ಕಾಗದ ರಹಿತ ವಿಧಾನಮಂಡಲ ಅಧಿವೇಶನ; ಪ್ರಹ್ಲಾದ್ ಜೋಶಿ ಹೇಳಿದ್ದೇನು?
ಚಂಡೀಗಢ ಆಗಸ್ಟ್ 10: 'ಒನ್ ನೇಷನ್-ಒನ್ ಅಪ್ಲಿಕೇಷನ್ ಯೋಜನೆಯಡಿ ಕಾಗದರಹಿತ ವಿಧಾನಮಂಡಲ ಅಧಿವೇಶನ ಕಾರ್ಯ ವಿಧಾನವನ್ನು ಜಾರಿಗೊಳಿಸಲು ರಾಜ್ಯಗಳ ಸಹಕಾರ ಅತ್ಯಗತ್ಯ' ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಹರ್ಯಾಣ ವಿಧಾನಸಭೆಯಲ್ಲಿ ಬುಧವಾರ 'ರಾಷ್ಟ್ರೀಯ ಇ-ವಿಧಾನ ಅಪ್ಲಿಕೇಷನ್' (ಎನ್ಇವಿಎ/ನೆವಾ) ತಂತ್ರಾಂಶ ಬಿಡುಗಡೆಗೊಳಿಸಿ ಮಾತನಾಡಿದ ಅವರು, "ಡಿಜಿಟಲ್ ಇಂಡಿಯಾದ ಭಾಗವಾಗಿ ಒನ್ ನೇಷನ್ ಒನ್ ಅಪ್ಲಿಕೇಷನ್ ಯೋಜನೆಯಡಿ ನಾವು ಮುಂದೆ ಸಾಗಬೇಕಾದರೆ ಕಾಗರಹಿತವಾಗಿ ಈ ನೆವಾ ಡಿಜಿಟಲ್ ವಿಧಾನ ಮಂಡಲ ಅಧಿವೇಶನ ಕಾರ್ಯವಿಧಾನ ಜಾರಿಗೆ ತರಬೇಕು. ಇದಕ್ಕೆ ಎಲ್ಲ ರಾಜ್ಯಗಳ ಸಹಕಾರ ಅಗತ್ಯವಿದೆ" ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಂಡೀಗಢ ಪ್ರವಾಸ
ಎಲ್ಲ ರಾಜ್ಯಗಳಲ್ಲಿ ನೇವಾ ಜಾರಿಯಾಗಬೇಕು; "ದೇಶದ ರಾಜ್ಯಗಳ ಸಹಕಾರವಿಲ್ಲದೇ 'ರಾಷ್ಟ್ರೀಯ ಇ-ವಿಧಾನ ಅಪ್ಲಿಕೇಷನ್' (ಎನ್ಇವಿಎ/ ನೆವಾ) ಜಾರಿ ಸುಲಭ ಇಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ಪೂರ್ತಿದಾಯಕ ನಾಯಕತ್ವದಲ್ಲಿ, ನಾವೆಲ್ಲರು 'ಡಿಜಿಟಲ್ ಇಂಡಿಯಾ'ದ ಮಾರ್ಗದಲ್ಲಿ ಮುಂದೆ ಸಾಗುತ್ತಿದ್ದೇವೆ. ಹರ್ಯಾಣದಲ್ಲಿ 'ರಾಷ್ಟ್ರೀಯ ಇ-ವಿಧಾನ್ ಅಪ್ಲಿಕೇಶನ್ (ನೆವಾ) ಬಿಡುಗಡೆ ಒಂದು ಮಹತ್ವದ ಹೆಜ್ಜೆಯಾಗಿದೆ. ಇದು ಎಲ್ಲೆಡೆ ಡಿಜಿಟಲ್ ವಿಧಾನಮಂಡಲ ಕಾರ್ಯ ವಿಧಾನ ಜಾರಿಗೆ ಪ್ರೇರಣೆಯಾಗಲಿದೆ" ಎಂದು ಜೋಶಿ ಅಭಿಪ್ರಾಯ ಪಟ್ಟರು.
"ಪೇಪರ್ ರಹಿತ ಮತ್ತು ಡಿಜಿಟಲ್ ರೂಪದಲ್ಲಿ ವಿಧಾನಸಭೆ ಕಾರ್ಯ ಕಲಾಪಗಳನ್ನು ನಡೆಸುವಲ್ಲಿ'ರಾಷ್ಟ್ರೀಯ ಇ-ವಿಧಾನ್ ಅಪ್ಲಿಕೇಶನ್ (ನೆವಾ) ಹೆಚ್ಚು ಸಹಕಾರಿಯಾಗಿದೆ. ವಿಶೇಷವಾಗಿ ಪ್ರಶ್ನೆಗಳನ್ನು ಟ್ರ್ಯಾಕ್ ಮಾಡಲು ವಿಧಾನಸಭೆಯ ಸದಸ್ಯರಿಗೆ 'ರಾಷ್ಟ್ರೀಯ ಇ-ವಿಧಾನ್ ಅಪ್ಲಿಕೇಶನ್ (ನೆವಾ) ಸಹಾಯ ಮಾಡುತ್ತದೆ. ಅಲ್ಲದೇ ಸರ್ಕಾರದ ಉತ್ತರ, ಕಾಲಿಂಗ್ ಅಟೆಂನ್ಶನ್, ನಿಲುವಳಿ ಸೂಚನೆ ಸೇರಿದಂತೆ ಇತ್ಯಾದಿ ಕಾರ್ಯಕಲಾಪಗಳನ್ನು ಪೇಪರ್ಲೆಸ್ ಮಾಡುವಲ್ಲಿ ರಾಷ್ಟ್ರೀಯ ಇ-ವಿಧಾನ ಅಪ್ಲೀಕೇಶನ್ ಹೆಚ್ಚು ಉಪಯುಕ್ತಕಾರಿ" ಎಂದು ಜೋಶಿ ವಿವರಿಸಿದರು.
16 ರಾಜ್ಯಗಳಲ್ಲಿ 'ನೆವಾ' ಜಾರಿಗೆ ಅನುಮತಿ' ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವಾಲಯವು 'ರಾಷ್ಟ್ರೀಯ ಇ-ವಿಧಾನ ಅಪ್ಲೀಕೇಶನ್' (ನೆವಾ) ಜಾರಿಗೆ ಹೆಚ್ಚಿನ ಗಮನ ಹರಿಸುತ್ತಿದೆ. ಸುಮಾರು 21 ರಾಜ್ಯಗಳು ರಾಷ್ಟ್ರೀಯ ಇ-ವಿಧಾನ ಅಪ್ಲೀಕೇಶನ್ ಜಾರಿಯಲ್ಲಿ ಆಸಕ್ತಿ ತೋರಿವೆ. ಈ ಪೈಕಿ ಈಗಾಗಲೇ 16 ರಾಜ್ಯಗಳಿಗೆ ಜಾರಿಗೆ ಅನುಮತಿ ನೀಡಲಾಗಿದೆ" ಎಂದರು.
"ಉತ್ತರ ಪ್ರದೇಶ, ಬಿಹಾರ, ನಾಗಾಲ್ಯಾಂಡ್ ರಾಜ್ಯಗಳು ಈಗಾಗಲೇ ನೆವಾ ಜಾರಿ ಮಾಡಿಕೊಂಡು ಸಂಪೂರ್ಣ ಡಿಜಿಟಲ್ ಕಾರ್ಯ ಕಲಾಪಗಳನ್ನು ನಡೆಸುತ್ತಿವೆ. ಇದೀಗ ಹರ್ಯಾಣ ಕೂಡ ಈ ರಾಜ್ಯಗಳ ಸಾಲಿಗೆ ಸೇರುತ್ತಿರುವುದು ಸಂತಸದ ಸಂಗತಿ. ಇತರ ರಾಜ್ಯಗಳು ನೇವಾರ ಜಾರಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಕೇಂದ್ರಕ್ಕೆ ಸಹಕರಿಸಬೇಕು. ರಾಜ್ಯಗಳ ಸಹಕಾರದಿಂದ ಮಾತ್ರ ಕೇಂದ್ರ ಸರ್ಕಾರ ಈ ಯೋಜನೆಯನ್ನು ಸಂಪೂರ್ಣವಾಗಿ ಜಾರಿಗೊಳಿಸಲು ಸಾಧ್ಯವಾಗುತ್ತದೆ" ಎಂದು ಪ್ರಹ್ಲಾದ್ ಜೋಶಿ ಹೇಳಿದರು.