತ್ರಪಕ್ಷ ಡಿಎಂಕೆ ಜೊತೆಗೂ ಸಂಪರ್ಕದಲ್ಲಿದ್ದೇವೆ. ಫೆಬ್ರವರಿ.21ರಂದು ಮತ್ತೊಂದು ಸುತ್ತಿನ ಚರ್ಚೆ ನಡೆಸಿ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ನಾರಾಯಣಸಾಮಿ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಸದಸ್ಯ ಬಲದ ಲೆಕ್ಕಾಚಾರ:
ಕಾಂಗ್ರೆಸ್ ಶಾಸಕ ನೀಡಿದ ರಾಜೀನಾಮೆಯಿಂದ ಚುನಾವಣೆ ಹೊಸ್ತಿಲಿನಲ್ಲೇ ಸರ್ಕಾರಕ್ಕೆ ಮತ್ತೊಂದು ಆಘಾತ ನೀಡಿದಂತಾಗಿದೆ. ಸರ್ಕಾರವು ಅಲ್ಪಮತಕ್ಕೆ ಕುಸಿಯುವ ಆತಂಕ ಎದುರಾಗಿದೆ. 30 ಶಾಸಕ ಸ್ಥಾನ ಬಲವಿರುವ ವಿಧಾನಸಭೆಯಲ್ಲಿ ಕಾಂಗ್ರೆಸ್ 11, ಡಿಎಂಕೆ 3 ಮತ್ತು ಒಬ್ಬ ಪಕ್ಷೇತರ ಶಾಸಕನ ಬೆಂಬಲದಿಂದ ಸರ್ಕಾರ ರಚಿಸಲಾಗಿತ್ತು. ವಿರೋಧ ಪಕ್ಷವಾಗಿ ಎನ್ ಆರ್ ಕಾಂಗ್ರೆಸ್ 7, ಎಐಎಡಿಎಂಕೆ 4 ಮತ್ತು ಬಿಜೆಪಿಯ ಮೂವರು ನಾಮನಿರ್ದೇಶಿತ ಶಾಸಕರಿದ್ದು, 14 ಸದಸ್ಯ ಬಲವನ್ನು ಹೊಂದಿದೆ.