ಏರ್ ಇಂಡಿಯಾದಲ್ಲೂ ಕ್ಯಾಪ್ಟನ್-ಪೈಲಟ್ ಕಿತ್ತಾಟ!
ನವದೆಹಲಿ, ಏ. 6: ದಕ್ಷಿಣ ಫ್ರಾನ್ಸ್ ನಲ್ಲಿ ನಡೆದ ಘೋರ ವಿಮಾನ ದುರಂತಕ್ಕೆ ಪೈಲಟ್ ಗಳ ನಡುವಿನ ಕಿತ್ತಾಟ ಕಾರಣ ಎಂಬುದು ತಿಳಿದು ಬಂದಿತ್ತು. ಈಗ ಇದೇ ಬಗೆಯ ಕಿತ್ತಾಟ ಜೈಪುರದಲ್ಲಿ ನಡೆದ ವರದಿಯಾಗಿದೆ.
ಏರ್ ಇಂಡಿಯಾ ವಿಮಾನದ ಕಾಕ್ ಪಿಟ್ ಕಮಾಂಡರ್ ಮತ್ತು ಆತನ ಸಹದ್ಯೋಗಿ ನಡುವಿನೆ ಗಲಾಟೆಗೆ ಭಾನುವಾರ ಸಾಕ್ಷಿಯಾಗಿದೆ. ಜೈಪುರದಿಂದ ದೆಹಲಿಗೆ ತೆರಳಲಿದ್ದ ಏರ್ ಬಸ್ ಎ-320 ರಲ್ಲಿ ಕೋ-ಪೈಲಟ್ ಮತ್ತು ಕಮಾಂಡರ್ ಪರಸ್ಪರ ಕಿತ್ತಾಡಿಕೊಂಡಿದ್ದಾರೆ
ಇದು ಅವರಿಬ್ಬರ ನಡುವಿನ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ. ಮಾತುಕತೆ ಮೂಲಕ ಇಬ್ಬರು ಉಂಟಾಗಿದ್ದ ಗೊಂದಲ ಬಗೆಹರಿಸಿಕೊಂಡಿದ್ದಾರೆ ಎಂದು ಏರ್ ಇಂಡಿಯಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.[ಏರ್ ಇಂಡಿಯಾ ವಿಮಾನದಲ್ಲಿ ದೋಷ, ತಪ್ಪಿದ ಭಾರೀ ಅನಾಹುತ]
ಜೈಪುರದಿಂದ ವಿಮಾನ ದೆಹಲಿಗೆ ಹಾರಲು ಸಿದ್ಧವಾಗಿತ್ತು. ಈ ಸಂದರ್ಭದಲ್ಲಿ ಕಮಾಂಡರ್ ವಿಮಾನದ ಮಾಹಿತಿಯನ್ನು ಅಂದರೆ, ಪ್ರಯಾಣಿಕರು ಎಷ್ಟಿದ್ದಾರೆ? ತೂಕವೆಷ್ಟು? ಇಂಧನ ಎಷ್ಟು ತುಂಬಿಸಲಾಗಿದೆ? ಎಂಬ ಮಾಹಿತಿ ತಿಳಿಸುವಂತೆ ಕೋಪೈಲಟ್ ಗೆ ಸೂಚಿಸಿದ್ದಾರೆ.
ಮಾಹಿತಿಯನ್ನು ಚಿಕ್ಕ ಪೇಪರ್ ನಲ್ಲಿ ಕೋ ಪೈಲಟ್ ಬರೆದು ಕೊಟ್ಟಿದ್ದಕ್ಕೆ ಕೆಂಡಾಮಂಡಲವಾದ ಕಮಾಂಡರ್ ಈ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಮಾತು ತಾರಕ್ಕೇರಿದ್ದು ಕೈ ಕೈ ಮಿಲಾಯಿಸುವ ಹಂತ ತಲುಪಿದೆ ಎನ್ನಲಾಗಿದೆ.[ಫ್ರಾನ್ಸ್ ನಲ್ಲಿ ವಿಮಾನ ದುರಂತ: 148 ಪ್ರಯಾಣಿಕರ ಸಾವು]
ಕಾಕ್ಪಿಟ್ನಲ್ಲಿ ಕಮಾಂಡರ್ ಮತ್ತು ಆತನ ಸಹಾಯಕನ ನಡುವೆ ಮಾತಿನ ಜಗಳ ನಡೆದದ್ದು ನಿಜ. ಆದರೆ ಅವರದನ್ನು ಅಲ್ಲಿಯೇ ಇತ್ಯರ್ಥಪಡಿಸಿಕೊಂಡು ರಾಜಿಯಾಗಿದ್ದಾರೆ. ಇದು ಯಾವುದೇ ವ್ಯತಿರಿಕ್ತ ಬೆಳವಣಿಗೆ ಬೀರಿಲ್ಲ. ಪ್ರಯಾಣಿಕರ ಭದ್ರತೆಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ ಎಂದಿರುವ ಏರ್ ಇಂಡಿಯಾ ಅಧಿಕಾರಿ ಘಟನೆಗ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ದಕ್ಷಿಣ ಫ್ರಾನ್ಸ್ ನಲ್ಲಿ ಇತ್ತೀಚೆಗೆ ನಡೆದ ಘೋರ ವಿಮಾನ ದುರಂತಕ್ಕೆ ಪೈಲಟ್ ಗಳ ನಡುವಿನ ಕಿತ್ತಾಟವೇ ಕಾರಣ ಎಂದು ನಂತರ ದೊರಕಿದ್ದ ಬ್ಲ್ಯಾಕ್ ಬಾಕ್ಸ್ ಸಾಕ್ಷ್ಯ ದೃಢಪಡಿಸಿತ್ತು.