ಎಲ್ಲ ಬಗೆಯ ಈರುಳ್ಳಿ ರಫ್ತು ನಿಷೇಧಿಸಿದ ಕೇಂದ್ರ ಸರ್ಕಾರ
ನವದೆಹಲಿ, ಸೆಪ್ಟೆಂಬರ್ 29: ಈರುಳ್ಳಿಯು ದೇಶಿ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯಬೇಕು ಹಾಗೂ ಏರುತ್ತಿರುವ ಬೆಲೆಗೆ ಕಡಿವಾಣ ಹಾಕಬೇಕು ಎಂಬ ಕಾರಣಕ್ಕೆ ಈರುಳ್ಳಿ ರಫ್ತಿನ ಮೇಲೆ ಭಾನುವಾರ ಸರ್ಕಾರ ನಿಷೇಧ ಹೇರಿದೆ. "ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲ ಬಗೆಯ ಈರುಳ್ಳಿ ರಫ್ತು ನಿಷೇಧಿಸಲಾಗಿದೆ" ಎಂದು ಡೈರೆಕ್ಟೊರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (ಡಿಜಿಎಫ್ ಟಿ) ಅಧಿಸೂಚನೆಯಲ್ಲಿ ತಿಳಿಸಿದೆ.
ಡಿಜಿಎಫ್ ಟಿಯು ವಾಣಿಜ್ಯ ಸಚಿವಾಲಯದ ಭಾಗವಾಗಿದ್ದು, ರಫ್ತು- ಆಮದು ಸಂಬಂಧಿತ ಸಂಗತಿಗಳನ್ನು ನೋಡಿಕೊಳ್ಳುತ್ತದೆ. ಸೆಪ್ಟೆಂಬರ್ ಹದಿಮೂರನೇ ತಾರೀಕು ಡಿಜಿಎಫ್ ಟಿಯಿಂದ ಕನಿಷ್ಠ ರಫ್ತು ಬೆಲೆಯನ್ನು ಎಂಟು ನೂರಾ ಐವತ್ತು ಅಮೆರಿಕನ್ ಡಾಲರ್ ಗೆ ನಿಗದಿ ಪಡಿಸಿತ್ತು. ಆ ಮೂಲಕ ರಫ್ತಿನ ಮೇಲೆ ಕಡಿವಾಣ ಬೀಳಬಹುದು ಎಂಬ ಲೆಕ್ಕಾಚಾರ ಇತ್ತು.
ಈರುಳ್ಳಿ ದರ ಏರಿಕೆ ಖಂಡಿಸಿ ಪ್ರತಿಭಟನೆ; ರಫ್ತು ತಕ್ಷಣದಿಂದ ರದ್ದು
ಈ ರೀತಿ ಕನಿಷ್ಠ ಬೆಲೆ ನಿಗದಿ ಮಾಡಿದರೆ ಅದಕ್ಕಿಂತ ಕಡಿಮೆ ಬೆಲೆಗೆ ರಫ್ತು ಮಾಡುವಂತಿಲ್ಲ. ದೆಹಲಿ ಹಾಗೂ ದೇಶದ ಇತರ ಭಾಗದಲ್ಲಿ ಕೇಜಿ ಈರುಳ್ಳಿ ಬೆಲೆ ಅರವತ್ತರಿಂದ ಎಂಬತ್ತು ರುಪಾಯಿ ಇದೆ. ಈರುಳ್ಳಿ ಬೆಳೆಯುವಂಥ ಮಹಾರಾಷ್ಟ್ರದಂಥ ರಾಜ್ಯಗಳಲ್ಲಿ ನೆರೆ ಸಮಸ್ಯೆ ಆಗಿ, ಈರುಳ್ಳಿ ಉತ್ಪಾದನೆಯಲ್ಲಿ ಕುಸಿತವಾಗಿದ್ದರಿಂದ ಈ ಸ್ಥಿತಿ ಏರ್ಪಟ್ಟಿತು ಎನ್ನಲಾಗಿದೆ.
ಈರುಳ್ಳಿ ಬೆಳೆಯುವಂಥ ಮಹಾರಾಷ್ಟ್ರ, ಕರ್ನಾಟಕದಲ್ಲಿ ನೆರೆ ಸಮಸ್ಯೆಯಿಂದ ಇಳುವರಿ ಕಡಿಮೆ ಆಯಿತು. ಆದ್ದರಿಂದ ದಾಸ್ತಾನು ಮಾಡಿಟ್ಟುಕೊಂಡು, ಪೂರೈಕೆಗೆ ತೊಂದರೆಯಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.