ಅಮರನಾಥ ಯಾತ್ರೆ ದಾಳಿ, ಪೊಲೀಸ್ ಬಂಧನ, ಪಿಡಿಪಿ ಶಾಸಕನ ವಿಚಾರಣೆ
ಶ್ರೀನಗರ್, ಜುಲೈ 15: ಅಮರನಾಥ ಯಾತ್ರಿಗಳ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದ ವಿಶೇಷ ತನಿಖಾ ತಂಡವು ಪೊಲೀಸ್ ವೊಬ್ಬನನ್ನು ಬಂಧಿಸಿದೆ. ಆಡಳಿತಾರೂಢ ಪಿಡಿಪಿಯ ಶಾಸಕರೊಬ್ಬರ ವಿಚಾರಣೆ ಕೂಡ ನಡೆಸಲಾಗಿದೆ.
ಹಿಂದು ಸಾಧುಗಳ ಉತ್ಸಾಹ ಕುಗ್ಗಿಸದ ಭಯೋತ್ಪಾದಕ ದಾಳಿ!
ತೌಸೀಫ್ ಅಹ್ಮದ್ ಬಂಧಿತ. ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯ ರಕ್ಷಣಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಆತನನ್ನು ವಿಚಾರಣೆ ಮಾಡುವ ಸಲುವಾಗಿ ಗುರುವಾರ ವಶಕ್ಕೆ ಪಡೆಯಲಾಗಿದೆ. ದೂರವಾಣಿ ಸಂಭಾಷಣೆಯ ಆಧಾರದಲ್ಲಿ ಗುಮಾನಿ ಬಂದು ಆತನನ್ನು ವಶಕ್ಕೆ ಪಡೆಯಲಾಗಿದೆ.
ಯಾತ್ರೆ ಸಂದರ್ಭದಲ್ಲಿ ವಾಹನಗಳ ಚಲನವಲನದ ಬಗ್ಗೆ ಯಾರು ಮಾಹಿತಿ ನೀಡಿದ್ದಾರೆ ಎಂಬುದರ ಪತ್ತೆಯಲ್ಲಿ ಪೊಲೀಸರು ತೊಡಗಿದ್ದಾರೆ. ಯಾತ್ರಿಗಳು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿ, ಏಳು ಮಂದಿ ಮೃತಪಟ್ಟಿದ್ದರು.
ಅಂದಹಾಗೆ, ಬಂಧಿತನಾಗಿರುವ ಪೊಲೀಸ್ ಪುಲ್ವಾಮದ ಚಕೌರದವನು. ಭಯೋತ್ಪಾದಕರ ಜತೆಗೆ ನಂಟು ಹೊಂದಿರುವುದು ಪತ್ತೆಯಾಗಿದೆ. ಆತನ ವಿಚಾರಣೆ ನಡೆದಿದ್ದು, ಪೊಲೀಸರಿಗೆ ಸಹಕರಿಸುತ್ತಿರುವುದಾಗಿ ಮಾಹಿತಿ ಲಭಿಸಿದೆ. ಉಗ್ರರ ದಾಳಿ ಸಂಬಂಧ ಈ ವರೆಗೆ ಇಪ್ಪತ್ತು ಮಂದಿಯ ವಿಚಾರಣೆ ಮಾಡಲಾಗಿದೆ.
ಆ ಪೈಕಿ ಕೆಲವರನ್ನು ಬಿಡುಗಡೆ ಮಾಡಿದ್ದು, ಇನ್ನೂ ಕೆಲವರ ವಿಚಾರಣೆ ಮುಂದುವರಿದಿದೆ. ಇನ್ನು ಕೃತ್ಯದಲ್ಲಿ ಲಷ್ಕರ್ ಇ ತೈಬಾ ಕೈವಾಡ ಇರುವುದು ಖಚಿತವಾಗಿದೆ. ಒಳಗಿನವರ ಸಹಕಾರ ಇದೆಯೇ ಎಂಬ ಬಗ್ಗೆ ಕೂಡ ತನಿಖೆ ನಡೆದಿದೆ.