ಪೋಸ್ಟ್ ಮಾರ್ಟಂ ವರದಿ : ಹಲ್ಲೆ ಆಘಾತದಿಂದಲೇ ರಕ್ಬರ್ ಸಾವು!
ಅಲ್ವಾರ್, ಜುಲೈ 24 : ಜನಸಮೂಹದಿಂದ ಹಲ್ಲೆಗೊಳಗಾಗಿ ರಾಜಸ್ತಾನದ ಅಲ್ವಾರ್ ನಲ್ಲಿ ಶುಕ್ರವಾರ ಸಾವಿಗೀಡಾಗಿದ್ದ ರಕ್ಬರ್ ಖಾನ್ ತೀವ್ರವಾದ ಆಘಾತ ಅಥವಾ 'ಹರಿತವಲ್ಲದ ಆಯುಧ ಅಥವಾ ವಸ್ತು'ವಿನಿಂದ ಆದ ಗಾಯದಿಂದ ಸಾವಿಗೀಡಾಗಿದ್ದಾನೆ ಎಂದು ಮರಣೋತ್ತರ ಪರೀಕ್ಷೆ ತಿಳಿಸಿದೆ.
ಗೋವುಗಳನ್ನು ಕಳ್ಳತನದಿಂದ ಸಾಗಿಸುತ್ತಿದ್ದಾರೆ ಎಂಬ ಆರೋಪದ ಮೇಲೆ 28 ವರ್ಷದ ಯುವಕ ರಕ್ಬರ್ ಖಾನ್ ಮತ್ತು ಅವರ ಸ್ನೇಹಿತರನ್ನು ಶುಕ್ರವಾರ ರಾತ್ರಿ ಅಲ್ವಾರ್ ಗ್ರಾಮದ ಜನರು ತೀವ್ರವಾಗಿ ಥಳಿಸಿದ್ದರು. ಕೋಲು ಮತ್ತು ಕಲ್ಲಿನಿಂದ ಅವರ ಹಲ್ಲೆ ಮಾಡಲಾಗಿತ್ತು.
ಅಲ್ವಾರ್ ಹತ್ಯೆ: ವ್ಯಕ್ತಿ ಪ್ರಾಣಕ್ಕಿಂತ ಗೋವುಗಳು ಮುಖ್ಯವಾದವೇ ಪೊಲೀಸರಿಗೆ?
ಹಲ್ಲೆ ನಡೆದ ನಂತರ ಮೂರು ಗಂಟೆಗಳ ಕಾಲ ಆತನನ್ನು ಪೊಲೀಸ್ ಠಾಣೆಯಲ್ಲಿಯೇ ಇರಿಸಿಕೊಂಡು ನಂತರ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ರಕ್ಬರ್ ಖಾನ್ ಆಸ್ಪತ್ರೆಗೆ ಸಾಗಿಸುವಾಗಲೇ ಮೃತಪಟ್ಟಿದ್ದ. ಪೊಲೀಸರ ನಿರ್ಲಕ್ಷ್ಯತೆ ಮತ್ತು ಕಾನೂನು ಪಾಲನೆ ಮಾಡದಿರುವುದು ಭಾರೀ ಟೀಕೆಗೆ ಗುರಿಯಾಗಿದೆ.
ಪೋಸ್ಟ್ ಮಾರ್ಟಂ ರಿಪೋರ್ಟ್ ಪ್ರಕಾರ, ಮೈಮೇಲೆ ಆಗಿದ್ದ ಗಾಯಗಳಿಂದ ತೀವ್ರ ಆಘಾತಕ್ಕೊಳಗಾಗಿ ಆತ ಅಸುನೀಗಿದ್ದಾನೆ. ಆತನ ದೇಹದ ಮೇಲೆ ಗಾಯಗಳಿದ್ದವು, ಆಂತರಿಕ ರಕ್ತಸ್ರಾವವಾಗಿದ್ದರಿಂದ ಆತ ಸಾವಿಗೀಡಾಗಿದ್ದಾನೆ ಎಂದು ಪೋಸ್ಟ್ ಮಾರ್ಟಂ ಮಾಡಿದ ವೈದ್ಯ ರಾಜೀವ್ ಗುಪ್ತಾ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಗುಂಪು ಹತ್ಯೆ ತಡೆಗೆ ಕೇಂದ್ರದಿಂದ ಉನ್ನತ ಮಟ್ಟದ ಸಮಿತಿ ರಚನೆ
ದೇಹದಲ್ಲಿ ಏಳೆಂಟು ಕಡೆಗಳಲ್ಲಿ ಮೂಳೆ ಮುರಿತವಾಗಿತ್ತು. ಯಾವ ಪರಿ ಗ್ರಾಮಸ್ಥರು ಥಳಿಸಿದ್ದರೆಂದರೆ, ಆತನ ಕುತ್ತಿಗೆಯೂ ಮುರಿದಿತ್ತು ಎಂದು ರಕ್ಬರ್ ಖಾನ್ ಅವರ ಸಹೋದರ ಹೇಳಿಕೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಸಬ್ ಇನ್ಸ್ಪೆಕ್ಟರ್ ಮೋಹನ್ ಸಿಂಗ್ ನನ್ನು ಅಮಾನತು ಮಾಡಲಾಗಿದ್ದರೆ, ಇನ್ನಿಬ್ಬರು ಕಾನ್ಸ್ಟೇಬಲ್ ಗಳನ್ನು ಬೇರೆಗೆ ವರ್ಗಾಯಿಸಲಾಗಿದೆ.
ಮೋದಿಯವರ ಮೇಲೆ ರಾಹುಲ್ ವಾಗ್ದಾಳಿ
ಈ ಘಟನೆಯನ್ನು ತೀವ್ರವಾಗಿ ಟೀಕಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಕೇವಲ 6 ಕಿ.ಮೀ. ದೂರದಲ್ಲಿದ್ದ ಆಸ್ಪತ್ರೆಗೆ, ಜನಸಮೂಹದಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ರಕ್ಬರ್ ಖಾನ್ ನನ್ನು ಸಾಗಿಸಲು ಪೊಲೀಸರು 3 ಗಂಟೆ ತೆಗೆದುಕೊಂಡಿದ್ದಾರೆ. ಏಕೆ? ಅಲ್ಲದೆ, ಮಧ್ಯದಲ್ಲಿ ಅವರು ಚಹಾ ಬಿಡುವನ್ನೂ ತೆಗೆದುಕೊಂಡಿದ್ದರಂತೆ. ಇದು ನರೇಂದ್ರ ಮೋದಿಯವರ ಕ್ರೂರ ಹೊಸ ಭಾರತ. ಇಲ್ಲಿ ದ್ವೇಷ ಮಾನವೀಯತೆಯನ್ನು ಬಲಿತೆಗೆದುಕೊಂಡಿದೆ. ಜನರನ್ನು ಹೊಸಕಿಹಾಕಿ ಸಾಯಲು ಬಿಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರದ ಮೇಲೆ ಮಾಯಾವತಿ ಟೀಕಾ ಪ್ರಹಾರ
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ಕೂಡ, ಹಲ್ಲೆ ಮಾಡಿ ಹತ್ಯೆ ಮಾಡಿದ್ದು ಸಂಕುಚಿತ ಮನಸ್ಸಿನ ಬಿಜೆಪಿ ಮತ್ತು ಅವರ ಬೆಂಬಲಿಗರ ಹೇಯ ಕೃತ್ಯ. ಆದರೆ, ಅವರು ಈ ಕೃತ್ಯವನ್ನು ದೇಶ ಭಕ್ತಿ ಎಂದು ಬಿಂಬಿಸಿಕೊಳ್ಳುತ್ತಾರೆ. ನಾನು ಈ ಘಟನೆಯನ್ನು ಕಟುವಾಗಿ ಟೀಕಿಸುತ್ತೇನೆ. ಆದರೆ, ಈ ಪ್ರಕರಣದಲ್ಲಿ ಹಲ್ಲೆ ಮಾಡಿದವರ ವಿರುದ್ಧ ಬಿಜೆಪಿ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ನನಗೆ ಅನ್ನಿಸುವುದಿಲ್ಲ. ಆದ್ದರಿಂದ ನ್ಯಾಯಾಲಯವೇ ಮಧ್ಯ ಪ್ರವೇಶಿಸಿ, ಹಲ್ಲೋಕೋರರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮನವಿ ಮಾಡಿದ್ದಾರೆ.
ಕುತೂಹಲ ಮೂಡಿಸಿರುವ ರಕ್ಬರ್ ಚಿತ್ರ
ಈ ನಡುವೆ, ಹಲ್ಲೆಯ ನಂತರ ಪೊಲೀಸ್ ವಾಹನದಲ್ಲಿ ರಕ್ಬರ್ ಖಾನ್ ಕುಳಿತಿರುವ ಚಿತ್ರವೊಂದು ಬಿಡುಗಡೆಯಾಗಿದ್ದು, ಪೊಲೀಸರ ಕೃತ್ಯದ ಮೇಲೆಯೇ ಅನುಮಾನ ಮೂಡುವಂತೆ ಮಾಡಿದೆ. ಈ ಚಿತ್ರವನ್ನು, ಹಲ್ಲೆಯ ಬಗ್ಗೆ ಪೊಲೀಸರಿಗೆ ತಿಳಿಸಿದ ಮತ್ತು ಅವರೊಂದಿಗೆ ಓಡಾಡಿದ ನವಲ್ ಕಿಶೋರ್ ಎಂಬ ವ್ಯಕ್ತಿ ಬಿಡುಗಡೆ ಮಾಡಿದ್ದಾರೆ. ರಕ್ಬರ್ ಖಾನ್ ನನ್ನು ಠಾಣೆಯಲ್ಲಿ ಹೊಡೆದಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ವಿಶೇಷ ಡಿಜಿಪಿ ಎನ್ಆರ್ಕೆ ರೆಡ್ಡಿ ತಿಳಿಸಿದ್ದಾರೆ.
ರಕ್ಬರ್ ಚಿತ್ರ ತೆಗೆದಿರುವ ನವಲ್ ಹೇಳುವುದೇನು
ಪೊಲೀಸ್ ವಾಹನದಲ್ಲಿ ರಕ್ಬರ್ ಖಾನ್ ಕುಳಿತಿರುವುದನ್ನು ನಾನೇ ತೆಗೆದಿದ್ದೇನೆ. ಆತ ಸರಿಯಾಗಿಯೇ ಕುಳಿತಿದ್ದಾನೆ ಮತ್ತು ಆತನ ಮೇಲೆ ಭಾರೀ ಹಲ್ಲೆ ಮಾಡಿರುವ ಹಾಗೆ ಕಾಣಿಸುವುದಿಲ್ಲ. ಪೊಲೀಸ್ ಠಾಣೆಗೆ ಕರೆದೊಯ್ಯುವ ಮೊದಲು ಆತ ಆರಾಮವಾಗಿಯೇ ಇದ್ದ. ಆತನನ್ನು ಬೆಳಗಿನ ಜಾವ 4 ಗಂಟೆಗೆ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ನವಲ್ ಕಿಶೋರ್ ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ ಮತ್ತು ಪ್ರಕರಣಕ್ಕೆ ತಿರವನ್ನೂ ತಂದಿದೆ.
ಸಮಿತಿ ರಚನೆ ಬೆನ್ನಲ್ಲೇ ಮತ್ತೊಂದು ಹತ್ಯೆ
ದೇಶದಾದ್ಯಂತ ಜನಸಮೂಹದಿಂದ ಹಲ್ಲೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಇಂಥ ಹಲ್ಲೆಗಳನ್ನು ತಡೆಗಟ್ಟಲು ಉನ್ನತ ಮಟ್ಟದ ಸಮಿತಿಯನ್ನು ಕೇಂದ್ರ ಸರಕಾರ ರಚಿಸಿದ್ದು, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಮಂತ್ರಿಗಳ ತಂಡವನ್ನು ರಚಿಸಿದ್ದು, ಈ ಸಮಿತಿ ನೀಡಿದ ವರದಿಯನ್ನು ಪರಿಶೀಲಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ವರದಿಯನ್ನು ಒಪ್ಪಿಸಲಿದೆ. ಈ ಬಗ್ಗೆ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿಯೇ ಮಧ್ಯ ಪ್ರದೇಶದಲ್ಲಿ ಮಕ್ಕಳ ಕಳ್ಳತನ ಮಾಡಿತ್ತಿದ್ದಾಳೆಂಬ ಆರೋಪದ ಮೇಲೆ ಮಾನಸಿಕವಾಗಿ ಅಸ್ವಸ್ಥಳಾಗಿದ್ದ ಮಹಿಳೆಯನ್ನು ಕೊಂದು ಹಾಕಲಾಗಿದೆ.