ಹರಿದ್ವಾರದಲ್ಲಿ ಕೊರೊನಾ ಕಾಟ; ಕಡಿಮೆಯಾಗುತ್ತಾ ಕುಂಭಮೇಳದ ಅವಧಿ?
ನವದೆಹಲಿ, ಏಪ್ರಿಲ್ 15: ಕೊರೊನಾವೈರಸ್ ಎರಡನೇ ಅಲೆ ನಡುವೆ ನಡೆಯುತ್ತಿರುವ ಕುಂಭಮೇಳದಿಂದ ಸೋಂಕಿನ ಹರಡುವಿಕೆ ಆತಂಕ ಮತ್ತಷ್ಟು ಹೆಚ್ಚಿದೆ. ಹರಿದ್ವಾರದಲ್ಲಿ ಪ್ರತಿನಿತ್ಯ ನಡೆಸುವ ಕೊವಿಡ್-19 ತಪಾಸಣೆ ಮಿತಿಯನ್ನು ತೆಗೆದು ಹಾಕುವಂತೆ ಉತ್ತರಾಖಂಡ್ ಆರೋಗ್ಯ ಕಾರ್ಯದರ್ಶಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಕಳೆದ ಮಾರ್ಚ್ 31ರಂದು ಕುಂಭ ಮೇಳ ನಡೆಯುತ್ತಿರುವ ಹರಿದ್ವಾರದಲ್ಲಿ ಪ್ರತಿನಿತ್ಯ 50,000 ಜನರಿಗೆ ಆರ್ ಟಿ-ಪಿಸಿಆರ್ ಪರೀಕ್ಷೆ ನಡೆಸುವುದಕ್ಕೆ ಹೈಕೋರ್ಟ್ ಸೂಚನೆ ನೀಡಿತ್ತು. ಈ ನಿಗದಿತ ಮಿತಿ ತೆರವುಗೊಳಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.
ಕೊರೊನಾವೈರಸ್ ಹೆಚ್ಚಿಸುವ ಆತಂಕ ಸೃಷ್ಟಿಸಿದ ಕುಂಭಮೇಳ!
ಹರಿದ್ವಾರದಲ್ಲಿ ಪ್ರಮುಖವಾಗಿ ಪುಣ್ಯಸ್ನಾನ ಮಾಡುವ ಸಂದರ್ಭಗಳಲ್ಲಿ ಕೊರೊನಾವೈರಸ್ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡುವಂತೆ ಸೂಚಿಸಲಾಗಿತ್ತು. ಸ್ಥಳೀಯ ಆಡಳಿತ ಅಧಿಕಾರಿಗಳು ಪ್ರತಿನಿತ್ಯ 39000 ಜನರಿಗೆ ಕೊವಿಡ್-19 ಸೋಂಕಿನ ಆರ್ ಟಿ-ಪಿಸಿಆರ್ ಪರೀಕ್ಷೆ ನಡೆಸುತ್ತಿದ್ದಾರೆ. ಪುಣ್ಯಸ್ನಾನಕ್ಕೆ ಆಗಮಿಸುವ ತುಂಬಿದ ಜನಸಂಖ್ಯೆಯ ನಡುವೆ 50000 ಜನರಿಗೆ ಕೊವಿಡ್-19 ಪರೀಕ್ಷೆ ನಡೆಸುವುದು ಕಷ್ಟಸಾಧ್ಯವಾಗುತ್ತಿದೆ ಎಂದು ಆರೋಗ್ಯ ಕಾರ್ಯದರ್ಶಿ ಅಮಿತ್ ನೇಗಿ ಅವರು ಹೈಕೋರ್ಟ್ ಗೆ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಹರಿದ್ವಾರದಲ್ಲಿ ಒಂದೇ ದಿನ 525 ಮಂದಿಗೆ ಕೊರೊನಾ:
ಬುಧವಾರ ಒಂದೇ ದಿನ ಹರಿದ್ವಾರದಲ್ಲಿ 525 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಹರಿದ್ವಾರದಲ್ಲಿ ಕಳೆದ ಐದು ದಿನಗಳಲ್ಲಿ 2167 ಜನರಿಗೆ ಸೋಂಕು ಪತ್ತೆಯಾಗಿದೆ.
ಹರಿದ್ವಾರದಲ್ಲಿ ಏಪ್ರಿಲ್ 14ರಂದು ಲಕ್ಷಾಂತರ ಜನರು ಶಾಹಿ ಸ್ನಾನ್(ಪುಣ್ಯ ಸ್ನಾನ) ಮಾಡಿದರು. ಸೋಮವಾರದ ಅಂಕಿ-ಅಂಶಗಳಿಗೆ ಹೋಲಿಸಿ ನೋಡಿದರೆ ಈವರೆಗೂ 32 ಲಕ್ಷ ಭಕ್ತಾದಿಗಳು ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಬುಧವಾರವೊಂದೇ ದಿನ 9 ಲಕ್ಷ ಜನರು ಗಂಗೆಯಲ್ಲಿ ಮಿಂದೆದಿದ್ದಾರೆ ಎಂದು ಆಡಳಿತ ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕುಂಭ ಮೇಳದ ಅವಧಿ ಕಡಿತದ ಬಗ್ಗೆ ಮಾಹಿತಿಯಿಲ್ಲ:
ಹರಿದ್ವಾರದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಏರಿಕೆ ಆಗುತ್ತಿದ್ದರೂ ಏಪ್ರಿಲ್ 27 ಮತ್ತು ಏಪ್ರಿಲ್ 30ರವರೆಗೂ ಶಾಹಿ ಸ್ನಾನ್ ಮುಂದುವರಿಸಲಾಗುವುದು. ಕುಂಭಮೇಳದ ಅವಧಿಯನ್ನು ಕಡಿತಗೊಳಿಸುವ ಬಗ್ಗೆ ಸರ್ಕಾರದಿಂದ ಯಾವುದೇ ರೀತಿ ಅಧಿಸೂಚನೆ ಬಂದಿಲ್ಲ ಎಂದು ಕುಂಭಮೇಳದ ಅಧಿಕಾರಿ ದೀಪಕ್ ರಾವತ್ ತಿಳಿಸಿದ್ದಾರೆ. 12 ವರ್ಷಗಳಿಗೆ ಒಂದು ಬಾರಿ ನಡೆಯುವ ಕುಂಭಮೇಳವು ಸಾಮಾನ್ಯವಾಗಿ 4 ತಿಂಗಳವರೆಗೂ ನಡೆಯುತ್ತದೆ. ಆದರೆ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಏಪ್ರಿಲ್ 1 ರಿಂದ 30ರವರೆಗೂ ಮಾತ್ರ ಕುಂಭಮೇಳ ನಡೆಸುವುದಕ್ಕೆ ಅನುಮತಿ ನೀಡಲಾಗಿದೆ.