ಕೊರೊನಾ ಹೊಡೆತ: ವಿಮೆ, ಭವಿಷ್ಯ ನಿಧಿ, ಮಹಿಳೆಗೆ ಆರ್ಥಿಕ ಬಲ ತಂದ ಸರ್ಕಾರ
ನವದೆಹಲಿ, ಮಾರ್ಚ್ 26: ಕೊರೊನಾವೈರಸ್ ವಿರುದ್ಧ ನಡೆದಿರುವ ನಿರ್ಣಾಯಕ ಹೋರಾಟದಲ್ಲಿ ಆರ್ಥಿಕ ಬಲವಿಲ್ಲದೆ ಸಮಾಜದಲ್ಲಿ ಜನರು ನರಳಬಾರದು ಎಂಬ ಆಶಯದಿಂದ ಕೇಂದ್ರ ಸರ್ಕಾರವು ಗರೀಬ್ ಕಲ್ಯಾಣ್ ಯೋಜನೆಯಡಿಯಲ್ಲಿ ಹಲವು ಸೌಲಭ್ಯಗಳನ್ನು ಕಾರ್ಮಿಕರು, ರೈತರು, ಮಹಿಳೆಯರಿಗೆ ಘೋಷಿಸಲಾಗಿದೆ. ಒಟ್ಟು 1. 70 ಲಕ್ಷ ಕೋಟಿ ರು ಮೊತ್ತದ ಯೋಜನೆ ಪ್ರಕಟಿಸಲಾಗಿದೆ.
ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರ ಸುದ್ದಿಗೋಷ್ಠಿಯ ಮುಖ್ಯಾಂಶಗಳು:
ಸಂಘಟಿತ ವಲಯದಲ್ಲಿ ಇಪಿಎಫ್ : ಶೇ24ರಷ್ಟು ಹಣ ಸರ್ಕಾರವೇ ಭರಿಸಲಿದೆ. ಉದ್ಯೋಗದಾತ ಹಾಗೂ ಉದ್ಯೋಗಿಗಳ ಕೊಡುಗೆಯನ್ನು ಕೇಂದ್ರ ಸರ್ಕಾರವೇ ಭರಿಸಲಿದ್ದು, ಇದು ಮುಂದಿನ ಮೂರು ತಿಂಗಳ ಅವಧಿಗೆ ನೀಡಲಿದೆ.
100 ಉದ್ಯೋಗಿಗಳನ್ನು ಒಳಗೊಂಡ ಸಂಸ್ಥೆಯಾಗಿರಬೇಕು, ಆ ಸಂಸ್ಥೆಯ ಶೇ 90ರಷ್ಟು ಉದ್ಯೋಗಿಗಳು 15 ಸಾವಿರ ರು ಗೂ ಕಡಿಮೆ ತಿಂಗಳ ಆದಾಯ ಹೊಂದಿರಬೇಕು
* ಇಪಿಎಫ್ಒ ನಿಯಂತ್ರಣ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದ್ದು, ಶೇ 75 ರಷ್ಟು ಹಣ ಅಥವಾ ಮೂರು ತಿಂಗಳ ಸಂಬಳ ವಿಥ್ ಡ್ರಾ ಮಾಡಲು ಅನುಮತಿ ಸಿಗಲಿದೆ. ಇದರಿಂದ 4 ಕೋಟಿ 80 ಲಕ್ಷ ಚಂದಾದಾರರಿಗೆ ಅನುಕೂಲವಾಗಲಿದೆ.
ಕಾರ್ಮಿಕ ಕಲ್ಯಾಣ ನಿಧಿ ಬಳಸಿ
ರಾಜ್ಯ ಸರ್ಕಾರಗಳಿಗೆ ಕಾರ್ಮಿಕ ಕಲ್ಯಾಣ ನಿಧಿ ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ. ಇದರಿಂದ 3.5 ಕೋಟಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಆರ್ಥಿಕ ನೆರವು. ರಾಜ್ಯ ಸರ್ಕಾರಗಳ ಬಳಿ ಇರುವ 31 ಸಾವಿರ ಕೋಟಿ ಅನುದಾನ ಬಳಸಲು ಆದೇಶಿಸಲಾಗಿದೆ.
ಕಾರ್ಮಿಕರಿಗೆ ಸೌಲಭ್ಯ: MNREGA ಯೋಜನೆಯಡಿಯಲ್ಲಿ ಪ್ರತಿ ಕಾರ್ಮಿಕರಿಗೆ 200 ರು ಸಿಗಲಿದೆ, 5 ಕೋಟಿ ಜನರಿಗೆ ಇದರಿಂದ ಲಾಭ ಸಿಗಲಿದೆ. 180 ರೂಪಾಯಿ ದಿನಗೂಲಿ 200ಕ್ಕೆ ಏರಿಕೆ ಮಾಡಲು ನಿರ್ಧಾರ.
ಆರೋಗ್ಯ ವಿಮೆ
ಕೊರೊನಾವೈರಸ್ ವಿರುದ್ಧ ಹೋರಾಡುತ್ತಿರುವ ಯೋಧರ ಆರ್ಥಿಕ ಹಾಗೂ ಸುರಕ್ಷತೆಗೆ ಸರ್ಕಾರ ಬದ್ಧವಾಗಿದೆ. ಹೀಗಾಗಿ, ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗಕ್ಕೆ ವೈದ್ಯರು, ನರ್ಸ್, ಪ್ಯಾರಾ ಮೆಡಿಕಲ್ ಸೇರಿದಂತೆ ಎಲ್ಲರಿಗೂ ಆರೋಗ್ಯ ವಿಮೆ ಘೋಷಿಸಲಾಗಿದೆ. 20 ಲಕ್ಷ ಸಿಬ್ಬಂದಿಗೆ ತಲಾ 50 ಲಕ್ಷ ರು ಗಳ ವಿಮೆ ಸುರಕ್ಷತೆ ಸಿಗಲಿದೆ.
ದಿನಸಿ, ಪಡಿತರ ಪೂರೈಕೆ
5 ಕೆಜಿ ಅಕ್ಕಿ ಪ್ರತಿ ವ್ಯಕ್ತಿಗೆ ಮುಂದಿನ ಮೂರು ತಿಂಗಳಿಗೆ ಹೆಚ್ಚುವರಿಯಾಗಿ ನೀಡಲಾಗುತ್ತದೆ. ಇದರ ಜೊತೆಗೆ ಯಾವುದಾದರೂ ಒಂದು ಬೇಳೆ/ಧಾನ್ಯವನ್ನು ಕೂಡಾ ಹೆಚ್ಚುವರಿಯಾಗಿ ಪಡೆಯಬಹುದು. ಈ ಯೋಜನೆಯಡಿಯಲ್ಲಿ ಬಡವರು ಹಸಿವು ಮುಕ್ತರಾಗಬೇಕು ಎಂದು ಮೋದಿ ಆಶಯವಾಗಿದೆ.
ಮುಂದಿನ ಮೂರು ತಿಂಗಳು 5 ಕೆ.ಜಿ ಅಕ್ಕಿ ಅಥವಾ ಗೋಧಿಯನ್ನು ಹೆಚ್ಚುವರಿಯಾಗಿ ಉಚಿತವಾಗಿ ಪಡೆಯಬಹುದು. ಒಂದು ಕೆ.ಜಿ ಬೇಳೆಯನ್ನು ಆಯಾ ಪ್ರದೇಶಕ್ಕೆ ಅನುಸಾರವಾಗಿ ಆಯ್ಕೆ ಮಾಡಿಕೊಳ್ಳಬಹುದು. ಸಾರ್ವಜನಿಕರ ಪಡಿತರ ವ್ಯವಸ್ಥೆಯಲ್ಲಿ ಸಿಗುವ ಅಕ್ಕಿ, ಬೇಳೆ ಜೊತೆಗೆ ಇದು ಹೆಚ್ಚುವರಿಯಾಗಿ ಸಿಗುತ್ತಿರುವ ಸೌಲಭ್ಯವಾಗಿದೆ.
ರೈತರಿಗೆ ತ್ವರಿತವಾಗಿ ಸೌಲಭ್ಯ
ಪಿಎಂ ಕಿಸಾನ್ ಸನ್ಮಾನ್ ಯೋಜನೆಯಡಿಯಲ್ಲಿ ರೈತರಿಗೆ ವಾರ್ಷಿಕವಾಗಿ 6 ಸಾವಿರ ರು ಸಿಗುತ್ತಿದೆ. 8.69 ಕೋಟಿ ರೈತರಿಗೆ ಇದರಿಂದ ತಕ್ಷಣಕ್ಕೆ ಪರಿಹಾರ ಸಿಗಲಿದೆ. ಈ ಯೋಜನೆಯ ಮೊದಲ ಕಂತು 2000 ರು ಗಳನ್ನು ತಕ್ಷಣವೆ ನೀಡಲಾಗುತ್ತಿದೆ, ಏಪ್ರಿಲ್ ಮೊದಲ ವಾರದಿಂದ ನೇರ ನಗದು ಹಣ ವರ್ಗಾವಣೆಯಾಗಲಿದೆ.
ಮಹಿಳೆಯರಿಗೆ ವಿಶೇಷ ಯೋಜನೆ
ಮಹಿಳಾ ಜನಧನ್ ಖಾತೆಗೆ 500 ರು ಪ್ರತಿ ತಿಂಗಳಿಗೆ ಮುಂದಿನ ಮೂರು ತಿಂಗಳ ಅವಧಿಗೆ ಹೆಚ್ಚುವರಿಯಾಗಿ ಖಾತೆಗೆ ಸಿಗಲಿದೆ. ಇದು 20 ಕೋಟಿ ಖಾತೆದಾರರಿಗೆ ಲಾಭವಾಗಲಿದೆ. ಇದರ ಜೊತೆಗೆ ವಯೋವೃದ್ಧರಿಗೆ, ವಿಧವೆಯರಿಗೆ ಪ್ರತಿ ತಿಂಗಳು 1,000 ರೂಪಾಯಿ ಪಿಂಚಣಿ ಹೆಚ್ಚಿಸಲಾಗಿದೆ.
ಉಜ್ವಲ ಯೋಜನೆಯಡಿಯಲ್ಲಿ ಮುಂದಿನ ಮೂರು ತಿಂಗಳಿಗೆ ಉಚಿತ ಅಡುಗೆ ಅನಿಲ ಸಿಲಿಂಡರ್, ಇದರಿಂದ 8.3 ಕೋಟಿ ಬಿಪಿಎಲ್ ಕಾರ್ಡ್ ದಾರರಿಗೆ ಅನುಕೂಲವಾಗಲಿದೆ.
ಸ್ವಯಂ ದೀನ್ ದಯಾಳ್ ಯೋಜನೆ ಯಡಿಯಲ್ಲಿ 10 ಲಕ್ಷ ರು ತನಕ ಸಿಗುತ್ತಿದ್ದ ಸಾಲವನ್ನು 20 ಲಕ್ಷಕ್ಕೇರಿಸಲಾಗಿದೆ. ಇದರಿಂದ 7 ಕೋಟಿ ರು ಜನರಿಗೆ ಅನುಕೂಲವಾಗಲಿದೆ.