2 ವರ್ಷದ ಬಳಿಕ ಅಮರನಾಥ ಯಾತ್ರೆ; ಮಹತ್ವದ ಸಭೆ ನಡೆಸಿದ ಅಮಿತ್ ಶಾ
ನವದೆಹಲಿ ಮೇ 18: ಈ ಬಾರಿಯ ಅಮರನಾಥ ಯಾತ್ರೆಯು ಜೂನ್ 30ರಿಂದ ಪ್ರಾರಂಭವಾಗಲಿದ್ದು ಆಗಸ್ಟ್ 11ರಂದು ಕೊನೆಗೊಳ್ಳಲಿದೆ. ಈ ಯಾತ್ರೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ಗೃಹ ಸಚಿವ ಅಮಿತ್ ಶಾ ಮಂಗಳವಾರ ದೆಹಲಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಕೋವಿಡ್ ಕಾರಣದಿಂದಾಗಿ ಎರಡು ವರ್ಷಗಳ ಕಾಲ ಅಮರನಾಥ ಯಾತ್ರೆ ಸ್ಥಗಿತಗೊಂಡಿತ್ತು. ಈ ಬಾರಿ ಮತ್ತೆ ಯಾತ್ರೆ ಆರಂಭವಾಗಲಿದ್ದು, ಯಾತ್ರಾರ್ಥಿಗಳ ಸುರಕ್ಷತೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಈ ಬಾರಿ ಯಾತ್ರೆಯು ಜೂನ್ 30 ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 11ರವರೆಗೆ ನಡೆಯಲಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಈ ಯಾತ್ರೆಗೆ ಆಗಮಿಸುತ್ತಾರೆ. ಯಾತ್ರೆಯನ್ನು ಸುಸೂತ್ರವಾಗಿ ಪೂರ್ಣಗೊಳಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು. ಯಾತ್ರೆಯ ನಿಯಮ ಮತ್ತು ವ್ಯವಸ್ಥೆಗಳ ಬಗ್ಗೆ ಜವಾಬ್ದಾರಿಯುತ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಅಗತ್ಯ ಸೂಚನೆ ನೀಡಿದರು.
ಈ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಕೇಂದ್ರ ಗೃಹ ಕಾರ್ಯದರ್ಶಿ, ಗುಪ್ತಚರ ಇಲಾಖೆ ನಿರ್ದೇಶಕ, ಜಮ್ಮು ಮತ್ತು ಕಾಶ್ಮೀರದ ಮುಖ್ಯ ಕಾರ್ಯದರ್ಶಿ ಮತ್ತು ಭದ್ರತಾ ಏಜೆನ್ಸಿಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ಗೃಹ ಸಚಿವರು ಅಮರನಾಥ ಯಾತ್ರೆಗೆ ಬರುವ ಯಾತ್ರಾರ್ಥಿಗಳು ಸುಲಭವಾಗಿ ದರ್ಶನ ಪಡೆಯಬೇಕು ಮತ್ತು ಅವರಿಗೆ ಯಾವುದೇ ತೊಂದರೆಯಾಗಬಾರದು ಎಂಬುದು ಮೋದಿ ಸರ್ಕಾರದ ಆದ್ಯತೆಯಾಗಿದೆ ಎಂದು ಹೇಳಿದರು.
ಮೊಬೈಲ್ ಟವರ್ ಹೆಚ್ಚಿಳ; ಸಭೆಯಲ್ಲಿ ಅಮರನಾಥ ಯಾತ್ರಾರ್ಥಿಗಳ ಸಂಚಾರ, ವಸತಿ, ವಿದ್ಯುತ್, ನೀರು, ಸಂಪರ್ಕ, ಆರೋಗ್ಯ ಸೇರಿದಂತೆ ಎಲ್ಲಾ ಅಗತ್ಯ ಸೌಕರ್ಯಗಳಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಲಾಯಿತು.
ಕೋವಿಡ್ ನಂತರ ಇದು ಮೊದಲ ಯಾತ್ರೆಯಾಗಿದ್ದು, ಅತಿ ಎತ್ತರದ ಕಾರಣ, ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆಗಳಿರುವ ಜನರಿಗೆ ಸಾಕಷ್ಟು ವ್ಯವಸ್ಥೆಗಳನ್ನು ಮಾಡಬೇಕಾಗಿದೆ ಎಂದು ತಿಳಿಸಲಾಯಿತು.
ಸಂಚಾರ ಮಾರ್ಗದಲ್ಲಿ ಮಾಹಿತಿಯ ಉತ್ತಮ ಸಂವಹನ ಮತ್ತು ಪ್ರಸಾರಕ್ಕಾಗಿ ಮೊಬೈಲ್ ಟವರ್ಗಳನ್ನು ಹೆಚ್ಚಿಸಬೇಕು, ಭೂಕುಸಿತದ ಸಂದರ್ಭದಲ್ಲಿ ತಕ್ಷಣ ಮಾರ್ಗವನ್ನು ತೆರೆಯಲು ಯಂತ್ರಗಳನ್ನು ನಿಯೋಜಿಸಲು ಸೂಚನೆ ನೀಡಲಾಗಿದೆ.
ಆಂಬ್ಯುಲೆನ್ಸ್, ಹೆಲಿಕಾಪ್ಟರ್ ನಿಯೋಜನೆ; ಆಕ್ಸಿಜನ್ ಸಿಲಿಂಡರ್ಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ಗೃಹ ಸಚಿವರು ಸೂಚಿಸಿದರು. ಅಲ್ಲದೆ 6000 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿ ಸಾಕಷ್ಟು ವೈದ್ಯಕೀಯ ಹಾಸಿಗೆಗಳನ್ನು ನಿಯೋಜಿಸಲು ಮತ್ತು ಯಾವುದೇ ತುರ್ತು ವೈದ್ಯಕೀಯ ಪರಿಸ್ಥಿತಿಯನ್ನು ಎದುರಿಸಲು ಆಂಬ್ಯುಲೆನ್ಸ್ ಮತ್ತು ಹೆಲಿಕಾಪ್ಟರ್ಗಳನ್ನು ನಿಯೋಜಿಸಲು ಸಿದ್ಧತೆ ನಡೆದಿದೆ.
ಬಾಬಾ ಬರ್ಫಾನಿಯ ಆನ್ಲೈನ್ ನೇರ ದರ್ಶನ; ಇದಲ್ಲದೇ, ಪ್ರಯಾಣಕ್ಕಾಗಿ ಟೆಂಟ್ ಸಿಟಿ, ವೈಫೈ ಹಾಟ್ಸ್ಪಾಟ್ ಮತ್ತು ಪ್ರಯಾಣದ ಮಾರ್ಗದಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಮಾಡಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯ ಕಾರ್ಯದರ್ಶಿ ಮಾಹಿತಿ ನೀಡಿದರು.
ಇದರೊಂದಿಗೆ, ಬಾಬಾ ಬರ್ಫಾನಿಯ ಆನ್ಲೈನ್ ನೇರ ದರ್ಶನ, ಪವಿತ್ರ ಅಮರನಾಥ ಗುಹೆಯಲ್ಲಿ ಬೆಳಗ್ಗೆ ಮತ್ತು ಸಂಜೆ ಆರತಿಯ ನೇರ ಪ್ರಸಾರ ಮತ್ತು ಮೂಲ ಶಿಬಿರದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.