ಪುತ್ರ ವ್ಯಾಮೋಹ ನಿರಂತರ: ನನ್ನ ಮಗನೇ ರಾಜ್ಯದ ಮುಂದಿನ ಸಿಎಂ
ಮುಂಬರುವ ಚುನಾವಣೆಯಲ್ಲಿ ಎಸ್ಪಿ ಗೆದ್ದರೆ ಅಖಿಲೇಶ್ ಯಾದವ್ ಅವರೇ ಮುಂದಿನ ಸಿಎಂ. ಅವರು ಇಷ್ಟು ದಿನ ಸಮರ್ಥವಾಗಿ ಆಡಳಿತ ನಡೆಸಿದ್ದಾರೆ ಮತ್ತು ಅವರು ಮುಖ್ಯಮಂತ್ರಿಯಾಗಲು ಯಾರ ತಕರಾರೂ ಇಲ್ಲ, ಮುಲಾಯಂ ಸಿಂಗ್ ಹೇಳಿಕೆ.
ಕುಟುಂಬ ರಾಜಕಾರಣ ಎನ್ನುವುದು ನಮ್ಮ ದೇಶದಲ್ಲಿ ಯಾವ ಮಟ್ಟಿಗೆ ಇನ್ನೂ ಕೆಲವೊಂದು ಕುಟುಂಬದಲ್ಲಿ ಬೇರೂರಿದೆ ಎಂದರೆ, ಪುತ್ರ ವ್ಯಾಮೋಹಕ್ಕಾಗಿ ತಂದೆ ಧೃತರಾಷ್ಟ್ರನೂ ಆಗಬಲ್ಲ, ಬೇಕಿದ್ದರೆ ಶಕುನಿಮಾಮನೂ ಆಗಬಲ್ಲ.
ದೇಶದ ಸೀಸನ್ ಪೊಲಿಟಿಸಿಯನ್ಸ್ ಪಟ್ಟಿಯಲ್ಲಿ ಮಂಚೂಣಿಯಲ್ಲಿರುವ ರಾಜಕಾರಣಿಗಳ ಪೈಕಿ ಸಮಾಜವಾದಿ ಪಕ್ಷದ ವರಿಷ್ಠ, ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಕೂಡಾ ಒಬ್ಬರು. (ಉ. ಪ್ರದೇಶ ಚುನಾವಣೆ: ಇಂಡಿಯಾ ಟುಡೆ ಸಮೀಕ್ಷೆ)
ಆದರೆ, ಇತ್ತೀಚಿನ ಅವರ ಕೆಲವೊಂದು ರಾಜಕೀಯ ನಿರ್ಧಾರಗಳು ಅವರನ್ನು ಅಸಹಾಯಕತೆಗೆ ದೂಡಿದೆಯೋ ಅಥವಾ ಇದೆಲ್ಲಾ ಚುನಾವಣೆಯ ಹೊಸ್ತಿಲಲ್ಲಿ ಜನರಿಗೆ ಮಂಕುಬೂದಿ ಎರಚಲು ಮಾಡುತ್ತಿರುವ ಪ್ಲಾನ್ ಗಳೇ ಎನ್ನುವುದನ್ನು ಇನ್ನೆರಡು ತಿಂಗಳಲ್ಲಿ ಮತದಾರ ಭವಿಷ್ಯ ಬರೆಯಲಿದ್ದಾನೆ.
ಮಗನನ್ನು ತಂದೆ, ತಂದೆಯನ್ನು ಮಗ ಪಕ್ಷದಿಂದ ಉಚ್ಚಾಟನೆಗೊಳಿಸುವುದು, ಇದಾದ ನಂತರ ಉಚ್ಚಾಟನೆ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳುವಂತಹ ಹುಚ್ಚಾಟನೆಯ ನಿರ್ಧಾರ, ಸಮಾಜವಾದಿ ಪಕ್ಷವನ್ನು ಹುರಿದು ಮುಕ್ಕುತ್ತಿದೆ.
ಇದುವರೆಗಿನ ಚುನಾವಣಾಪೂರ್ವ ಸಮೀಕ್ಷೆಯಲ್ಲಿ ಆಡಳಿತ ನಡೆಸಲು ಬಿಜೆಪಿ ಪರವಾಗಿ ಜನಮತ 60:40 ಇದ್ದರೂ, ಉತ್ತಮ ಸಿಎಂ ಅಭ್ಯರ್ಥಿಗೆ ಅಖಿಲೇಶ್ ಯಾದವ್ ಅವರೇ ಸೂಕ್ತ ಎನ್ನುವ ಜನಾಭಿಪ್ರಾಯ ವ್ಯಕ್ತವಾಗುತ್ತಿರುವ ಹೊತ್ತಿನಲ್ಲಿ ಮುಲಾಯಂ ಸಿಂಗ್ ನನ್ನ ಮಗನೇ ಮುಂದಿನ ಸಿಎಂ ಎಂದಿದ್ದಾರೆ. ಸಮಾಜವಾದಿ ಪಕ್ಷದ ಇತ್ತೀಚಿನ ಕೆಲವೊಂದು ಬೆಳವಣಿಗೆಗಳು, ಮುಂದೆ ಓದಿ..
ಚಿಹ್ನೆ ವಿವಾದ
ಪಕ್ಷದ ಚಿಹ್ನೆಯಾದ ಸೈಕಲ್ ಅನ್ನು ತಮಗೇ ನೀಡಬೇಕೆಂದು ಎರಡೂ ಬಣಗಳು ಚುನಾವಣಾ ಆಯೋಗದ ಮೆಟ್ಟಲೇರಿವೆ. ಎರಡೂ ಬಣದ ಮುಖಂಡರು ತಮ್ಮದೇ ನಿಜವಾದ ಸಮಾಜವಾದಿ ಪಕ್ಷ ಎಂದು ಆಯೋಗದ ಮುಂದೆ ಹೇಳಿಕೆಯನ್ನು ನೀಡಿ, ಸಂಬಂಧಪಟ್ಟ ದಾಖಲೆಗಳನ್ನು ನೀಡಿದ್ದಾರೆ.
ಕಚೇರಿಗಾಗಿ ಹೊಡೆದಾಟ
ಪಕ್ಷದ ಮುಖ್ಯ ಕಚೇರಿ ಅಖಿಲೇಶ್ ಯಾದವ್ ಅವರ ಬಣದ ನಿಯಂತ್ರಣದಲ್ಲಿದೆ. ಮುಲಾಯಂ ಬಣದ ಮುಖಂಡರು ಕಚೇರಿ ಪ್ರವೇಶಿಸುವುದನ್ನು ಭದ್ರತಾ ಸಿಬ್ಬಂದಿಗಳು ತಡೆದಾಗ ಎರಡು ಬಣಗಳ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.
ಮುಲಾಯಂ, ಅಖಿಲೇಶ್
ಮುಂಬರುವ ಚುನಾವಣೆಯಲ್ಲಿ ಎಸ್ಪಿ ಗೆದ್ದರೆ ಅಖಿಲೇಶ್ ಯಾದವ್ ಅವರೇ ಮುಂದಿನ ಸಿಎಂ. ಅವರು ಇಷ್ಟು ದಿನ ಸಮರ್ಥವಾಗಿ ಆಡಳಿತ ನಡೆಸಿದ್ದಾರೆ ಮತ್ತು ಅವರು ಮುಖ್ಯಮಂತ್ರಿಯಾಗಲು ಯಾರ ತಕರಾರೂ ಇಲ್ಲ ಎಂದು ಮುಲಾಯಂ ಸಿಂಗ್, ಪುತ್ರನ ಮೇಲಿನ ವ್ಯಾಮೋಹವನ್ನು ಹೊರಗೆಡವಿದ್ದಾರೆ.
ರಾಜಿ ಸಂಧಾನ
ಪಕ್ಷದಲ್ಲಿ ಅಖಿಲೇಶ್ ಯಾದವ್ ಅವರ ಶಕ್ತಿ ಹೆಚ್ಚುತ್ತಿರುವ ಬೆನ್ನಲ್ಲೇ, ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಕುಟುಂಬದಲ್ಲೂ ಯಾವುದೇ ಸಮಸ್ಯೆಯಿಲ್ಲ. ಒಬ್ಬ ವ್ಯಕ್ತಿಯಿಂದಾಗಿ ಇಷ್ಟೆಲ್ಲಾ ತೊಂದರೆಯಾಗುತ್ತಿರುವುದು. ಅದೇನೇ ಇರಲಿ, ನಾವು ಮತ್ತು ನಮ್ಮ ಕಾರ್ಯಕರ್ತರು ರಾಜಿ ಸಂಧಾನಕ್ಕೆ ಸಿದ್ದ ಎನ್ನುವ ಸಂದೇಶವನ್ನು ಮುಲಾಯಂ ರವಾನಿಸಿದ್ದಾರೆ. ಆದರೆ ಇದಕ್ಕೆ ಅಖಿಲೇಶ್ ಬಣದಿಂದ ಪೂರಕ ಪ್ರತಿಕ್ರಿಯೆ ಬರಬೇಕಷ್ಟೇ.
ಉಚ್ಚಾಟನೆ
ಅಖಿಲೇಶ್ ಜೊತೆ ಗುರುತಿಸಿ ಕೊಂಡಿರುವ ರಾಮಗೋಪಾಲ್ ಯಾದವ್ ವಿರುದ್ಧ ರಾಜ್ಯಸಭೆ ಸಭಾಪತಿ ಹಮೀದ್ ಅನ್ಸಾರಿಗೆ ಮುಲಾಯಂ ಪತ್ರ ಬರೆದಿದ್ದಾರೆ. ರಾಂಗೋಪಾಲ್ ಅವರನ್ನು ಪಕ್ಷದಿಂದ ಹಾಗೂ ರಾಜ್ಯಸಭೆಯ ಲ್ಲಿನ ಪಕ್ಷದ ನಾಯಕ ಸ್ಥಾನದಿಂದ ಉಚ್ಚಾಟಿಸಲಾಗಿದೆ. ಹೀಗಾಗಿ ಅವರನ್ನು ರಾಜ್ಯಸಭೆಯಲ್ಲಿ ಪಕ್ಷದ ನಾಯಕರ ಸ್ಥಾನದಿಂದ ತೆಗೆಯಬೇಕು ಎಂದು ಮನವಿ ಮಾಡಿದ್ದಾರೆ.