ಜೂನ್ 28ರಿಂದ ಅಮರನಾಥ ಯಾತ್ರೆ ಆರಂಭ
ನವದೆಹಲಿ, ಜನವರಿ 10: ಹಿಂದೂಗಳ ಪಾಲಿನ ಪವಿತ್ರ ಅಮರನಾಥ ಯಾತ್ರೆ ಈ ವರ್ಷ ಜೂನ್ 28ರಿಂದ ಆರಂಭವಾಗಲಿದ್ದು, ಆಗಸ್ಟ್ 26ಕ್ಕೆ ಅಂತ್ಯವಾಗಲಿದೆ ಎಂದು ಶ್ರೀಅಮರನಾಥ ದೇವಸ್ಥಾನ ಮಂಡಳಿಯ ಅಧ್ಯಕ್ಷ, ಜಮ್ಮು ಕಾಶ್ಮೀರದ ರಾಜ್ಯಪಾಲ ಎನ್.ಎನ್.ವೋಹ್ರಾ ಮಂಗಳವಾರ ಹೇಳಿದರು.
ಹಿಮಲಿಂಗದ ರಕ್ಷಣೆ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಪೀಠ (ಎನ್ಜಿಟಿ) ನೀಡಿರುವ ಆದೇಶಗಳ ಬಗ್ಗೆ ಅಮರನಾಥ ದೇವಸ್ಥಾನ ಮಂಡಳಿಯ ಸದಸ್ಯರು ಮಂಗಳವಾರದಂದು ಸಭೆ ನಡೆಸಿ, ಯಾತ್ರಾ ದಿನಾಂಕ ನಿರ್ಧರಿಸಿದರು.
ಹಲವು ಯಾತ್ರಿಗಳ ಪ್ರಾಣ ಉಳಿಸಿದ ಬಸ್ ಚಾಲಕ ಸಲೀಂ
ಅಮರನಾಥ ಯಾತ್ರೆ ನೋಂದಣಿ ಮಾರ್ಚ್ನಲ್ಲಿ ಆರಂಭವಾಗಲಿದ್ದು, ಪೂರ್ಣ ವೇಳಾಪಟ್ಟಿಯನ್ನು ಮಂಡಳಿ, ಪ್ರಕಟಿಸಬೇಕಾಗಿದೆ. ಒಟ್ಟಾರೆ, ಯಾತ್ರೆ ವ್ಯವಸ್ಥೆ ಕುರಿತು ದೇವಸ್ಥಾನ ಮಂಡಳಿಯ ನಿಯಂತ್ರಣ ಕೊಠಡಿ/ ಸಹಾಯವಾಣಿ ಸಂಖ್ಯೆ 0194-2501679 ಅಥವಾ 09469722210 ಕರೆ ಮಾಡಬಹುದು.
ಯಾತ್ರೆಗೆ ಹೊರಡುವ ಮುನ್ನ ಸಂಪೂರ್ಣ ವೈದ್ಯಕೀಯ ಪರೀಕ್ಷೆ ಪ್ರಮಾಣ ಪತ್ರ ಪಡೆದಿರಬೇಕು. 13 ವರ್ಷವಯಸ್ಸಿಗಿಂತ ಚಿಕ್ಕವರು, 75 ವರ್ಷಕ್ಕೂ ಅಧಿಕ ವಯಸ್ಸಿನ ಹಿರಿಯರು, 6 ತಿಂಗಳ ಗರ್ಭಿಣಿಯರಿಗೆ ನೋಂದಣಿ ನಿರ್ಬಂಧಿಸಲಾಗಿದೆ ಎಂದು ಅಮರನಾಥ್ ಯಾತ್ರೆ ಮಂಡಳಿ ಪ್ರಕಟಿಸಿದೆ.
ಯಾತ್ರಿಕರ ಸುರಕ್ಷತೆಗಾಗಿ ಸೇನೆ, ಅರೆ ಸೇನಾಪಡೆ ಮತ್ತು ರಾಜ್ಯ ಪೊಲೀಸ್ ಪಡೆಗಳಿಂದ ಮೂರು ಹಂತಗಳ ಭದ್ರತೆ ಒದಗಿಸಲಾಗುತ್ತದೆ. ಮಾತ್ರವಲ್ಲದೆ ರಾಜ್ಯ ಮತ್ತು ಕೇಂದ್ರ ವಿಪತ್ತು ನಿರ್ವಹಣಾ ತಂಡಗಳನ್ನೂ ನಿಯೋಜಿಸಲಾಗುತ್ತದೆ. ಸುಮಾರು ಎರಡು ತಿಂಗಳ ಕಾಲ ನಡೆಯಲಿರುವ ಯಾತ್ರೆಯಲ್ಲಿ ಸಾವಿರಾರು ಜನ ಭಕ್ತರು ಪಾಲ್ಗೊಳ್ಳುತ್ತಾರೆ. ಭಕ್ತರು ಹಿಮಲಿಂಗದ ದರ್ಶನ ಪಡೆದು ಪುನೀತರಾಗುತ್ತಾರೆ.