ಕೋವಿಡ್ 19 ಸಾಂಕ್ರಾಮಿಕ ನಡುವೆ ಕುಂಭಮೇಳಕ್ಕೆ ಹರಿದ್ವಾರ ಸಜ್ಜು
ಡೆಹ್ರಾಡೂನ್, ನ .23: ಕೋವಿಡ್ 19 ಸಾಂಕ್ರಾಮಿಕ ನಡುವೆ ಹರಿದ್ವಾರದಲ್ಲಿ ಕುಂಭಮೇಳ ಯೋಜನೆ ಮಾಡಲು ಸಿದ್ಧರಾಗಿರುವುದಾಗಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದಾರೆ.
2021ರ ಜನವರಿ 14ರಿಂದ ಆರಂಭವಾಗಲಿರುವ ಕುಂಭಮೇಳದ ಸಿದ್ಧತೆ ಬಗ್ಗೆ ಮಾಹಿತಿ ಕಲೆ ಹಾಕಲು ಅಖಿಲ ಭಾರತೀಯ ಅಖಾಡ ಪರಿಷತ್ (ಎಬಿಎಪಿ) ಪದಾಧಿಕಾರಿಗಳ ಜೊತೆ ಮುಖ್ಯಮಂತ್ರಿ ರಾವತ್ ಅವರು ಸಭೆ ನಡೆಸಿದ ಬಳಿಕ ಮಾತನಾಡಿ, ಕೋವಿಡ್-19 ಪರಿಸ್ಥಿತಿ ನೋಡಿಕೊಂಡು ಕುಂಭಮೇಳ ಅವಧಿ ವಿಸ್ತರಣೆ ಬಗ್ಗೆ ನಿರ್ಧರಿಸಲಾಗುವುದು ಎಂದರು.
ಕ್ಯಾಮೆರಾ ಕಣ್ಣಿನಲ್ಲಿ ರಂಗುರಂಗಿನ ಕುಂಭಮೇಳ
ಕುಂಭಮೇಳದ ಸಿದ್ಧತೆ ಮುಂದುವರೆಸುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ, ಮುಖ್ಯ ಕಾರ್ಯದರ್ಶಿಗಳು ಮುಂದಿನ ಹದಿನೈದು ದಿನಗಳಲ್ಲಿ ಪರಿಸ್ಥಿತಿಯ ಪರಿಶೀಲನೆ ನಡೆಸಿ ವರದಿ ನೀಡಲಿದ್ದಾರೆ ಎಂದು ರಾವತ್ ಹೇಳಿದರು.
ಕುಂಭಮೇಳದ ಅಧಿಕಾರಿ ದೀಪಕ್ ರಾವತ್ ಮಾತನಾಡಿ, ಡಿಸೆಂಬರ್ 15ರೊಳಗೆ ಬಹುತೇಕ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಕೊವಿಡ್ 19 ಕುರಿತಂತೆ ಆರೋಗ್ಯ ಇಲಾಖೆ ನೀಡಿರುವ ಸೂಚನೆಯಂತೆ ಸ್ನಾನ ಘಟ್ಟಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿ ನಿತ್ಯ 35 ರಿಂದ 50 ಲಕ್ಷ ಭಕ್ತಾದಿಗಳು ಗಂಗಾ ನದಿಯಲ್ಲಿ ಪವಿತ್ರಸ್ನಾನ ಕೈಗೊಳ್ಳುವ ನಿರೀಕ್ಷೆಯಿದೆ ಎಂದರು.
ಕುಡಿಯುವ ನೀರಿನ ಸೌಲಭ್ಯ, ವಾಹನ ನಿಲುಗಡೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ನಿಗದಿಯಂತೆ ಪೂರ್ಣಗೊಳಿಸಲಾಗುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಮದನ್ ಕೌಶಿಕ್ ಹೇಳಿದರು. ಸರ್ಕಾರಕ್ಕೆ ಸಂಘಟನೆಯಿಂದ ಸೂಕ್ತ ನೆರವು ನೀಡಲಾಗುತಿದೆ ಎಂದು ಎಬಿಎಪಿ ಮುಖಂಡ ಮಹಾಂತ ನರೇಂದ್ರ ಗಿರಿ ಅವರು ಹೇಳಿದರು.