ಮೋಡದ ಮರೆಯಲ್ಲಿ ರೇಡಾರ್: ಮೋದಿ ಹೇಳಿಕೆಗೆ ಏರ್ ಮಾರ್ಷಲ್ ಸಮರ್ಥನೆ
ಭಟಿಂಡಾ, ಮೇ 27: ದಟ್ಟ ಮೋಡದ ಸಂದರ್ಭದಲ್ಲಿ ಪಾಕಿಸ್ತಾನದ ಗಡಿಯೊಳಗೆ ವಿಮಾನ ನುಗ್ಗಿಸಿ ದಾಳಿ ನಡೆಸುವಂತೆ ಸೇನಾ ಪಡೆಗಳಿಗೆ ಸೂಚನೆ ನೀಡಿದ್ದೆ ಎನ್ನುವ ಮೂಲಕ ತೀವ್ರ ಟೀಕೆಗೆ ಒಳಗಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ವಾಯುಪಡೆಯ ಹಿರಿಯ ಅಧಿಕಾರಿಯೊಬ್ಬರು ಸಮರ್ಥಿಸಿದ್ದಾರೆ.
ತುಂಬಾ ದಟ್ಟವಾದ ಮೋಡಗಳು ಹಾಗೂ ಮೋಡಗಳಲ್ಲಿನ ಸಾಂದ್ರತೆ ಬಲಗೊಳ್ಳುವ ಸಂದರ್ಭದಲ್ಲಿ ರೇಡಾರ್ಗಳು ವಸ್ತುವನ್ನು ನಿಖರವಾಗಿ ಪತ್ತೆಹಚ್ಚುವುದನ್ನು ತಡೆಯುತ್ತವೆ ಎಂದು ಪಶ್ಚಿಮ ಏರ್ ಕಮಾಂಡ್ನ ಕಮಾಂಡಿಂಗ್ ಇನ್ ಚೀಫ್ ರಘುನಾಥ್ ನಂಬಿಯಾರ್ ಹೇಳಿದ್ದಾರೆ.
ಮೋಡವಿದ್ದಾಗ ರೇಡಾರ್ ಪರಿಣಾಮಕಾರಿಯಲ್ಲವೇ? ತಾಂತ್ರಿಕ ವಾಸ್ತವ ಇಲ್ಲಿದೆ
ಬಾಲಕೋಟ್ ವೈಮಾನಿಕ ದಾಳಿಯಲ್ಲಿ ರೇಡಾರ್ ಕಣ್ಣುತಪ್ಪಿಸಲು ಮೋಡಗಳು ಕವಿದ ವಾತಾವರಣವನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದ್ದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಮೋಡಗಳ ನಡುವೆಯೂ ರೇಡಾರ್ಗಳು ವಸ್ತುಗಳನ್ನು ಪತ್ತೆಹಚ್ಚಬಲ್ಲವು. ಮೋದಿ ಅವರ ಹೇಳಿಕೆ ಹಾಸ್ಯಾಸ್ಪದ ಎಂದು ಅನೇಕರು ಟೀಕಿಸಿದ್ದರು.
ಮೋದಿ ಅವರ ಹೇಳಿಕೆಯನ್ನು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಕೇರಳದಲ್ಲಿ ಭಾನುವಾರ ಸಮರ್ಥಿಸಿಕೊಂಡಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ನಂಬಿಯಾರ್ ಹೇಳಿಕೆ ನೀಡಿದ್ದಾರೆ.
ಪ್ರಬಲ ಮೋಡದಲ್ಲಿ ಅಸಾಧ್ಯ
'ಬಹಳ ಪ್ರಬಲವಾದ ಮೋಡ ಹಾಗೂ ಮೋಡಗಳಲ್ಲಿನ ಸಾಂದ್ರತೆಯ ಸನ್ನಿವೇಶಗಳಲ್ಲಿ ಮೋಡಗಳು ರೇಡಾರ್ ಕಣ್ಣಿಗೆ ನಿಖರವಾಗಿ ಪತ್ತೆಹಚ್ಚಲಾಗದಂತೆ ವಸ್ತುಗಳನ್ನು ಆವರಿಸಿಕೊಳ್ಳಬಹುದು ಎನ್ನುವುದು ಸತ್ಯವಾಗಿದೆ ಎಂದು ರಘುನಾಥ್ ನಂಬಿಯಾರ್ ತಿಳಿಸಿದ್ದಾರೆ.
ಕೆಲವು ರೇಡಾರ್ಗಳಿಗೆ ಸಾಮರ್ಥ್ಯವಿಲ್ಲ
'ವಿಭಿನ್ನ ತಂತ್ರಜ್ಞಾನದೊಂದಿಗೆ ಕೆಲಸ ಮಾಡುವ ಹಲವು ಬಗೆಯ ರೇಡಾರ್ಗಳಿವೆ. ಕೆಲವೊಂದು ಮೋಡದ ಮೂಲಕವೂ ಹಾದು ನೋಡುವ ಸಾಮರ್ಥ್ಯ ಹೊಂದಿವೆ. ಕೆಲವೊಂದಕ್ಕೆ ಆ ಸಾಮರ್ಥ್ಯ ಇಲ್ಲ. ಕೆಲವು ಬಗೆಯ ರೇಡಾರ್ಗಳು ಮೋಡಗಳ ಮೂಲಕ ಇಣುಕಿ ನೋಡಲಾರವು. ಏಕೆಂದರೆ, ಅವುಗಳ ಕಾರ್ಯಾಚರಣೆ ರೀತಿ ಹಾಗಿರುತ್ತದೆ. ಕೆಲವೊಮ್ಮೆ ಸಾಧ್ಯ, ಕೆಲವೊಮ್ಮೆ ಅಸಾಧ್ಯ' ಎಂದು ರಾವತ್ ಹೇಳಿದ್ದರು.
ಒನ್ಇಂಡಿಯಾ exclusive : ವಾಯುಸೇನೆ ಬಳಕೆ ಹಿಂದಿನ ಕಾರಣ ಏನು?
ಮೋಡ ಇದ್ದ ದಿನವೇ ದಾಳಿ ನಡೆಸಿ
ನ್ಯೂಸ್ ನೇಷನ್ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು, ಮೋಡಗಳು ಇರುವುದರಿಂದ ಪಾಕಿಸ್ತಾನದ ರೇಡಾರ್ಗಳು ನಮ್ಮ ಯುದ್ಧ ವಿಮಾನಗಳನ್ನು ಪತ್ತೆಹಚ್ಚಲಾರವು. ಹಾಗಾಗಿ ಮೋಡ ಕವಿದ ವಾತಾವರಣವಿದ್ದ ದಿನವೇ ದಾಳಿ ನಡೆಸಿ ಎಂದು ಬಾಲಕೋಟ್ ವೈಮಾನಿಕ ದಾಳಿಯ ಸಂದರ್ಭದಲ್ಲಿ ಸೂಚಿಸಿದ್ದಾಗಿ ಹೇಳಿದ್ದರು.
ಪ್ರತಿಪಕ್ಷಗಳಿಂದ ಟೀಕೆ
ಮೋದಿ ಹೇಳಿಕೆಗೆ ವ್ಯಾಪಕ ಗೇಲಿಗೊಳಗಾಗಿತ್ತು. ಅನೇಕರು ಅದನ್ನು ಟ್ರಾಲ್ ಮಾಡಿದ್ದರು. 'ಭಾರತದಲ್ಲಿ ಮಳೆ ಬಂದಾಗ ಎಲ್ಲ ವಿಮಾನಗಳೂ ರೇಡಾರ್ನಿಂದ ಕಣ್ಮರೆಯಾಗುತ್ತವೆಯೇ?' ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೆಣಕಿದ್ದರು. ದೇಶದಲ್ಲಿ ಮೋಡ ಕವಿದ ವಾತಾವರಣ ಇರುವುದರಿಂದ ಜನರ ರೇಡಾರ್ನಿಂದಲೇ ಪ್ರಧಾನಿ ಮೋದಿ ಕಣ್ಮರೆಯಾಗುವ ಸಾಧ್ಯತೆ ಇದೆ. ರಫೇಲ್ನಂತಹ ಯುದ್ಧವಿಮಾನವನ್ನು ಯಾರು ತಯಾರು ಮಾಡಬೇಕು ಎಂದು ಏಕಾಂಗಿಯಾಗಿ ನಿರ್ಧರಿಸುವಷ್ಟು ಮೋದಿ ದೊಡ್ಡ ರಕ್ಷಣಾ ತಜ್ಞರಾಗಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಟೀಕಿಸಿದ್ದರು.