ಕಾದುಕಾದು ಸುಸ್ತಾದ ಅಖಿಲೇಶ್ ಕಾಂಗ್ರೆಸ್ಸಿಗೆ ಹೇಳಿದರು ಟಾಟಾ
ನವದೆಹಲಿ, ಅಕ್ಟೋಬರ್ 06 : ಮಧ್ಯಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮಾಯಾವತಿ ಅವರು ಆಘಾತಕರ ಹೇಳಿಕೆ ನೀಡಿದ್ದ ಬೆನ್ನಲ್ಲಿಯೇ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಕಾಂಗ್ರೆಸ್ಸಿಗೆ ಮುಟ್ಟಿ ನೋಡಿಕೊಳ್ಳುವಂಥ ಏಟು ಕೊಟ್ಟಿದ್ದಾರೆ.
ಮೈತ್ರಿಗಾಗಿ ಕಾದು ನಿಂತಿದ್ದ ನಮಗೆ ಕಾಂಗ್ರೆಸ್ ಸಾಕಷ್ಟು ಕಾಯುವಂತೆ ಮಾಡಿದೆ. ಇನ್ನು ಕಾಯಲು ಸಮಯವಿಲ್ಲ. ನಾವು ಬಹುಜನ ಸಮಾಜವಾದಿ ಪಕ್ಷದ ಜೊತೆ ಕೈಜೋಡಿಸುವ ಮಾತುಕತೆ ನಡೆಸಲಿದ್ದೇವೆ. ಮಧ್ಯಪ್ರದೇಶದಲ್ಲಿ ಇನ್ನು ಕಾಂಗ್ರೆಸ್ ಜೊತೆ ಕೈಜೋಡಿಸುವ ಸಾಧ್ಯತೆಯೇ ಇಲ್ಲ ಎಂದು ಅಖಿಲೇಶ್ ಯಾದವ್ ಕಡ್ಡಿ ಮುರಿದಂತೆ ಹೇಳಿಕೆ ನೀಡಿದ್ದಾರೆ.
ಅಲ್ಲಿಗೆ, ಮಧ್ಯಪ್ರದೇಶದಲ್ಲಿ ಹತ್ತು ವರ್ಷಗಳ ನಂತರ ಅಧಿಕಾರವನ್ನು ಮರಳಿ ಪಡೆಯಬೇಕೆಂಬ ಕಾಂಗ್ರೆಸ್ ನಾಯಕರ ಕನಸಿಗೆ ಭಾರೀ ಪೆಟ್ಟು ಬಿದ್ದಂತಾಗಿದೆ. ಒಂದೆಡೆ ಭಾರತೀಯ ಜನತಾ ಪಕ್ಷ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ನೇತೃತ್ವದಲ್ಲಿ ಇನ್ನೂ ಬಲಿಷ್ಠವಾಗಿಯೇ ಇದೆ, ಮತ್ತೊಂದೆಡೆ ತಾವು ಮೈತ್ರಿ ಮಾಡಿಕೊಳ್ಳಬೇಕೆಂದಿದ್ದ ಬಹುಜನ ಸಮಾಜವಾದಿ ಪಕ್ಷ ಮತ್ತು ಸಮಾಜವಾದಿ ಪಕ್ಷಗಳೆರಡೂ ಕಾಂಗ್ರೆಸ್ಸಿನಿಂದ ದೂರ ಸರಿಯುವ ಮಾತಾಡಿವೆ.
ಬಿಜೆಪಿ ವಿರುದ್ಧ ಮಹಾಮೈತ್ರಿಕೂಟ ಸಿದ್ಧವಾಗುತ್ತಿದೆ: ಅಖಿಲೇಶ್
ಅಂದ ಹಾಗೆ, ಕೇಂದ್ರ ಚುನಾವಣಾ ಆಯೋಗ, ವಿಧಾನಸಭೆ ಚುನಾವಣೆಯ ದಿನಾಂಕವನ್ನು ಶನಿವಾರ ಘೋಷಿಸಿದ್ದು, ರಾಜಸ್ತಾನ, ಛತ್ತೀಸಘಡ, ಮಿಜೋರಾಂ ಮತ್ತು ತೆಲಂಗಾಣ ರಾಜ್ಯಗಳ ಜೊತೆ ಮಧ್ಯಪ್ರದೇಶದಲ್ಲಿಯೂ ಚುನಾವಣೆ ನಡೆಯಲಿದ್ದು, ನವೆಂಬರ್ 28ರಂದು ಬುಧವಾರ ಮತದಾನ ನಡೆಯಲಿದ್ದು, ಡಿಸೆಂಬರ್ 11ರಂದು ಮಂಗಳವಾರ ಫಲಿತಾಂಶ ಪ್ರಕಟವಾಗಲಿದೆ. ಈಕ್ಷಣದಿಂದಲೇ ಮಧ್ಯಪ್ರದೇಶದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ಆರಂಭವಾಗಿದೆ.
ಅಸ್ತಿತ್ವದಲ್ಲೇ ಇಲ್ಲದ ಬಹುಜನ ಸಮಾಜವಾದಿ ಪಕ್ಷ
ಉತ್ತರ ಪ್ರದೇಶದಲ್ಲಿ ನಡೆದಿದ್ದ ವಿಧಾನಸಭೆ ಉಪ ಚುನಾವಣೆಯಲ್ಲಿ ಮಾಯಾವತಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಅಖಿಲೇಶ್ ಯಾದವ್ ಅವರು, ಭಾರತೀಯ ಜನತಾ ಪಕ್ಷಕ್ಕೆ ಸೋಲುಣಿಸಿದ್ದರು. ಈಗ ಅದೇ ತಂತ್ರಗಾರಿಕೆಯನ್ನು ಮಧ್ಯಪ್ರದೇಶದಲ್ಲಿಯೂ ಮಾಡುವ ಹವಣಿಕೆಯಲ್ಲಿ ಅಖಿಲೇಶ್ ಇದ್ದಾರೆ. ಆದರೆ, ಮಧ್ಯಪ್ರದೇಶದಲ್ಲಿ ಇರುವುದು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ನೇರಾನೇರ ಕಾಳಗ. ಇಲ್ಲಿ ಬಹುಜನ ಸಮಾಜವಾದಿ ಪಕ್ಷ ಅಸ್ತಿತ್ವದಲ್ಲಿಯೇ ಇಲ್ಲ, ಕಳೆದ ಬಾರಿ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಜಯಗಳಿಸಿತ್ತು. ಆದರೆ ಬಿಎಸ್ಪಿ ಜೊತೆಗೆ ಎಸ್ಪಿ ಮಧ್ಯಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡು ಸಾಧಿಸುವುದಾದರೂ ಏನು ಎಂಬುದು ಪ್ರಶ್ನೆಯಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಅಖಿಲೇಶ್ ರಣತಂತ್ರ
ಕಾದು ಕಾದು ಸುಸ್ತಾದ ಅಖಿಲೇಶ್
ಕಾಂಗ್ರೆಸ್ ಮೈತ್ರಿಗಾಗಿ ಕಾದುಕಾದು ಸುಸ್ತಾದ ಅಖಿಲೇಶ್ ಯಾದವ್ ಅವರು, ನಾವು ಇನ್ನೆಷ್ಟು ಕಾಲ ಕಾಯೋಣ? ನಾವೀಗ ಗೊಂಡ್ವಾಣಾ ಗಣತಂತ್ರ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲಿದ್ದೇವೆ. ಹಿಂದೆಯೂ ಈ ಪಕ್ಷದೊಡನೆ ಕೈಜೋಡಿಸಿದ್ದೇವೆ ಮತ್ತು ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಳ್ಳುವುದು ನಿಶ್ಚಿತ ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಇದರ ಸೂಚನೆಯನ್ನು ಅವರು ಬುಧವಾರವೇ ರಾಹುಲ್ ಗಾಂಧಿ ಅವರಿಗೆ ಕೊಟ್ಟಿದ್ದರು. ಸೀಟು ಹಂಚಿಕೆಯ ಬಗ್ಗೆ ಬೇಗನೆ ನಿರ್ಧಾರ ತಿಳಿಸಿದಿದ್ದರೆ ಇತರ ಪಕ್ಷಗಳು ಇದರ ಲಾಭ ಪಡೆಯುತ್ತವೆ ಎಂದು ಅವರು ತಿಳಿಸಿದ್ದರು. ಆದರೂ, ಕಾಂಗ್ರೆಸ್ ಕಡೆಯಿಂದ ಸಕಾರಾತ್ಮಕ ಸ್ಪಂದನೆ ಬರದಿದ್ದರಿಂದ ಮೈತ್ರಿ ಮುರಿದುಕೊಳ್ಳಲು ಅವರು ನಿರ್ಧರಿಸಿದ್ದಾರೆ.
ಲೋಕಸಭೆ ಚುನಾವಣೆ: ಕರ್ನಾಟಕದಲ್ಲಿ ಬಿಎಸ್ ಪಿ ಸ್ವತಂತ್ರ ಸ್ಪರ್ಧೆ
ಟೀಕಿಸಿದ್ದ ದಿಗ್ವಿಜಯ್ ಗೆ ಮಾಯಾ ತಿರುಗೇಟು
ಭ್ರಷ್ಟಾಚಾರದ ಪ್ರಕರಣಗಳಲ್ಲಿ ಮಾಯಾವತಿ ಅವರ ವಿರುದ್ಧವೇ ತನಿಖೆ ನಡೆಯುತ್ತಿರುವುದರಿಂದ ಬಹುಜನ ಸಮಾಜವಾದಿ ಪಕ್ಷ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದು ಕಷ್ಟ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರು ಹೇಳಿಕೆ ನೀಡಿದ್ದ ಬೆನ್ನಲ್ಲಿಯೇ, ತಿರುಗೇಟು ನೀಡಿದ್ದ ಮಾಯಾವತಿ ಕಾಂಗ್ರೆಸ್ ಜೊತೆ ಮೈತ್ರಿ ಸಾಧ್ಯವೇ ಇಲ್ಲ ಎಂದು ಕೈತೊಳೆದುಕೊಂಡಿದ್ದಾರೆ. ಇಲ್ಲಿ ಮಾತ್ರವಲ್ಲ ರಾಜಸ್ತಾನದಲ್ಲಿಯೂ ಮೈತ್ರಿಗೆ ಅವಕಾಶವೇ ಇಲ್ಲ ಎಂದು ಕಡ್ಡಿತುಂಡು ಮಾಡಿದಂತೆ ಹೇಳಿಕೆ ನೀಡಿದ್ದಾರೆ. ಇದೀಗ ಮಾಯಾವತಿ ಮತ್ತು ಅಖಿಲೇಶ್ ಜೋಡಿ ಉತ್ತರಪ್ರದೇಶದಂತೆ ಮಧ್ಯಪ್ರದೇಶದಲ್ಲಿಯೂ ಒಂದಾಗುತ್ತಿರುವುದು ಕಾಂಗ್ರೆಸ್ಸಿಗೆ ನುಂಗಲಾರದ ತುತ್ತಾಗಿದೆ.
ಲೋಕಸಮರದಲ್ಲಿ ಬಿಜೆಪಿಯನ್ನು ಹಣಿಯಲು ಕಾಂಗ್ರೆಸ್ 'ಉದಾರ ನೀತಿ'
ಕರ್ನಾಟಕದಲ್ಲಿ ರಾಹುಲ್ ಮಾಡಿದ ತಪ್ಪು
ಇದಲ್ಲದೆ, ಎಲ್ಲ ರಾಜ್ಯಗಳಲ್ಲಿ ಎಲ್ಲ ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಒಂದಾಗಬೇಕು ಎಂದು ಹೇಳಿಕೆ ನೀಡುತ್ತಲೇ ಇರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಕರ್ನಾಟಕದಲ್ಲಿ ಮಾಡಿದ ತಪ್ಪನ್ನು ಮಾಡುತ್ತಲೇ ಇದ್ದಾರೆ. ಕರ್ನಾಟಕದಲ್ಲಿ ಕೂಡ ಮಾಯಾವತಿ ಅವರೊಡನೆ ಮೈತ್ರಿಗೆ ಹಿಂದೇಟು ಹಾಕಿದ್ದರಿಂದ ಬಿಎಸ್ಪಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿತ್ತು. ಸದ್ಯಕ್ಕೆ ಮಧ್ಯಪ್ರದೇಶದಲ್ಲಿಯೇ ರಾಹುಲ್ ಗಾಂಧಿ ಅವರು 'ಕಾಂಗ್ರೆಸ್ ಸಂಕಲ್ಪ ಯಾತ್ರೆ'ಯಲ್ಲಿ ತೊಡಗಿದ್ದು, ಮೈತ್ರಿಯ ಬಗ್ಗೆ ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ? ಕಾದು ನೋಡಬೇಕಾಗಿದೆ.