ಪುದುಚೇರಿ ಸರ್ಕಾರದ ಬಿಕ್ಕಟ್ಟಿನ ನಡುವೆ ರಾಜ್ಯಪಾಲೆ ಕಿರಣ್ ಬೇಡಿ ವಜಾ!
ಪುದುಚೇರಿ, ಫೆಬ್ರವರಿ.16: ಪುದುಚೇರಿಯಲ್ಲಿ ಸರ್ಕಾರದ ಬಿಕ್ಕಟ್ಟಿನ ನಡುವೆ ಲೆಫ್ಟನೆಂಟ್ ಗವರ್ನರ್ ಕಿರಣ್ ಬೇಡಿ ಅವರನ್ನು ತೆಗೆದು ಹಾಕಿರುವ ಬಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ತೆಲಂಗಾಣ ರಾಜ್ಯಪಾಲ ಡಾ. ತಮಿಳುಸಾಯಿ ಸುಂದರ್ ರಾಜನ್ ಅವರಿಗೆ ಹೆಚ್ಚುವರಿ ಹೊಣೆಯನ್ನು ವಹಿಸಲಾಗಿದೆ.
ಲೆಫ್ಟಿನೆಂಟ್ ಗವರ್ನರ್ ಡಾ.ಕಿರಣ್ ಬೇಡಿಯವರ ಅಧಿಕಾರವನ್ನು ತಡೆ ಹಿಡಿಯುವ ಬಗ್ಗೆ ನಿರ್ದೇಶನ ನೀಡಲಾಗಿದೆ. ಪುದುಚೇರಿಯ ಕಾರ್ಯಗಳನ್ನು ನೋಡಿಕೊಳ್ಳುವುದಕ್ಕಾಗಿ ರಾಜ್ಯಪಾಲ ಡಾ. ತಮಿಳುಸಾಯಿ ಸುಂದರ್ ರಾಜನ್ ಅವರನ್ನು ನೇಮಿಸಲಾಗಿದೆ.
ಪುದುಚೇರಿಯಲ್ಲಿ ಸರ್ಕಾರಕ್ಕೆ ಎದುರಾದ ಪತನದ ಭೀತಿ!
ಪುದುಚೇರಿಯಲ್ಲಿ ಸರ್ಕಾರವು ಬಹುಮತ ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿರುವ ಕೆಲವು ಗಂಟೆಗಳಲ್ಲೇ ಈ ಬೆಳವಣಿಗೆ ನಡೆದಿದೆ. ಮತ್ತೊಂದು ಕಡೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಬಹುಮತ ಕಳೆದುಕೊಂಡಿದ್ದು ಮುಖ್ಯಮಂತ್ರಿ ವಿ ನಾರಾಯಣಸ್ವಾಮಿ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ.
ಪುದುಚೇರಿಯಲ್ಲಿ ಸರ್ಕಾರ ಪತನ ಭೀತಿ:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಇಬ್ಬರು ಸಚಿವರು ಮತ್ತು ನಾಲ್ವರು ಶಾಸಕರು ರಾಜೀನಾಮೆ ಸಲ್ಲಿಸಿದ ನಂತರವೂ ಮುಖ್ಯಮಂತ್ರಿ ನಾರಾಯಣಸ್ವಾಮಿಯವರು ಅಧಿಕಾರವನ್ನು ಆಸ್ವಾದಿಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಒಟ್ಟು 28 ಶಾಸಕರಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ 14 ಶಾಸಕರ ಬೆಂಬಲವಿದ್ದು, ವಿರೋಧ ಪಕ್ಷದಲ್ಲಿಯೂ ಬಿಜೆಪಿಯ ಮೂವರು ನಾಮನಿರ್ದೇಶಕ ಸದಸ್ಯರು ಸೇರಿದಂತೆ 14 ಮಂದಿ ಸದಸ್ಯರ ಬೆಂಬಲವಿದೆ. ಈ ಹಿನ್ನೆಲೆ ಅಲ್ಪಮತಕ್ಕೆ ಕುಸಿದ ಸರ್ಕಾರದ ಮುಖ್ಯಮಂತ್ರಿ ರಾಜೀನಾಮೆ ಸಲ್ಲಿಸಲಿ ಎಂದು ವಿರೋಧ ಪಕ್ಷದ ನಾಯಕ ರಂಗಸ್ವಾಮಿ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಸದಸ್ಯ ಬಲದ ಲೆಕ್ಕಾಚಾರ:
ಕಾಂಗ್ರೆಸ್ ಶಾಸಕ ನೀಡಿದ ರಾಜೀನಾಮೆಯಿಂದ ಚುನಾವಣೆ ಹೊಸ್ತಿಲಿನಲ್ಲೇ ಸರ್ಕಾರಕ್ಕೆ ಮತ್ತೊಂದು ಆಘಾತ ನೀಡಿದಂತಾಗಿದೆ. ಸರ್ಕಾರವು ಅಲ್ಪಮತಕ್ಕೆ ಕುಸಿಯುವ ಆತಂಕ ಎದುರಾಗಿದೆ. 30 ಶಾಸಕ ಸ್ಥಾನ ಬಲವಿರುವ ವಿಧಾನಸಭೆಯಲ್ಲಿ ಕಾಂಗ್ರೆಸ್ 11, ಡಿಎಂಕೆ 3 ಮತ್ತು ಒಬ್ಬ ಪಕ್ಷೇತರ ಶಾಸಕನ ಬೆಂಬಲದಿಂದ ಸರ್ಕಾರ ರಚಿಸಲಾಗಿತ್ತು. ವಿರೋಧ ಪಕ್ಷವಾಗಿ ಎನ್ ಆರ್ ಕಾಂಗ್ರೆಸ್ 7, ಎಐಎಡಿಎಂಕೆ 4 ಮತ್ತು ಬಿಜೆಪಿಯ ಮೂವರು ನಾಮನಿರ್ದೇಶಿತ ಶಾಸಕರಿದ್ದು, 14 ಸದಸ್ಯ ಬಲವನ್ನು ಹೊಂದಿದೆ.