ಅಲೋಕ್ ವರ್ಮಾ ವಿರುದ್ಧ ಭ್ರಷ್ಟಾಚಾರದ ಸಾಕ್ಷಿ ಇಲ್ಲ : ನ್ಯಾ. ಎಕೆ ಪಟ್ನಾಯಕ್
ನವದೆಹಲಿ, ಜನವರಿ 12 : "ಸಿಬಿಐನ ಮಾಜಿ ನಿರ್ದೇಶಕ ಅಲೋಕ್ ವರ್ಮಾ ಅವರು ಭ್ರಷ್ಟಾಚಾರ ಎಸಗಿದ್ದಕ್ಕೆ ಪ್ರತಿಯಾಗಿ ಯಾವುದೇ ಸಾಕ್ಷಿ ಇಲ್ಲ" ಹೀಗೆಂದು ಹೇಳಿಕೆ ನೀಡಿರುವ ನ್ಯಾಯಮೂರ್ತಿ ಎಕೆ ಪಟ್ನಾಯಕ್ ಈ ಪ್ರಕರಣಕ್ಕೆ ಭರ್ಜರಿ ತಿರುವು ನೀಡಿದ್ದಾರೆ.
ಅಲೋಕ್ ವರ್ಮಾ ಅವರ ವಿರುದ್ಧ ಮಾಡಲಾಗಿರುವ ಭ್ರಷ್ಟಾಚಾರದ ಕುರಿತು ಕೇಂದ್ರ ಜಾಗೃತ ಆಯೋಗ (ಸಿವಿಸಿ) ನಡೆಸುತ್ತಿರುವ ತನಿಖೆಯ ಮೇಲ್ವಿಚಾರಣೆಯನ್ನು ಮಾಡಲು ನಿಯೋಜಿಸಿದ್ದ ನ್ಯಾಯಮೂರ್ತಿ ಎಕೆ ಪಟ್ನಾಯಕ್ ಅವರು ಎನ್ಡಿಟಿವಿಗೆ ನೀಡಿರುವ ಹೇಳಿಕೆ ಕೇಂದ್ರ ಸರಕಾರಕ್ಕೆ ಹೊಡೆತ ನೀಡುವಂತಿದೆ.
ವಿವಾದದ ಕೇಂದ್ರಬಿಂದುವಾಗಿರುವ ಅಲೋಕ್ ವರ್ಮಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ, ನ್ಯಾಯಮೂರ್ತಿ ಎಕೆ ಸಿಕ್ರಿ ಮತ್ತು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿದ್ದ ಆಯ್ಕೆ ಸಮಿತಿ 2-1ರ ಬಹುಮತಗಳಿಂದ ಸಿಬಿಐ ನಿರ್ದೇಶಕ ಸ್ಥಾನದಿಂದ ಶುಕ್ರವಾರ ವರ್ಗಾವಣೆ ಮಾಡಿತ್ತು.
ಸಿಬಿಐ ಮಾಜಿ ನಿರ್ದೇಶಕ ಅಲೋಕ್ ವರ್ಮಾ ರಾಜೀನಾಮೆ
ಅಲೋಕ್ ವರ್ಮಾ ಅವರನ್ನು ಅಗ್ನಿಶಾಮಕ ದಳ, ನಾಗರಿಕ ರಕ್ಷಣೆ ಮತ್ತು ಹೋಂಗಾರ್ಡ್ಸ್ ಇಲಾಖೆಯ ಡಿಜಿಯಾಗಿ ವರ್ಗಾವಣೆ ಮಾಡಲಾಗಿದ್ದರೂ, ನರೇಂದ್ರ ಮೋದಿ ಮತ್ತು ನ್ಯಾ. ಎಕೆ ಸಿಕ್ರಿ ಅವರು ನೀಡಿದ ಆದೇಶದಿಂದ ಬೇಸತ್ತು ಪೊಲೀಸ್ ಇಲಾಖೆಗೇ ರಾಜೀನಾಮೆ ನೀಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಮಾತ್ರ ಅಲೋಕ್ ವರ್ಮಾ ಅವರ ಪರವಾಗಿ ನಿಂತಿದ್ದರು.
ಗಡಿಬಿಡಿಯಿಂದ ತೆಗೆದುಹಾಕಬಾರದಿತ್ತು
"ಅಲೋಕ್ ವರ್ಮಾ ಅವರನ್ನು ಸಿಬಿಐ ಹುದ್ದೆಯಿಂದ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿ ತೆಗೆದು ಹಾಕಿರುವುದು ಗಡಿಬಿಡಿಯ ಆದೇಶ" ನ್ಯಾ. ಎಕೆ ಪಟ್ನಾಯಕ್ ಅಭಿಪ್ರಾಯ ಪಟ್ಟಿದ್ದಾರೆ. ಸಿವಿಸಿಯಿಂದ ನಡೆಸಿದ್ದ ತನಿಖೆಯ ಮೇಲ್ವಿಚಾರಣೆ ಪಟ್ನಾಯಕ್ ಅವರು ನಡೆಸಿದ್ದರೂ, ಸಿವಿಸಿ ನೀಡಿದ್ದ ವರದಿಯಲ್ಲಿ ನನ್ನ ಕೈವಾಡವಿಲ್ಲ ಎಂದು ಪಟ್ನಾಯಕ್ ನುಡಿದಿದ್ದಾರೆ. ಮತ್ತೊಬ್ಬ ನಿರ್ಗಮಿತ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ಅವರು ನೀಡಿದ ಭ್ರಷ್ಟಾಚಾರದ ದೂರಿನ ಆಧಾರದ ಮೇಲೆ, ಕೆಲ ದಾಖಲಾತಿಗಳನ್ನು ಪರಿಗಣಿಸಿ ಮತ್ತು ಅಲೋಕ್ ವರ್ಮಾ ಅವರನ್ನೂ ವಿಚಾರಣೆ ನಡೆಸಿ, ಸಿಬಿಐ ನಿರ್ದೇಶಕ ಸ್ಥಾನದಿಂದ ಅಲೋಕ್ ವರ್ಮಾ ಅವರನ್ನು ತೆಗೆದುಹಾಕಬೇಕೆಂದು ಸಿವಿಸಿ ಶಿಫಾರಸು ಮಾಡಿತ್ತು.
ಅಲೋಕ್ ವರ್ಮಾ ಮಹಾನಿರ್ಗಮನದ ಹಿಂದೆ ನಡೆದಿದ್ದು ಏನು?
ತೀರ್ಪು ಬಂದ 24 ಗಂಟೆಯೊಳಗೆ ವರ್ಮಾ ವರ್ಗ
ಅಲೋಕ್ ವರ್ಮಾ ಅವರನ್ನು ಸಿಬಿಐ ನಿರ್ದೇಶಕ ಸ್ಥಾನದಿಂದ ತೆಗೆದು ಬಲವಂತದ ರಜಾ ಮೇಲೆ ಮನೆಗೆ ಕಳಿಸಿದ ನಂತರ, ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಯಾಗಿ, ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ನೇತೃತ್ವದ ವಿಭಾಗೀಯ ಪೀಠ, ಅಲೋಕ್ ವರ್ಮಾ ಅವರನ್ನು ಮತ್ತೆ ಸಿಬಿಐ ನಿರ್ದೇಶಕ ಸ್ಥಾನದ ಮೇಲೆ ತಂದು ಕೂಡಿಸಿತ್ತು. ಇದಾದ 24 ಗಂಟೆಗಳೊಳಗೆ ಮೋದಿ ನೇತೃತ್ವದ ಆಯ್ಕೆ ಸಮಿತಿ ಅಲೋಕ್ ವರ್ಮಾ ಅವರನ್ನು ವರ್ಗಾವಣೆ ಮಾಡಿದೆ. ತ್ವರಿತವಾಗಿ ನಡೆದ ಈ ಬೆಳವಣಿಗೆ ವಿರೋಧ ಪಕ್ಷಗಳ ಭಾರೀ ಆಕ್ರೋಶಕ್ಕೆ ಮತ್ತು ಟೀಕೆಗೆ ಗುರಿಯಾಗಿದೆ.
ಅಲೋಕ್ ವರ್ಮಾರನ್ನು ಅಮಾನತು ಮಾಡಿಲ್ಲ, ವಜಾನೂ ಮಾಡಿಲ್ಲ!
ಸಂಘಟಿತ ಆತ್ಮವಿಮರ್ಶೆಗೆ ಸಕಾಲ
ತಮಗೆ ವಹಿಸಲಾದ ಅಗ್ನಿಶಾಮಕ ದಳ, ನಾಗರಿಕ ರಕ್ಷಣೆ ಮತ್ತು ಹೋಂಗಾರ್ಡ್ಸ್ ಇಲಾಖೆಯ ಡಿಜಿ ಹುದ್ದೆಯನ್ನು ಸಾರಾಸಗಟಾಗಿ ನಿರಾಕರಿಸಿ ರಾಜೀನಾಮೆ ನೀಡಿರುವ ಅಲೋಕ್ ವರ್ಮಾ ಅವರು, ನನಗೆ ಸಹಜ ನ್ಯಾಯವನ್ನು ನಿರಾಕರಿಸಲಾಗಿದ್ದು, ನನ್ನನ್ನು ಸಿಬಿಐ ನಿರ್ದೇಶಕ ಹುದ್ದೆಯಿಂದ ತೆಗೆದುಹಾಕಲೆಂದೇ ಎಲ್ಲ ವರದಿ, ವಿಚಾರಣಾ ಪ್ರಕ್ರಿಯೆಯನ್ನು ತಲೆಕೆಳಗು ಮಾಡಲಾಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ. ಎಲ್ಲರೂ ಸಂಘಟಿತವಾಗಿ ಆತ್ಮವಿಮರ್ಶೆ ಮಾಡಿಕೊಳ್ಳುವ ಕಾಲವಿದು ಎಂದು ಮಾರ್ಮಿಕವಾಗಿ ಅಲೋಕ್ ವರ್ಮಾ ನುಡಿದಿದ್ದಾರೆ.
ಮುಂದೆ ಏನಾಗಲಿದೆ? ಕುತೂಹಲ
ಮುಂದೇನಾಗಲಿದೆ ಎಂಬುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಭ್ರಷ್ಟಾಚಾರದ ಹಗರಣಗಳನ್ನು ಬಲಿಗೆಳೆಯುವ ದೇಶದ ಅತ್ಯುನ್ನತ ಸಂಸ್ಥೆಗಳಲ್ಲೊಂದಾದ ಸಿಬಿಐನಲ್ಲಿಯೇ ಭಾರೀ ಭ್ರಷ್ಟಾಚಾರದ ಮಾತುಗಳು, ಉನ್ನತ ಹುದ್ದೆಯಲ್ಲಿರುವವರಿಂದಲೇ ಲಂಚ ತಿಂದ ಆರೋಪಗಳು, ಹೋಲ್ ಸೇಲ್ ವರ್ಗಾವಣೆಗಳು, ಹಲವಾರು ತನಿಖೆಯ ದಾರಿಯ ದಿಕ್ಕನ್ನೇ ಬದಲಿಸಿದ ಆರೋಪಗಳು ಸಂಸ್ಥೆಯ ಮೇಲೆ ಅಪನಂಬಿಕೆ ಮೂಡಿಸುವಂತೆ ಮಾಡಿವೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಪ್ರಕರಣ ಕೇಂದ್ರ ಸರಕಾರ ಮತ್ತು ವಿರೋಧ ಪಕ್ಷಗಳ ನಡುವೆ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದೆ. ಲೋಕಸಭೆ ಚುನಾವಣೆಯಲ್ಲಿ ಸಿಬಿಐನಲ್ಲಿನ ಭ್ರಷ್ಚಾಚಾರ ಮತ್ತು ಕೇಂದ್ರ ನಡೆದುಕೊಂಡ ರೀತಿ ಮುಖ್ಯ ಚರ್ಚಾ ವಿಷಯವಾಗಿ ಪರಿಣಮಿಸಿದರೂ ಅಚ್ಚರಿಯಿಲ್ಲ.