ಮೋದಿಗೆ ಸಂಚಕಾರ ತರಲಿದ್ದ ಕೇಸುಗಳ ತನಿಖೆ ಮಾಡುತ್ತಿದ್ದ ಅಲೋಕ್ ವರ್ಮಾ
ನವದೆಹಲಿ, ಅಕ್ಟೋಬರ್ 25: ಕಳೆದ ಮೂರು ದಿನಗಳಿಂದ ಎಲ್ಲ ಪತ್ರಿಕೆಗಳಲ್ಲಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ಒಂದೇ ಸುದ್ದಿ. ಅದೇ ರಾಷ್ಟ್ರದ ಅತ್ಯುನ್ನತ ತನಿಖಾ ಸಂಸ್ಥೆ ಸಿಬಿಐ ನಲ್ಲಾಗಿರುವ ಬೆಳವಣಿಗೆಗಳು.
ಸಿಬಿಐನ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನ ಮೇಲೆ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರೇ ಪ್ರಕರಣ ದಾಖಲಿಸಿ ತನಿಖೆಗೆ ಮುಂದಾಗಿದ್ದರು. ಆದರೆ ನಂತರ ನಡೆದ ದಿಢೀರ್ ಬೆಳವಣಿಗೆಯಲ್ಲಿ ಇಬ್ಬರು ನಿರ್ದೇಶಕರನ್ನೂ ಕೇಂದ್ರ ಸರ್ಕಾರವು ರಜೆಯ ಮೇಲೆ ಕಳಿಸಿತು.
ಸಿಬಿಐ ಮುಖ್ಯಸ್ಥ ಅಲೋಕ್ ಮೇಲೆ ಕಣ್ಗಾವಲು ಸುದ್ದಿಗೆ ರೆಕ್ಕೆಪುಕ್ಕ!
ಅಲೋಕ್ ವರ್ಮಾ ಸ್ಥಾನಕ್ಕೆ ನಾಗೇಶ್ವರ್ ರಾವ್ ಎಂಬುವರನ್ನು ತರಲಾಯಿತು. ಅಷ್ಟೆ ಅಲ್ಲದೆ ಸಿಬಿಐನಲ್ಲಿ ನಡೆದ ಈ ಪ್ರಕರಣದ ತನಿಖೆಗೆ ವಿಶೇಷ ಎಸ್ಐಟಿ ನೇಮಿಸಲಾಯಿತು. ರಾಕೇಶ್ ಅಸ್ಥಾನ ಪ್ರಕರಣ ತನಿಖೆಗೆಂದು ಅಲೋಕ್ ವರ್ಮಾ ನೇಮಿಸಿದ್ದ ಅಧಿಕಾರಿಗಳನ್ನು ನಾಗೇಶ್ವರ್ ರಾವ್ ಒಂದೇ ದಿನದಲ್ಲಿ ವರ್ಗಾವಣೆ ಮಾಡಿಬಿಟ್ಟರು.
ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರು ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನ ಎಂಬಿಬ್ಬರು ಸಿಬಿಐನ ನಂ1, ನಂ 2 ಸ್ಥಾನದ ಅಧಿಕಾರಿಗಳ ಪರಸ್ಪರ ಒಳಜಗಳ ಇದು ಎಂದು ಪ್ರಾರಂಭದಲ್ಲಿ ಕರೆಯಲಾಗಿದ್ದ ಈ ಪ್ರಕರಣದ ನಿಜ ಕಾರಣ ಬೇರೆಯೇ ಇದೆ ಎಂಬುದು ನಿಧಾನಕ್ಕೆ ಗೊತ್ತಾಗುತ್ತಿದೆ. ಕೇಂದ್ರ ಸರ್ಕಾರದ ಅವ್ಯವಾಹರಗಳ ಹಿಂದೆ ಬಿದ್ದಿದ್ದಕ್ಕೆ ಅಲೋಕ್ ವರ್ಮಾಗೆ ರಜೆಯ ಶಿಕ್ಷೆ ನೀಡಲಾಗಿದೆ ಎನ್ನಲಾಗುತ್ತಿದೆ.
ಸಿಬಿಐ ನಿರ್ದೇಶಕರನ್ನು ಕಿತ್ತೊಗೆಯಲು ಕೇಂದ್ರಕ್ಕೆ ಅಧಿಕಾರವಿಲ್ಲ : ಪ್ರಶಾಂತ್
ಸಿಬಿಐ ಹಿರಿಯ ಅಲೋಕ್ ವರ್ಮಾ ನಿರ್ದೇಶಕರನ್ನು ರಾತ್ರೋರಾತ್ರಿ ಕೇಂದ್ರ ಸರ್ಕಾರ ರಜೆ ಮೇಲೆ ಕಳಿಸಿ ಅವರ ಕಚೇರಿಗೆ ಬೀಗ ಜಡಿದಿದೆ ಹಾಗಿದ್ದರೆ ಅಲೋಕ್ ವರ್ಮಾ ತನಿಖೆ ನಡೆಸುತ್ತಿದ್ದ ಪ್ರಕರಣಗಳು ಯಾವುವು? ಅವುಗಳಿಂದ ಸರ್ಕಾರಕ್ಕೇನಿತ್ತು ಗಂಡಾಂತರ?
ಸೂಕ್ಷ್ಮ ಪ್ರಕರಣ ತನಿಖೆ ನಡೆಸುತ್ತಿದ್ದ ವರ್ಮಾ
ರಜೆಯ ಮೇಲೆ ಕಳಿಸಲಾದ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರು ಅತ್ಯಂತ ಪ್ರಮುಖ ಮತ್ತು ಸೂಕ್ಷ್ಮ ಪ್ರಕರಣಗಳನ್ನು ತನಿಖೆಗೆ ಎತ್ತುಕೊಂಡ ಕಾರಣದಿಂದಲೇ ಅವರನ್ನು ರಜೆಯ ಮೇಲೆ ಕಳಿಸಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಅಲೋಕ್ ಕುಮಾರ್ ಸ್ವತಃ ಈ ವಿಷಯನ್ನು ಸೂಚ್ಯವಾಗಿ ಸುಪ್ರಿಂಕೋರ್ಟ್ನಲ್ಲಿ ಹೇಳಿದ್ದಾರೆ.
ರಫೆಲ್ ಡೀಲ್ ಪ್ರಕರಣ ತನಿಖೆ
ಅಲೋಕ್ ವರ್ಮಾ ಅವರು ಕೆಲವು ದಿನಗಳ ಹಿಂದೆ ಅಷ್ಟೆ ರಫೆಲ್ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡುವಂತೆ ಮನವಿ ಮಾಡಿದ್ದರು. ಅವರಿಗೆ ಯಶವಂತ್ ಸಿನ್ಹಾ , ಅರುಣ್ ಶೌರಿ ಮತ್ತು ಪ್ರಶಾಂತ್ ಭೂಷಣ್ ಭೇಟಿಯಾಗಿ ರಫೆಲ್ ಪ್ರಕರಣ ಸಂಬಂಧ 132 ಪುಟಗಳ ದೂರು ನೀಡಿದ್ದರು. ರಫೆಲ್ ಪ್ರಕರಣದ ಬಗ್ಗೆ ಈಗಾಗಲೇ ಕೇಂದ್ರದ ಮೇಲೆ ಭ್ರಷ್ಟಾಚಾರದ ಆರೋಪವಿದ್ದು, ಆ ಪ್ರಕರಣದ ತನಿಖೆಯನ್ನು ಅಲೋಕ್ ವರ್ಮಾ ಹೊತ್ತುಕೊಂಡಿದ್ದರು.
ಅಲೋಕ್ ಬಳಿ ರಫೇಲ್ ಡೀಲ್ ದಾಖಲೆ: ರಾಹುಲ್ ಸ್ಫೋಟಕ ಮಾಹಿತಿ
ಮೋದಿ ಆಪ್ತ ಕಾರ್ಯದರ್ಶಿ ಮೇಲೆ ಪ್ರಕರಣ
ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ಕಾರ್ಯದರ್ಶಿ ಭಾಸ್ಕರ್ ಕುಡ್ಲೆ ಅವರ ಪಾಲ್ಗೊಂಡಿದ್ದಾರೆ ಎಂಬ ಆರೋಪವಿರುವ ಕಲ್ಲಿದ್ದಲು ವಿತರಣೆ ಹಣಗರಣದ ತನಿಖೆಯನ್ನೂ ಸಹ ಅಲೋಕ್ ವರ್ಮಾ ಮಾಡುತ್ತಿದ್ದರು. ಈ ಪ್ರಕರಣ ಸ್ವತಃ ಮೋದಿಯನ್ನೇ ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇತ್ತು.
ಹೈಕೋರ್ಟ್ ನಿವೃತ್ತ ಜಡ್ಜ್ ಮೇಲೆ ಚಾರ್ಜ್ಶೀಟ್
ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ) ನಲ್ಲಿ ನಡೆದಿರುವ ಅತಿ ದೊಡ್ಡ ಲಂಚ ಪ್ರಕರಣದ ತನಿಖೆಯನ್ನು ಅಲೋಕ್ ವರ್ಮಾ ಕೈಗೆತ್ತಿಕೊಂಡಿದ್ದರು. ಇದೇ ಪ್ರಕರಣದಲ್ಲಿ ಒಡಿಶಾದ ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಐಎಂ ಖುದ್ದುಸಿ ಮೇಲೆ ಚಾರ್ಜ್ಶೀಟ್ ಸಹ ತಯಾರಾಗಿತ್ತು ಅಲೋಕ್ ವರ್ಮಾ ಅಂತಿಮ ಸಹಿಗಾಗಿ ಚಾರ್ಜ್ಶೀಟ್ ಕಾಯುತ್ತಿತ್ತು ಎಂದು ಮೂಲಗಳ ಹೇಳಿಕೆ ಆಧರಿಸಿ ಆಂಗ್ಲ ಪತ್ರಿಕೆ ವರದಿ ಮಾಡಿದೆ.
ಸಿಬಿಐನಲ್ಲಿ ಭಾರಿ ಬದಲಾವಣೆ: 11 ಅಧಿಕಾರಿಗಳ ವರ್ಗಾವಣೆ, ತಕ್ಷಣದಿಂದ ಜಾರಿ
ಹಣಕಾಸು ಸಚಿವಾಲಯ ಕಾರ್ಯದರ್ಶಿ ಮೇಲೆ ತನಿಖೆ
ಹಣಕಾಸು ಸಚಿವಾಲಯದ ಕಾರ್ಯದರ್ಶಿ ಹಸ್ಮುಖ್ ಅದಿಯಾ ವಿರುದ್ಧ ಸಹ ಅಲೋಕ್ ವರ್ಮಾ ಅವರು ತನಿಕೆ ನಡೆಸುತ್ತಿದ್ದರು. ಹಸ್ಮುಕ್ ಅದಿಯಾ ವಿರುದ್ಧ ಬಿಜೆಪಿ ವಕ್ತಾರ ಸುಬ್ರಹ್ಮಣಿಯನ್ ಸ್ವಾಮಿ ಅವರೇ ಸಿಬಿಐಗೆ ಹಲವು ಪತ್ರಗಳನ್ನು ಬರೆದಿದ್ದರು ಇದೇ ಆಧಾರವಾಗಿಟ್ಟುಕೊಂಡು ಪ್ರಕರಣವನ್ನು ಅಲೋಕ್ ವರ್ಮಾ ಕೈಗೆತ್ತಿಕೊಂಡಿದ್ದರು. ಹಣಕಾಸು ಸಚಿವಾಲಯದ ಕಾರ್ಯದರ್ಶಿ ಮೇಲಿನ ಆರೋಪಗಳ ಬಗ್ಗೆ ಒಮ್ಮೆ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಪ್ರತಿಕ್ರಿಯಸಿ ಅವೆಲ್ಲಾ ಸುಳ್ಳು ಆರೋಪಗಳು ಎಂದಿದ್ದರು.
ಮಧ್ಯವರ್ತಿಯೊಬ್ಬನ ಮೇಲೆ ದಾಳಿ ನಡೆಸಿದ್ದ ಸಿಬಿಐ
ಇದೇ ತಿಂಗಳ ಮೊದಲ ವಾರದಲ್ಲಿ ದೆಹಲಿಯ ಮಧ್ಯವರ್ತಿಯ ಮನೆಯೊಬ್ಬರ ಮೇಲೆ ಸಿಬಿಐ ದಾಳಿ ನಡೆದಾಗ ರಾಜಕಾರಣಿಗಳಿಗೆ ಹಣ ನೀಡಿದ ಬಗ್ಗೆ ಹಲವು ದಾಖಲೆಗಳು ಹಾಗೂ ಕೋಟ್ಯಂತರ ಹಣ ಸಿಕ್ಕಿತ್ತು ಎಂದ ಹೇಳಲಾಗಿದೆ. ಕೆಲವು ಕೇಂದ್ರ ಸಚಿವರನ್ನು ಕಾಪಾಡಲು ಅಲೋಕ್ ವರ್ಮಾ ಅವರನ್ನು ರಜೆಯ ಮೇಲೆ ಕಳಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಮೋದಿ ಮೆಚ್ಚಿನ ರಾಕೇಶ್ ಅಸ್ಥಾನಾ ಮೇಲೆ ಕೇಸು
ಅಲೋಕ್ ವರ್ಮಾ ಅವರು ಸಂದೇಸರ ಹಾಗೂ ಸ್ಟೆರ್ಲಿಂಗ್ ಬಯೋಟೆಕ್ ಮೇಲಿನ ಪ್ರಕರಣಗಳನ್ನು ತನಿಖೆ ಮಾಡುತ್ತಿದ್ದರು. ಇದೇ ತನಿಖೆಗೆ ಸಂಬಂಧಿಸಿದಂತೆ ಸಿಬಿಐನ ತಮ್ಮ ಅಧೀನ ಅಧಿಕಾರಿ ರಾಕೇಶ್ ಅಸ್ಥಾನಾ ಅವರ ಮೇಲೆ ಅಲೋಕ್ ವರ್ಮಾ ಪ್ರಕರಣ ದಾಖಲಿಸಿದ್ದರು. ಹಾಗೂ ಬಂಧಿಸಲು ಮುಂದಾಗಿದ್ದರು. ರಾಕೆಶ್ ಅಸ್ಥಾನ ಅವರು ಮೋದಿ ಸಂಪುಟದ ಕೃಪಾಕಟಾಕ್ಷ ಇರುವ ಅಧಿಕಾರಿ ಎಂಬ ಮಾತುಗಳು ಅಧಿಕಾರ ವಲಯದಲ್ಲಿದ್ದವು.
ಸೂಕ್ಷ್ಮ ಪ್ರಕರಣ ತನಿಖೆ ಮಾಡುತ್ತಿದ್ದೆ
ತಮ್ಮನ್ನು ರಜೆಯ ಮೇಲೆ ಕಳಿಸಿ ತಮ್ಮ ಸ್ಥಾನಕ್ಕೆ ಬೇರೆಯವರನ್ನು ನೇಮಿಸಿದ ಬಗ್ಗೆ ಸುಪ್ರಿಂನಲ್ಲಿ ಅಲೋಕ್ ವರ್ಮಾ ಅವರು ಪ್ರಶ್ನೆ ಮಾಡಿದ್ದು. ಇಂದು ನಡೆದ ವಿಚಾರಣೆಯಲ್ಲಿ, ತಾವು ಅತಿ ಸೂಕ್ಷ್ಮ ಪ್ರಕರಣದ ತನಿಖೆ ಮಾಡುತ್ತಿದ್ದೆ ಎಂದು ಕೋರ್ಟ್ ಮುಂದೆ ಹೇಳಿದ್ದಾರೆ. ಆದರೆ ತಾವು ಮಾಹಿತಿ ಹಂಚಿಕೊಳ್ಳುವ ವಿರುದ್ಧ ಪ್ರತಿಜ್ಞಾವಿಧಿ ಸ್ವೀಕರಿಸಿರುವ ಕಾರಣ ಮಾಧ್ಯಮಗಳ ಮುಂದೆ ಏನನ್ನೂ ಹೇಳಲಾರೆ ಎಂದು ಅಲೋಕ್ ವರ್ಮಾ ಹೇಳಿದ್ದಾರೆ.