ಎಲ್ಲರೂ ಕಚೇರಿಗೆ ಬರಬೇಕು: ಕೇಂದ್ರ ಸರ್ಕಾರಿ ನೌಕರರಿಗೆ ಸೂಚನೆ
ನವದೆಹಲಿ, ಫೆಬ್ರವರಿ 15: ಕೇಂದ್ರ ಸರ್ಕಾರದ ಎಲ್ಲ ನೌಕರರೂ ಇನ್ನು ಮುಂದೆ ಕರ್ತವ್ಯದ ದಿನಗಳಂದು ಕಚೇರಿಗೆ ಹಾಜರಾಗಬೇಕು ಎಂದು ಸಿಬ್ಬಂದಿ ಸಚಿವಾಲಯ ಆದೇಶಿಸಿದೆ.
ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದಾದ್ಯಂತ ಸಕ್ರಿಯ ಕೋವಿಡ್-19 ಪ್ರಕರಣಗಳಲ್ಲಿ ಗಣನೀಯ ಇಳಿಕೆಯಾದ ಹಿನ್ನೆಲೆಯಲ್ಲಿ ಎಲ್ಲ ಕೇಂದ್ರ ಸರ್ಕಾರಿ ಉದ್ಯೋಗಿಗಳು ಕಚೇರಿಗೆ ತೆರಳಿ ಕರ್ತವ್ಯ ನಿರ್ವಹಿಸುವಂತೆ ಮಹತ್ವದ ಆದೇಶ ಹೊರಡಿಸಲಾಗಿದೆ.
ಆದರೆ ಕಂಟೇನ್ಮೆಂಟ್ ವಲಯಗಳಲ್ಲಿ ವಾಸಿಸುತ್ತಿರುವ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಚೇರಿಗೆ ತೆರಳುವುದರಿಂದ ವಿನಾಯಿತಿಯನ್ನು ವಿಸ್ತರಿಸಲಾಗಿದೆ. ಕಂಟೇನ್ಮೆಂಟ್ ವಲಯದ ನಿರ್ಬಂಧಗಳನ್ನು ತೆಗೆದುಹಾಕುವವರೆಗೂ ಅವರು ಕಚೇರಿಗೆ ಹೋಗುವ ಅಗತ್ಯವಿಲ್ಲ.
ಸರ್ಕಾರಿ ನೌಕರರು ಭಯದ ವಾತಾವರಣದಲ್ಲಿ ಕೆಲಸ ಮಾಡುವಂತಾಗಿದೆ!
ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಲಾಕ್ಡೌನ್ ಸಹಿತ ಕೋವಿಡ್ ನಿರ್ಬಂಧಗಳನ್ನು ಜಾರಿಗೆ ತರಲಾಗಿತ್ತು. ಅಂದಿನಿಂದ ಅಧೀನ ಕಾರ್ಯದರ್ಶಿ ಹಾಗೂ ಅವರ ಮೇಲಿನ ಹುದ್ದೆಗಳ ಕೇಂದ್ರ ಸರ್ಕಾರಿ ನೌಕರರು ಮಾತ್ರ ಕಚೇರಿಗೆ ಹಾಜರಾಗುತ್ತಿದ್ದರು.
ಶೇ 50ರಷ್ಟು ಅವಕಾಶ ನೀಡಲಾಗಿತ್ತು
ಉಪ ಕಾರ್ಯದರ್ಶಿ ಮಟ್ಟಕ್ಕಿಂತ ಕೆಳಗಿನ ಶೇ 50ರಷ್ಟು ಉದ್ಯೋಗಿಗಳು ವಿಭಿನ್ನ ಅವಧಿಗಳಲ್ಲಿ ಕಚೇರಿಗೆ ಹಾಜರಾಗುವಂತೆ ಮೇ ತಿಂಗಳಲ್ಲಿ ಸರ್ಕಾರ ಸೂಚಿಸಿತ್ತು. ಕಚೇರಿಗಳು ಹಾಗೂ ಕಾರ್ಯಸ್ಥಾನಗಳಲ್ಲಿ ಗುಂಪುಗೂಡುವಿಕೆಯನ್ನು ತಡೆಯಲು ಇಲಾಖೆಯ ಮುಖ್ಯಸ್ಥರ ನಿರ್ಧಾರದಂತೆ ವಿಭಿನ್ನ ಸಮಯಗಳಲ್ಲಿ ನೀತಿ ಅನುಸರಿಸಬಹುದು ಎಂದು ತಿಳಿಸಿತ್ತು.
ಯಾವ ವರ್ಗಕ್ಕೂ ವಿನಾಯಿತಿ ಇಲ್ಲ
'ಎಲ್ಲ ಮಟ್ಟದ ಸರ್ಕಾರಿ ಸೇವಕರು ಯಾವ ವರ್ಗದ ಉದ್ಯೋಗಿಗೂ ಯಾವುದೇ ವಿನಾಯಿತಿ ಇಲ್ಲದಂತೆ ಇನ್ನು ಎಲ್ಲ ಕರ್ತವ್ಯದ ದಿನಗಳಲ್ಲಿಯೂ ಕಚೇರಿಗೆ ಹಾಜರಾಗಬೇಕು' ಎಂದು ಕೇಂದ್ರ ಸರ್ಕಾರದ ಎಲ್ಲ ಇಲಾಖೆಗಳಿಗೆ ಶನಿವಾರ ರಾತ್ರಿ ಆದೇಶ ಹೊರಡಿಸಲಾಗಿದೆ.
ಗುತ್ತಿಗೆ ಆಧಾರದಲ್ಲಿರುವ ನಿವೃತ್ತ ಕೇಂದ್ರ ಸರ್ಕಾರಿ ನೌಕರರ ವೇತನ: ಕರಡು ಮಾರ್ಗದರ್ಶಿ
ಮನೆಯಲ್ಲಿ ಸದಾ ಲಭ್ಯವಿರಬೇಕು
ಮುಂದಿನ ಆದೇಶದವರೆಗೂ ಬಯೋಮೆಟ್ರಿಕ್ ಹಾಜರಾತಿಯನ್ನು ತಡೆಹಿಡಿಸಲಾಗಿದೆ ಎಂದು ಆದೇಶ ತಿಳಿಸಿದೆ. ಕಂಟೇನ್ಮೆಂಟ್ ವಲಯಗಳಲ್ಲಿ ವಾಸಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿ ಮನೆಯಿಂದಲೇ ಕೆಲಸ ನಿರ್ವಹಣೆ ಮುಂದುವರಿಸಬಹುದಾಗಿದ್ದು, ಅವರು ದೂರವಾಣಿ ಮತ್ತು ವಿದ್ಯುನ್ಮಾನ ಸಂವಹನಗಳಲ್ಲಿ ಎಲ್ಲ ಸಮಯಕ್ಕೂ ಲಭ್ಯವಿರಬೇಕು ಎಂದು ಸೂಚಿಸಲಾಗಿದೆ.
ವಿಡಿಯೋ ಕಾನ್ಫರೆನ್ಸ್ ಸಭೆ
ಸಭೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕವೇ ನಡೆಸಬೇಕು. ಸಾರ್ವಜನಿಕ ಹಿತಾಸಕ್ತಿಯ ಅತಿ ಅವಶ್ಯದ ಹೊರತಾಗಿ ಜನರೊಂದಿಗಿನ ವೈಯಕ್ತಿಕ ಸಭೆಗಳನ್ನು ನಡೆಸದಂತೆ ನಿರ್ದೇಶಿಸಲಾಗಿದೆ. ಹಾಗೆಯೇ ಎಲ್ಲ ಇಲಾಖೆಗಳ ಕ್ಯಾಂಟೀನ್ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.