ಕೊರೊನಾ ಭಯ; ಈ ವರ್ಷವೂ ಅಮರನಾಥ ಯಾತ್ರೆ ರದ್ದು
ನವದೆಹಲಿ, ಜೂನ್ 21: ಜಮ್ಮು ಹಾಗೂ ಕಾಶ್ಮೀರ ಆಡಳಿತ ಈ ಬಾರಿಯೂ ಅಮರನಾಥ ಯಾತ್ರೆಯನ್ನು ರದ್ದುಪಡಿಸಿದ್ದು, ಕೊರೊನಾ ಸೋಂಕಿನ ಕಾರಣವಾಗಿ ಸತತ ಎರಡನೇ ಬಾರಿ ಯಾತ್ರೆ ರದ್ದಾಗುತ್ತಿದೆ.
ಕೊರೊನಾ ಸೋಂಕಿನ ಪ್ರಭಾವದ ಕಾರಣ ಹಾಗೂ ಮೂರನೇ ಅಲೆಯ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಮರನಾಥ ಯಾತ್ರೆಯನ್ನು ಈ ಬಾರಿ ರದ್ದುಗೊಳಿಸಿರುವುದಾಗಿ ಶ್ರೀ ಅಮರನಾಥಜಿ ದೇಗುಲ ಮಂಡಳಿ ಸೋಮವಾರ ಘೋಷಣೆ ಮಾಡಿದೆ. ಆದರೆ ಸಾಂಕೇತಿಕವಾಗಿ ಯಾತ್ರೆ ನಡೆಸಲಾಗುವುದು ಎಂದು ಹೇಳಿದೆ.
ಅಮರನಾಥ ಯಾತ್ರೆಯ ನೋಂದಣಿ ಪ್ರಕ್ರಿಯೆ ತಾತ್ಕಾಲಿಕ ಸ್ಥಗಿತ
"ಈ ಸಮಯದಲ್ಲಿ ಜನರ ಜೀವ ಮುಖ್ಯವಾಗಿದೆ. ಹೀಗಾಗಿ ಯಾತ್ರೆ ರದ್ದುಗೊಳಿಸಲಾಗಿದೆ. ಭಕ್ತರಿಗೆ ಆನ್ಲೈನ್ ಮುಖಾಂತರ ಆರತಿಯ ದರ್ಶನ ಲಭ್ಯವಿರಲಿದೆ" ಎಂದು ಜಮ್ಮು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ತಿಳಿಸಿದ್ದಾರೆ. ದೇಗುಲ ಮಂಡಳಿಯೊಂದಿಗೆ ಚರ್ಚಿಸಿ ಈ ತೀರ್ಮಾನ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಈ ಬಾರಿ ಜೂನ್ 28ರಿಂದ ಪಹಲ್ಗಮ್ ಹಾಗೂ ಬಾಲ್ಟಾಲ್ ಮಾರ್ಗಗಳ ಮೂಲಕ ಯಾತ್ರೆ ಪ್ರಾರಂಭವಾಗಬೇಕಿತ್ತು. 56 ದಿನಗಳ ಈ ಯಾತ್ರೆ ಆಗಸ್ಟ್ ತಿಂಗಳಿನಲ್ಲಿ ಮುಕ್ತಾಯವಾಗಬೇಕಿತ್ತು. 2020ರಲ್ಲಿ ಕೂಡ ಅಮರನಾಥ ಯಾತ್ರೆಯನ್ನು ರದ್ದುಗೊಳಿಸಲಾಗಿತ್ತು.