ಉಗ್ರರ ದಾಳಿ ಬಗ್ಗೆ ಐಬಿ ನೀಡಿತ್ತು ಮಹತ್ವದ ಸುಳಿವು
ಶ್ರೀನಗರ, ಜುಲೈ 10: ಅಮರನಾಥ ಯಾತ್ರಿಗಳ ಮೇಲೆ ಉಗ್ರರು ದಾಳಿ ನಡೆಸುವ ಸಂಚು ರೂಪಿಸಿರುವ ಕುರಿತು ಗುಪ್ತಚರ ದಳ ಈ ಹಿಂದೆಯೇ ಮಾಹಿತಿ ರವಾನಿಸಿತ್ತು. ಈ ನಿಟ್ಟಿನಲ್ಲಿ ಯಾತ್ರಾರ್ಥಿಗಳ ಸುರಕ್ಷತೆಗಾಗಿ ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿತ್ತು. ಸೋಮವಾರ(ಜುಲೈ 10) ರಾತ್ರಿಯ ದಾಳಿಗೆ ವಾಹನ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ತಿಳಿದು ಬಂದಿದೆ.
ಅನಂತನಾಗ್ ಜಿಲ್ಲೆಯ ಪಹಲ್ ಗಾಂವ್ ಮತ್ತು ಬಲ್ತಾಲ್ ಮೂಲ ಶಿಬಿರದಿಂದ 40 ದಿನಗಳ ಅಮರನಾಥ ಯಾತ್ರೆ ಜೂನ್ 28ರಂದು ಆರಂಭವಾದ ಬೆನ್ನಲ್ಲೇ ಉಗ್ರರ ದಾಳಿಯ ಸುಳಿವು ನೀಡಲಾಗಿತ್ತು.
ಸೋಮವಾರ(ಜುಲೈ 10) ರಾತ್ರಿ ನಡೆದ ದಾಳಿ, ಪೂರ್ವ ನಿಯೋಜಿತವಾಗಿದ್ದು, ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಕೃತ್ಯ ಎಂದು ಶಂಕಿಸಲಾಗಿದೆ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು, ಒನ್ಇಂಡಿಯಾ ಪ್ರತಿನಿಧಿಗೆ ತಿಳಿಸಿದ್ದಾರೆ. ಆದರೆ, ಇಲ್ಲಿ ತನಕ ಈ ಬಗ್ಗೆ ಹಿಜ್ಬುಲ್ ಸಂಘಟನೆ ಯಾವುದೇ ಹೇಳಿಕೆ ನೀಡಿಲ್ಲ.
ಹಿಬ್ಜುಲ್ ಮೇಲೆ ಶಂಕೆ ಏಕೆ?: ಅನಂತ್ ನಾಗ್ ಜಿಲ್ಲೆಯಲ್ಲಿ ದಾಳಿ ನಡೆದ ಪ್ರದೇಶದ ವ್ಯಾಪ್ತಿಯಲ್ಲೇ ಹಿಜ್ಬುಲ್ ಮುಜಾಹಿದ್ದೀನ್ ಹೆಚ್ಚು ಸಕ್ರಿಯವಾಗಿದೆ. ಹಿಜ್ಬುಲ್ ಮುಖ್ಯಸ್ಥ ಸೈಯದ್ ಸಲಾವುದ್ದೀನ್ ಅವರನ್ನು ಜಾಗತಿಕ ಉಗ್ರ ಎಂದು ಘೋಷಿಸಿರುವುದನ್ನು ಖಂಡಿಸಿ, ಯಾತ್ರಾರ್ಥಿಗಳ ಮೇಲೆ ದಾಳಿ ನಡೆಸಲು ಹಿಜ್ಬುಲ್ ಮುಂದಾಗಿರುವ ಸಾಧ್ಯತೆಯಿದೆ. ಈ ಮೂಲಕ ಖಡಕ್ ಸಂದೇಶ ರವಾನಿಸುವ ಉದ್ದೇಶ ಹಿಜ್ಬುಲ್ ಉಗ್ರರದ್ದಾಗಿದೆ.
ಅಮರನಾಥ ಯಾತ್ರೆಯ ನಿಯಮವನ್ನು ಬಸ್ ಚಾಲಕ ಉಲ್ಲಂಘಿಸಿದ್ದಾನೆ.ಯಾತ್ರೆಯಲ್ಲಿ ಭಾಗವಹಿಸುವ ಯಾವುದೇ ವಾಹನಗಳು ಸಂಜೆ ಏಳು ಗಂಟೆಯ ನಂತರ ಹೆದ್ದಾರಿಯಲ್ಲಿ ಸಂಚರಿಸುವಂತಿಲ್ಲ. ಏಳು ಗಂಟೆ ನಂತರ ಭದ್ರತೆ ವ್ಯವಸ್ಥೆ ಇರುವುದಿಲ್ಲ.ರಾತ್ರಿ 8.20ಕ್ಕೆ ಬಸ್ ಅನ್ನು ಅಡ್ಡಗಟ್ಟಿದ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿ ದ್ದಾರೆ ಎಂದು ತಿಳಿದುಬಂದಿದೆ.