ಅಸ್ಸಾಂನ ಪ್ರವಾಹ; ವಾಯುಪಡೆಯಿಂದ ಜನರ ಏರ್ಲಿಫ್ಟ್
ಗುವಾಹಟಿ ಮೇ 22: ಅಸ್ಸಾಂನ ಪ್ರವಾಹಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಾಚರಣೆಯನ್ನು ಭಾನುವಾರವೂ ಮುಂದುವರಿಸಿರುವ ಭಾರತೀಯ ವಾಯು ಪಡೆ ಹೆಲಿಕಾಪ್ಟರ್ ಸಹಾಯದಿಂದ ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿದೆ. ನಿರಾಶ್ರಿತರಿಗೆ ಪರಿಹಾರ ಸಾಮಾಗ್ರಿಗಳನ್ನು ಒದಗಿಸುವಲ್ಲಿ ನಿರತವಾಗಿದೆ.
ಅಸ್ಸಾಂನ ಪ್ರವಾಹಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಪಡೆಗಳು ಏರ್ಲಿಫ್ಟ್ ಮೂಲಕ ನಾಗರಿಕರನ್ನು ರಕ್ಷಿಸುತ್ತಿವೆ. ಅಲ್ಲದೇ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ನಿರಾಶ್ರಿತರಿಗೆ ಆಹಾರ ಧಾನ್ಯಗಳು ಮತ್ತು ಪರಿಹಾರ ಸಾಮಾಗ್ರಿಗಳನ್ನು ಒದಗಿಸಲಾಗಿಸುತ್ತಿದೆ. ಇದಕ್ಕಾಗಿ ಸಾರಿಗೆ ವಿಮಾನಗಳು ಮತ್ತು ಹೆಲಿಕಾಪ್ಟರ್ಗಳನ್ನು ನಿಯೋಜಿಸಲಾಗಿದೆ ಎಂದು ಭಾರತೀಯ ವಾಯು ಪಡೆ ಟ್ವೀಟ್ ಮಾಡಿದೆ.
ಎಎನ್-32 ಸಾರಿಗೆ ವಿಮಾನ, ಎರಡು ಎಂಐ-17 ಹೆಲಿಕಾಪ್ಟರ್ಗಳು, ಚಿನೂಕ್ ಹೆಲಿಕಾಪ್ಟರ್ ಮತ್ತು ಎಎಲ್ಎಚ್ ಧ್ರವ್ ಅನ್ನು ನಿಯೋಜಿಸಲಾಗಿದೆ. ಡಿಟೊಕ್ಚೆರಾ ರೈಲು ನಿಲ್ದಾಣದಲ್ಲಿ ಸಿಲುಕಿದ್ದ 119 ಮಂದಿಯನ್ನು ಹೆಲಿಕಾಪ್ಟರ್ಗಳ ಸಹಾಯದಿಂದ ಶನಿವಾರ ಸ್ಥಳಾಂತರಿಸಲಾಗಿದೆ ಎಂದು ಐಎಎಫ್ ತಿಳಿಸಿದೆ.
ಅಸ್ಸಾಂನ ಪ್ರವಾಹಪೀಡಿತ ಸ್ಥಳಗಳಲ್ಲಿ 20 ಎನ್ಡಿಆರ್ಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಮತ್ತು ರಾಜ್ಯ ಸರಕಾರದೊಂದಿಗೆ ಸಮನ್ವಯದಿಂದ ಕಾರ್ಯ ನಿರ್ವಹಿಸಲಾಗತ್ತಿದೆ ಎಂದು ಐಎಎಫ್ ಹೇಳಿದೆ.
ಭಾರತೀಯ ಸೇನೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ಸ್ವಯಂ ಸೇವಕರ ಸಹಾಯದಿಂದ ಇದುವರೆಗೂ ಒಟ್ಟು 24,749 ಮಂದಿಯನ್ನು ರಕ್ಷಿಸಲಾಗಿದೆ. "ರಕ್ಷಣಾ ಕಾರ್ಯಗಳಿಗೆ ನಿಯೋಜಿಸಲಾದ ತಂಡಗಳು ಹೊಜೈ ಜಿಲ್ಲೆಯ ಪ್ರವಾಹ ಪೀಡಿತ ಹಳ್ಳಿಗಳಿಂದ 500 ಜನರನ್ನು ರಕ್ಷಿಸಿದೆ. ಅನೇಕರು ತಮ್ಮ ಮನೆಗಳು ತೊರೆಯಲು ಒಪ್ಪಲಿಲ್ಲ. ಆದ್ದರಿಂದ ಅವರ ಮನೆಗಳಿಗೆ ಪರಿಹಾರ ಮತ್ತು ಪಡಿತರ ಸಾಮಾಗ್ರಿಗಳನ್ನು ಒದಗಿಸಲಾಗಿದೆ'' ಎಂದು ಎನ್ಡಿಆರ್ಎಫ್ ಇನ್ಸ್ಪೆಕ್ಟರ್ ಮಹಿಪ್ ಮೌರ್ಯ ತಿಳಿಸಿದರು.
ಪ್ರವಾಹಪೀಡಿತ ಪ್ರದೇಶಗಳಲ್ಲಿ ಇದುವರೆಗೂ 499 ನಿರಾಶ್ರಿತರ ಶಿಬಿರಗಳು ಮತ್ತು 519 ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಒಟ್ಟು 92,124 ಮಂದಿ ನಿರಾಶ್ರಿತರ ಶಿಬಿರಗಳಲ್ಲಿ ತಂಗಿದ್ದಾರೆ. ಅಸ್ಸಾಂನ 32 ಜಿಲ್ಲೆಗಳ 3,246 ಗ್ರಾಮಗಳ ಒಟ್ಟು 8,39,691 ಮಂದಿ ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ. ಈ ಪೈಕಿ ಆರು ಜಿಲ್ಲೆಗಳಲ್ಲಿ ಭೂಕುಸಿತ ಉಂಟಾಗಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಎಎಸ್ ಡಿಎಂಎ) ಮಾಹಿತಿ ನೀಡಿದೆ.
ಪ್ರವಾಹದಿಂದ ಇದುವರೆಗೆ 14 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ 9 ಮಂದಿ ಪ್ರವಾಹದಿಂದ ಹಾಗೂ 5 ಮಂದಿ ಭೂಕುಸಿತದಿಂದ ಅಸುನೀಗಿದ್ದಾರೆ. ರಾಜ್ಯದಲ್ಲಿ ನೈಸರ್ಗಿಕ ವಿಕೋಪದಿಂದ ಒಟ್ಟು 1,00,732.43 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಅಸ್ಸಾಂನಲ್ಲಿ ಪ್ರವಾಹದ ಸಾಧ್ಯತೆ ಕುರಿತು ಭಾರತೀಯ ಹವಾಮಾನ ಇಲಾಖೆ ಮೊದಲೇ ಮುನ್ಸೂಚನೆ ನೀಡಿತ್ತು.