ಆರ್ಎಸ್ಎಸ್ ಕಾರ್ಯಕ್ರಮದಲ್ಲಿ ಪ್ರಣವ್ ಮುಖರ್ಜಿ: ಎಲ್ಲರ ಕಣ್ಣು ನಾಗಪುರದೆಡೆಗೆ
ನಾಗಪುರ, ಜೂನ್ 7: ನಾಗಪುರದಲ್ಲಿ ಗುರುವಾರ ನಡೆಯಲಿರುವ ಆರ್ಎಸ್ಎಸ್ನ ಕಾರ್ಯಕ್ರಮದತ್ತ ಎಲ್ಲರ ಕಣ್ಣು ನೆಟ್ಟಿದೆ.
ಮಾಜಿ ರಾಷ್ಟ್ರಪತಿ, ಕಾಂಗ್ರೆಸ್ ಮುಖಂಡ ಪ್ರಣವ್ ಮುಖರ್ಜಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಷಣ ಮಾಡಲಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಸಂಜೆ 6.30ರ ನಂತರ ಪ್ರಣವ್ ಮುಖರ್ಜಿ ಅವರು ಕಾರ್ಯಕ್ರಮದಲ್ಲಿ ಭಾಷಣ ಮಾಡಲಿದ್ದಾರೆ.
ತಮ್ಮ ಬಹುತೇಕ ರಾಜಕೀಯ ಜೀವನವನ್ನು ಕಾಂಗ್ರೆಸ್ನಲ್ಲಿ ಕಳೆದಿರುವ ಪ್ರಣವ್, ವೃತ್ತಿ ಬದುಕಿನುದ್ದಕ್ಕೂ ಆರ್ಎಸ್ಎಸ್ ವಿರುದ್ಧ ಹೇಳಿಕೆಗಳನ್ನು ನೀಡಿಕೊಂಡು ಬಂದಿದ್ದರು. ಈಗ ಅವರು ಆರ್ಎಸ್ಎಸ್ನ ಕೇಂದ್ರ ಕಚೇರಿಯಲ್ಲಿ 'ಸಂಘ ಶಿಕ್ಷ ವರ್ಗ'ದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುತ್ತಿರುವುದು ಅಚ್ಚರಿ ಮೂಡಿಸಿದೆ.
ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾಗ್ಪುರಕ್ಕೆ ಬಂದಿಳಿದ ಪ್ರಣಬ್
ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆರ್ಎಸ್ಎಸ್ ನೀಡಿದ ಆಹ್ವಾನವನ್ನು ಸಂಘ ಪರಿವಾರದ ವಿರೋಧಿಗಳ ಆಕ್ಷೇಪದ ನಡುವೆಯೂ ಪ್ರಣವ್ ಮುಖರ್ಜಿ ಒಪ್ಪಿಕೊಂಡಿದ್ದರು.
ಜಾತ್ಯತೀತತೆಯ ಹಿತಾಸಕ್ತಿಯನ್ನು ರಕ್ಷಣೆ ಮಾಡುವ ಸಲುವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಕಾಂಗ್ರೆಸ್ ಅವರನ್ನು ಒತ್ತಾಯಿಸಿತ್ತು.
ಕಾಂಗ್ರೆಸ್ ಮುಖಂಡರು ಕಡು ವಿರೋಧದ ನಡುವೆಯೂ ಪ್ರಣವ್ ಮುಖರ್ಜಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾಷಣ ಮಾಡಲು ಮುಂದಾಗಿದ್ದಾರೆ.
ಆರೆಸ್ಸೆಸ್ ಕಾರ್ಯಕ್ರಮಕ್ಕೆ ಪ್ರಣವ್ ಮುಖರ್ಜಿ, ಕಾಂಗ್ರೆಸ್ ನಲ್ಲಿ ಕಂಪನ
ಪ್ರಣವ್ ಅವರು ಆರ್ಎಸ್ಎಸ್ ಆಹ್ವಾನವನ್ನು ಒಪ್ಪಿಕೊಂಡ ಬಳಿಕ, ಅವರು ಅಲ್ಲಿಗೆ ತೆರಳಿ ಆರ್ಎಸ್ಎಸ್ನ ಸಿದ್ಧಾಂತಗಳಲ್ಲಿ ಇರುವ ದೋಷಗಳನ್ನು ಎತ್ತಿ ತೋರಿಸಬೇಕು ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಪಿ. ಚಿದಂಬರಂ ಅವರು ಹೇಳಿದ್ದರು.
ಕಾರ್ಯಕ್ರಮದಿಂದ ಹಿಂದಕ್ಕೆ ಸರಿಯುವಂತೆ ಕೋರಿ ಕೇರಳ ವಿಧಾನಸಭೆಯ ನಾಯಕರಾಗಿರುವ ಕಾಂಗ್ರೆಸ್ ಮುಖಂಡ ರಮೇಶ್ ಚೆನ್ನಿತ್ತಲ ಅವರು ಪ್ರಣವ್ ಮುಖರ್ಜಿ ಅವರಿಗೆ ಕಳೆದ ವಾರ ಪತ್ರ ಬರೆದಿದ್ದರು.
ಪ್ರಣವ್ ಮುಖರ್ಜಿ ಅವರ ನಿರ್ಧಾರವು ದೇಶದ ಜಾತ್ಯಾತೀತ ಮನಸುಗಳಿಗೆ ತೀವ್ರ ಆಘಾತ ಉಂಟು ಮಾಡಿದೆ ಎಂದು ಚೆನ್ನಿತ್ತಲ ಅವರು ಹೇಳಿದ್ದರು.
'ದೇಶದ ಪ್ರಥಮ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ ಮತ್ತು ಜಾತ್ಯತೀತತೆಯ ಮಹಾನ್ ರಾಯಭಾರಿಯಾಗಿದ್ದ ವ್ಯಕ್ತಿಯಾಗಿ ನೀವು ಜೂನ್ 7ರಂದು ಆರ್ಎಸ್ಎಸ್ನ ಕಾರ್ಯಕ್ರಮದಲ್ಲಿ ಭಾಗವಿಸುವಿಕೆಯ ಕುರಿತು ಮರು ಆಲೋಚನೆ ಮಾಡಬೇಕು ಎಂದು ಚೆನ್ನಿತ್ತಲ ಮನವಿ ಮಾಡಿದ್ದರು.
ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ಚೌಧರಿ ಮತ್ತು ಕಾಂಗ್ರೆಸ್ ಮುಖಂಡ ವಿ. ಹನುಮಂತ ರಾವ್ ಅವರು ಸಹ ಪ್ರಣವ್ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಾರದು ಎಂದು ಕೋರಿದ್ದರು.
ನಾಗಪುರದಲ್ಲಿ ನಡೆಯಲಿರುವ ಆರ್ಎಸ್ಎಸ್ ಕಾರ್ಯಕ್ರಮದಲ್ಲಿ ಪ್ರಣವ್ ಮುಖರ್ಜಿ ಅವರು ಭಾಗವಹಿಸಲು ಒಪ್ಪಿಕೊಂಡಿರುವುದು ನಿಜಕ್ಕೂ ಅಚ್ಚರಿ ಉಂಟು ಮಾಡಿದೆ. ಕಾಂಗ್ರೆಸ್ನ ಇತರೆ ಸದಸ್ಯರಂತೆ ನನಗೂ ಆಶ್ಚರ್ಯ ಮೂಡಿಸಿದೆ ಎಂದು ಅಧೀರ್ ಚೌಧರಿ ಹೇಳಿದ್ದರು.
'ಆರ್ಎಸ್ಎಸ್ ವಿರುದ್ಧವಾಗಿ ಈ ಹಿಂದೆ ನೀಡಿದ್ದ ಹೇಳಿಕೆಗಳು ತಪ್ಪು ಎಂದು ಪ್ರಣವ್ ಮುಖರ್ಜಿ ಅವರು ಯೋಚಿಸಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ' ಎಂದು ಅವರು ಬೇಸರ ವ್ಯಕ್ತಪಡಿಸಿದ್ದರು.