ಬಂಗಲೆ ಖಾಲಿ ಮಾಡುವಾಗ ಟೈಲ್ಸ್ ಕಿತ್ತುಕೊಂಡು ಹೋದ್ರಾ ಅಖಿಲೇಶ್?
ಲಕ್ನೋ, ಜೂನ್ 10: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಉತ್ತರ ಪ್ರದೇಶದ ಸರಕಾರಿ ಬಂಗಲೆಯನ್ನು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಖಾಲಿ ಮಾಡಿದ್ದಾರೆ. ಆದರೆ ಹಾಗೆ ಖಾಲಿ ಮಾಡಿಕೊಂಡು ಹೋಗುವಾಗ ಸರಕಾರಿ ಬಂಗಲೆಯ ವಸ್ತುಗಳನ್ನೂ ತೆಗೆದುಕೊಂಡು ಹೋಗಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಬಿಜೆಪಿಗೆ ಪಾಠ ಕಲಿಸಿದ ಜನರಿಗೆ ಧನ್ಯವಾದ: ಅಖಿಲೇಶ್ ಯಾದವ್
"ಹವಾನಿಯಂತ್ರಕಗಳನ್ನು, ಟೈಲ್ಸ್ ಗಳನ್ನು ಕಿತ್ತು ಹಾಕಬಾರದಿತ್ತು. ಅವುಗಳೆಲ್ಲಾ ಸರಕಾರದ ಆಸ್ತಿಗಳು. ಅವರು ಸುಪ್ರೀಂ ಕೋರ್ಟ್ ನ ಆದೇಶಗಳನ್ನು ಉಲ್ಲಂಘಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯಬೇಕಿದೆ," ಎಂದು ಉತ್ತರ ಪ್ರದೇಶ ಸಚಿವ ಸ್ವತಂತ್ರ ದೇವ್ ಸಿಂಗ್ ಹೇಳಿದ್ದಾರೆ.
ಆದರೆ ಅಖಿಲೇಶ್ ಯಾದವ್ ಟೈಲ್ಸ್ ಗಳನ್ನು ಕಿತ್ತಿಲ್ಲ ಎಂದು ಸಮಾಜವಾದಿ ಪಕ್ಷದ ನಾಯಕ ಸುನಿಲ್ ಯಾದವ್ ಪ್ರತ್ಯುತ್ತರ ನೀಡಿದ್ದಾರೆ.
"ಬಂಗಲೆಯ ಕೀಗಳನ್ನು ಹಸ್ತಾಂತರಿಸಿದ ನಂತರ, ಒಳಗಡೆ ಹಾಳು ಮಾಡುವಂತೆ ಸ್ವತಃ ಸಿಎಂ ಯೋಗಿ ಆದಿತ್ಯನಾಥ್ ಆದೇಶಿಸಿದ್ದರು. ಸರಣಿ ಉಪಚುನಾವಣೆಗಳನ್ನು ಸೋತು ಹತಾಶರಾಗಿರುವ ಮುಖ್ಯಮಂತ್ರಗಳ ಅಖಿಲೇಶ್ ಯಾದವ್ ಜನಪ್ರಿಯತೆಗೆ ಮಸಿ ಬಳೆಯಲು ಈ ರೀತಿ ಮಾಡಿದ್ದಾರೆ," ಎಂದು ಅವರು ದೂರಿದ್ದಾರೆ.