ಅಮರನಾಥ ಯಾತ್ರೆಗೆ ಕೇಂದ್ರ ಗೃಹ ಸಚಿವರು ಮೊದಲ ಯಾತ್ರಾರ್ಥಿ
ಹಿಂದೂಗಳ ಪವಿತ್ರ ಯಾತ್ರೆಗಳಲ್ಲಿ ಒಂದೆನಿಸಿರುವ ಅಮರನಾಥ ಯಾತ್ರೆ ಜೂನ್ 29ರಿಂದ ಆರಂಭವಾಗಲಿದ್ದು, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ರಾಜ್ಯಪಾಲರು ಮೊದಲ ಯಾತ್ರಾರ್ಥಿಗಳಾಗಲಿದ್ದಾರೆ.
ಶ್ರೀನಗರ, ಜೂನ್ 06: ಹಿಂದೂಗಳ ಪವಿತ್ರ ಯಾತ್ರೆಗಳಲ್ಲಿ ಒಂದೆನಿಸಿರುವ ಅಮರನಾಥ ಯಾತ್ರೆ ಜೂನ್ 29ರಿಂದ ಆರಂಭವಾಗಲಿದ್ದು, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ರಾಜ್ಯಪಾಲರು ಮೊದಲ ಯಾತ್ರಾರ್ಥಿಗಳಾಗಲಿದ್ದಾರೆ.
ಜೂನ್ 29 ರಿಂದ ಆರಂಭಗೊಂಡು ಆಗಸ್ಟ್ 7 ರಂದು ಯಾತ್ರೆ ಮುಕ್ತಾಯವಾಗಲಿದೆ. ಕಣಿವೆ ರಾಜ್ಯದ ಬಲ್ತಾಲ್ ಹಾಗೂ ಚಂದನ್ ವಾರಿ ಮಾರ್ಗದಲ್ಲಿ ಮೊದಲಿಗೆ ಪಯಣ ಸಾಗಲಿದೆ. [ಹಿಮಲಿಂಗ ದರ್ಶನಕ್ಕೆ ಹೊರಟವರ ರಕ್ಷಣೆಗೆ 'ಆಪರೇಷನ್ ಶಿವ']
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಎನ್.ಎನ್ ವೋಹ್ರಾ, ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮಹರ್ಷಿ ಮುಂತಾದವರು ಮೊದಲ ಬ್ಯಾಚಿನ ಭಕ್ತಾದಿಗಳ ಜತೆ ಯಾತ್ರೆ ಆರಂಭಿಸಲಿದ್ದಾರೆ.
ಎರಡೂ ಮಾರ್ಗಗಳ ಉದ್ದಕ್ಕೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡವನ್ನು ನಿಯೋಜಿಸಲಾಗಿದ್ದು ಯಾತ್ರಾರ್ಥಿಗಳ ಹಿತ ಕಾಪಾಡುವ ಕಾರ್ಯ ನಿರ್ವಹಿಸಲಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಭರವಸೆ ನೀಡಿದ್ದಾರೆ.(ಪಿಟಿಐ)
ರಾಜನಾಥ್ ಸಿಂಗ್ ಮೊದಲ ಯಾತ್ರಿ
ಗೃಹ ಸಚಿವ ರಾಜನಾಥ್ ಸಿಂಗ್ ಅವರು ಖುದ್ದು ಮೊದಲ ಬ್ಯಾಚಿನ ಯಾತ್ರಾರ್ಥಿಗಳ ಜತೆ ಸಾಗಲಿದ್ದು, ಭಕ್ತರಲ್ಲಿ ಮೂಡಿರುವ ಆತಂಕವನ್ನು ನಿವಾರಿಸಲಿದ್ದಾರೆ. ಉಗ್ರರ ದಾಳಿ, ಹವಾಮಾನ ವೈಪರೀತ್ಯಗಳ ನಡುವೆ ಹಿಮಲಿಂಗ ದರ್ಶನಕ್ಕೆ ಸಾವಿರಾರು ಭಕ್ತರು ಯಾತ್ರೆ ಕೈಗೊಳ್ಳುತ್ತಾರೆ.
ಹಿಮಾಲಯ ತಪ್ಪಲಿನಲ್ಲಿರುವ ಹಿಮಲಿಂಗ
ಶ್ರೀನಗರದಿಂದ 141 ಕಿ.ಮೀ ದೂರದಲ್ಲಿರುವ ಹಿಮಾಲಯ ತಪ್ಪಲಿನಲ್ಲಿರುವ ಹಿಮಲಿಂಗವು ಸಮುದ್ರಮಟ್ಟದಲ್ಲಿ 12, 756 ಅಡಿ ಎತ್ತರದಲ್ಲಿದೆ. ಅಮರನಾಥ ಯಾತ್ರೆಗೆ ಮಾರ್ಚ್ 1 ರಿಂದ ನೋಂದಣಿ ಕಾರ್ಯ ಆರಂಭವಾಗಿದೆ. ದೇಶದ ಹಲವೆಡೆ ಇರುವ ಪಂಜಾಬ್ ನ್ಯಾಷನಲ್ ಬ್ಯಾಂಕಿನ 433 ಬ್ರ್ಯಾಂಚ್ ಗಳು ಹಾಗೂ ಜಮ್ಮು ಮತ್ತು ಕಾಶ್ಮೀರ್ ಬ್ಯಾಂಕ್, ಯೆಸ್ ಬ್ಯಾಂಕ್ ನಲ್ಲಿ ಅಮರನಾಥ್ ಯಾತ್ರೆಗೆ ನೋಂದಣಿ ಮಾಡಿಸಿಕೊಳ್ಳಬಹುದು.
ವೈದ್ಯಕೀಯ ಪರೀಕ್ಷೆ ಪ್ರಮಾಣ ಪತ್ರ
ಯಾತ್ರಿಗಳು ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆ ಪ್ರಮಾಣ ಪತ್ರ ಪಡೆದಿರಬೇಕು. 13 ವರ್ಷವಯಸ್ಸಿಗಿಂತ ಚಿಕ್ಕವರು, 75 ವರ್ಷಕ್ಕೂ ಅಧಿಕ ವಯಸ್ಸಿನ ಹಿರಿಯರು, 6 ತಿಂಗಳ ಗರ್ಭಿಣಿಯರಿಗೆ ನೋಂದಣಿ ನಿರ್ಬಂಧಿಸಲಾಗಿದೆ ಎಂದು ಅಮರನಾಥ್ ಯಾತ್ರೆ ಮಂಡಳಿಯ ಸಿಇಒ ಪಿಕೆ ತ್ರಿಪಾಠಿ ಹೇಳಿದ್ದಾರೆ. ಹೆಚ್ಚಿನ ವಿವರಗಳನ್ನು ಅಮರನಾಥ್ ಯಾತ್ರೆ ವೆಬ್ ಸೈಟಿನಿಂದ ಪಡೆದುಕೊಳ್ಳಬಹುದು.
ಯಾತ್ರಿಕರ ಸುರಕ್ಷತೆಗಾಗಿ ಸೇನೆ
ಯಾತ್ರಿಕರ ಸುರಕ್ಷತೆಗಾಗಿ ಸೇನೆ, ಅರೆ ಸೇನಾಪಡೆ ಮತ್ತು ರಾಜ್ಯ ಪೊಲೀಸ್ ಪಡೆಗಳಿಂದ ಮೂರು ಹಂತಗಳ ಭದ್ರತೆ(ಒಟ್ಟು 27, 000 ಸಿಬ್ಬಂದಿ) ಒದಗಿಸಲಾಗುತ್ತದೆ. ಮಾತ್ರವಲ್ಲದೆ ರಾಜ್ಯ ಮತ್ತು ಕೇಂದ್ರ ವಿಪತ್ತು ನಿರ್ವಹಣಾ ತಂಡಗಳನ್ನೂ ನಿಯೋಜಿಸಲಾಗುತ್ತದೆ. ಸುಮಾರು ಎರಡು ತಿಂಗಳ ಕಾಲ ನಡೆಯಲಿರುವ ಯಾತ್ರೆಯಲ್ಲಿ ಸಾವಿರಾರು ಜನ ಭಕ್ತರು ಪಾಲ್ಗೊಳ್ಳುತ್ತಾರೆ. ಭಕ್ತರು ಹಿಮಲಿಂಗದ ದರ್ಶನ ಪಡೆದು ಪುನೀತರಾಗುತ್ತಾರೆ.