ನಾನು 'ಆ' ಕುನಾಲ್ ಕಮ್ರಾ ಅಲ್ಲ, ಏರ್ ಇಂಡಿಯಾ ಯಡವಟ್ಟು: ವಿಮಾನವೇರಲು ವ್ಯಕ್ತಿ ಪರದಾಟ
ನವದೆಹಲಿ, ಫೆಬ್ರವರಿ 5: ಕುನಾಲ್ ಕಮ್ರಾ! ಪ್ರಸ್ತುತ ಸುದ್ದಿಯಲ್ಲಿರುವ ಹೆಸರುಗಳಲ್ಲಿ ಇದೂ ಒಂದು. ಇಂಡಿಗೋ ವಿಮಾನದಲ್ಲಿ ಪತ್ರಕರ್ತ ಅರ್ನಬ್ ಗೋಸ್ವಾಮಿಯನ್ನು ಹೀನಾಮಾನ ತರಾಟೆಗೆ ತೆಗೆದುಕೊಂಡಿದ್ದಕ್ಕಾಗಿ ಇಂಡಿಗೋ, ಏರ್ ಇಂಡಿಯಾ, ಗೋಏರ್ ಮತ್ತು ಸ್ಪೈಸ್ ಜೆಟ್ನಿಂದ ನಿರ್ಬಂಧಕ್ಕೆ ಒಳಗಾಗಿರುವ ಹಾಸ್ಯ ಕಲಾವಿದ ಕುನಾಲ್ ಕಮ್ರಾ, ವಿಮಾನಯಾನ ಸಂಸ್ಥೆಗಳು ಮತ್ತು ಕೇಂದ್ರ ಸರ್ಕಾರವನ್ನು ಟೀಕಿಸುವುದನ್ನು ಮುಂದುವರಿಸಿದ್ದಾರೆ.
ಆದರೆ ಕುನಾಲ್ ಕಮ್ರಾ ಎಂಬ ಹೆಸರಿನ ವ್ಯಕ್ತಿ ಒಬ್ಬರೇ ಇರಲು ಸಾಧ್ಯವೇ? ಒಂದೇ ರೀತಿ ಕಾಣಿಸುವವರು, ಒಂದೇ ಹೆಸರುಳ್ಳವರು ಅದೆಷ್ಟು ಮಂದಿಯಿಲ್ಲ? ಆದರೆ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾಕ್ಕೆ ಕಾಣಿಸಿದ್ದು, ಕುನಾಲ್ ಕಮ್ರಾ ಎಂಬ ಹೆಸರು ಮಾತ್ರ. ನೀವು ನಮ್ಮ ವಿಮಾನದಲ್ಲಿ ಪ್ರಯಾಣಿಸುವಂತೆ ಇಲ್ಲ ಎಂದು ಪ್ರಯಾಣಿಕರೊಬ್ಬರನ್ನು ಕೆಳಕ್ಕಿಳಿಸಿದೆ. ವಿಮಾನಯಾನ ಸಂಸ್ಥೆ ಕುನಾಲ್ ಕಮ್ರಾ ಎಂಬ ಹೆಸರಿನ ವ್ಯಕ್ತಿಯೊಬ್ಬರಿಗೆ ನಿಷೇಧ ವಿಧಿಸಿದೆಯೇ ಅಥವಾ ಆ ಹೆಸರಿಗೇ ನಿಷೇಧ ವಿಧಿಸಿದೆಯೇ? ಎಂಬ ಗೊಂದಲದಿಂದ ಪೇಚಿಗೆ ಸಿಲುಕುವ ಸ್ಥಿತಿ ಅವರರು.
ಅರ್ನಬ್ ವಿಡಿಯೋ ಮಾಡಿದ ಕುನಾಲ್ಗೆ ಇದೆಂಥ ಶಿಕ್ಷೆ!
ನಿಜ. ಕುನಾಲ್ ಕಮ್ರಾ ಎಂಬ ಹೆಸರಿನದ್ದೇ ಮತ್ತೊಬ್ಬ ವ್ಯಕ್ತಿಗೆ ವಿಮಾನದಲ್ಲಿ ಪ್ರಯಾಣಿಸಲು ಏರ್ ಇಂಡಿಯಾ ಅವಕಾಶ ನಿರಾಕರಿಸಿರುವುದು ವರದಿಯಾಗಿದೆ. ಈ ವ್ಯಕ್ತಿ, ತಾವು ಪ್ರಯಾಣದಿಂದ ನಿಷೇಧಿಸಿರುವ ಹಾಸ್ಯ ಕಲಾವಿದ ಕುನಾಲ್ ಕಮ್ರಾ ಅಲ್ಲ ಎಂಬುದನ್ನು ಪರಿಶೀಲಿಸುವ ಗೋಜಿಗೂ ಮುಂದಾಗದ ಏರ್ ಇಂಡಿಯಾ ಕ್ರಮ ಟೀಕೆಗೆ ಒಳಗಾಗಿದೆ.
ಬೋಸ್ಟನ್ನಿಂದ ಭಾರತಕ್ಕೆ
ಬೋಸ್ಟನ್ನಲ್ಲಿ ನೆಲೆಸಿರುವ ಕುನಾಲ್ ಕಮ್ರಾ ಎಂಬುವವರು ತಮ್ಮ ಕುಟುಂಬದ ಭೇಟಿಗಾಗಿ ಭಾರತಕ್ಕೆ ಬಂದಿದ್ದಾರೆ. ಜೈಪುರದಿಂದ ಮುಂಬೈಗೆ ತೆರಳಲು ಫೆ. 3ರಂದು ಟಿಕೆಟ್ ಬುಕ್ ಮಾಡಿದ್ದ ಅವರಿಗೆ, ಏರ್ ಇಂಡಿಯಾ ವಿಮಾನದೊಳಗೆ ಪ್ರವೇಶ ನಿರಾಕರಿಸಲಾಗಿದೆ. ಇದಕ್ಕೆ ಕಾರಣ ಅವರ ಹೆಸರು.
ಕಪ್ಪುಪಟ್ಟಿಯಲ್ಲಿ ಕುನಾಲ್ ಕಮ್ರಾ
ಟಿಕೆಟ್ ಕಾಯ್ದಿರಿಸಿದ್ದ ಕುನಾಲ್ ಕಮ್ರಾ, ಚೆಕ್ ಇನ್ ಕೌಂಟರ್ಗೆ ತಲುಪಿದ್ದರು. ಆಗ ಅವರ ಪಿಎನ್ಆರ್ ರದ್ದುಗೊಳಿಸಿರುವುದಾಗಿ ತಿಳಿಸಲಾಯಿತು. 'ನನ್ನ ಪಿಎನ್ಆರ್ ರದ್ದು ಮಾಡಿರುವುದಾಗಿ ಅಲ್ಲಿ ಹೇಳಿದರು. ಏಕೆ ಎಂದು ಅವರನ್ನು ಪ್ರಶ್ನಿಸಿದಾಗ ಅವರು, ನಿಮ್ಮ ಹೆಸರನ್ನು ಕಪ್ಪುಪಟ್ಟಿಯಲ್ಲಿ ಇರಿಸಲಾಗಿದೆ ಎಂದು ಪ್ರತಿಕ್ರಿಯಿಸಿದರು. ಅದು ಏಕೆಂದು ನನಗೆ ಅರ್ಥವಾಗುತ್ತದೆ. ಆದರೆ ನನಗೆ ನನ್ನನ್ನೇ ನಿರ್ದಿಷ್ಟವಾಗಿ ಏಕೆ ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಅರ್ಥವಾಗಲಿಲ್ಲ. ಮತ್ತೊಬ್ಬ ಕುನಾಲ್ ಕಮ್ರಾ ಅವರನ್ನು ಕಪ್ಪುಪಟ್ಟಿಗೆ ಸೇರಿಸಿದ್ದು ಏಕೆ ಎಂದು ನನಗೆ ತಿಳಿದಿತ್ತು' ಎಂದು ವಿವರಿಸಿದರು.
ಇಂಡಿಗೋ ಪ್ರಯಾಣಕ್ಕೆ ಅವಕಾಶವಿಲ್ಲವೇ ಹಾಗಿದ್ರೆ 25 ಲಕ್ಷ ಕೊಡಿ!
ಮತ್ತೊಂದು ಟಿಕೆಟ್ ಸಿಕ್ಕಿತು
'ಏರ್ ಇಂಡಿಯಾ ಸಿಬ್ಬಂದಿ ಬಹಳ ಸಹಕಾರ ನೀಡಿದರು. ಆದರೆ ಅಲ್ಲಿನ ಅನುಭವ ಮಾತ್ರ ಅಹಿತಕರವಾಗಿತ್ತು. ಅದೃಷ್ಟವಶಾತ್ ವಿಮಾನ ಹೊರಡುವ ಮುನ್ನ ಸಾಕಷ್ಟು ಸಮಯವಿತ್ತು. ಹೀಗಾಗಿ ಆ ಅವಧಿಯಲ್ಲಿ ಎಲ್ಲವನ್ನು ಸರಿಪಡಿಸಲಾಯಿತು. ಅವರು ನನಗೆ ಬೇರೊಂದು ಟಿಕೆಟ್ ನೀಡುವುದು ಸಾಧ್ಯವಾಯಿತು. ಆದರೆ ನಾನು 'ಆ ಕುನಾಲ್ ಕಮ್ರಾ' ಅಲ್ಲ ಎಂಬುದನ್ನು ಸಾಬೀತುಪಡಿಸಲು ಹರಸಾಹಸ ಪಡಬೇಕಾಯಿತು. ಇದು ತೀರಾ ಕಿರಿಕಿರಿಯುಂಟುಮಾಡಿತು' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಂದೇ ಹೆಸರಿನವರು ಅನೇಕರು ಇರುತ್ತಾರೆ
'ನನ್ನ ಟಿಕೆಟ್ ರದ್ದು ಮಾಡಲಾಗಿದೆ ಎಂದು ನನಗೆ ಮೊದಲೇ ಮಾಹಿತಿ ನೀಡಿರಲಿಲ್ಲ. ನನ್ನ ಟಿಕೆಟ್ ಏಕೆ ರದ್ದು ಮಾಡಲಾಗಿದೆ ಎಂದು ನನಗೆ ಸೂಕ್ತವಾದ ವಿವರಣೆಯೂ ಸಿಕ್ಕಿರಲಿಲ್ಲ. ನನ್ನ ಹೆಸರು ಮತ್ತೊಬ್ಬರ ಹೆಸರಿನಂತೆಯೇ ಇರುವ ಕಾರಣಕ್ಕಾಗಿ ಮಾತ್ರವೇ ಅವರು ಟಿಕೆಟ್ ರದ್ದುಗೊಳಿಸಬಹುದಾಗಿತ್ತು. ಆದರೆ ಸಮಸ್ಯೆಯೇನೆಂದರೆ, ನೀವು ನನ್ನ ಹೆಸರಿನ ಆಧಾರದಲ್ಲಿಯೇ ಟಿಕೆಟ್ ರದ್ದು ಮಾಡುವುದು ಒಪ್ಪುವಂತಹದ್ದಲ್ಲ. ಏಕೆಂದರೆ ಒಂದೇ ರೀತಿಯ ಹೆಸರಿನ ಅನೇಕ ಜನರು ಇರಬಹುದು' ಎಂದು ಹೇಳಿದರು.
SpiceJet ಏರುವ ಹಾಗಿಲ್ಲ ಹಾಸ್ಯನಟ, ಈ ವಿಡಿಯೋ ಹೇಳುತ್ತಾ ಕಾರಣ!
ಮುಂದಾಲೋಚನೆ ಮಾಡಿದ ಕುನಾಲ್
ಏರ್ ಇಂಡಿಯಾದಿಂದ ಹೇಗೋ ಟಿಕೆಟ್ ಸಿಕ್ಕರೂ, ಮತ್ತೆ ಸಮಸ್ಯೆ ಎದುರಾಗಬಹುದಾಗಿತ್ತು. ಕುನಾಲ್ ಕಮ್ರಾ ಅವರಿಗೆ ಮುಂಬೈ ವಿಮಾನ ನಿಲ್ದಾಣದಿಂದ ದೆಹಲಿಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಬೇಕಿರುವುದರಿಂದ ಮುನ್ನೆಚ್ಚರಿಕೆ ವಹಿಸಿದರು. ವಿಮಾಯಾನ ಸಂಸ್ಥೆಗೆ ಮೊದಲೇ ಕರೆ ಮಾಡಿ, ತಾವು 'ಆ' ಕುನಾಲ್ ಕಮ್ರಾ ಅಲ್ಲ ಎಂದು ತಿಳಿಸಿ ಟಿಕೆಟ್ ಖಾತರಿಪಡಿಸಿಕೊಂಡಿದ್ದರು!
'ಕಲಾವಿದ' ಕುನಾಲ್ ಪ್ರತಿಕ್ರಿಯೆ
ಈ ಸುದ್ದಿಯನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಹಾಸ್ಯ ಕಲಾವಿದ ಕುನಾಲ್ ಕಮ್ರಾ, 'ಕೊಲ್ಯಾಟರಲ್ ಡ್ಯಾಮೇಜ್' (ಗುರಿಯಾಗಿರಿಸಿರುವ ವ್ಯಕ್ತಿ ಬದಲು ಬೇರೆಯವರಿಗೆ ಹಾನಿಯಾಗುವುದು) ಎಂದು ಕಣ್ಣೀರಿನ ಎಮೋಜಿಗಳನ್ನು ಬಳಸಿ ಪ್ರತಿಕ್ರಿಯೆ ನೀಡಿದ್ದಾರೆ.