ಭಾರತ್ ಬಂದ್ಗೆ ಎಐಎಂಟಿಸಿ ಬೆಂಬಲ: 2,000 ಕೋಟಿ ರೂಪಾಯಿ ನಷ್ಟ
ನವದೆಹಲಿ, ಡಿಸೆಂಬರ್ 08: ಮಂಗಳವಾರ ರೈತ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ಗೆ ಬೆಂಬಲ ಘೋಷಿಸಿದ್ದ ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್ಪೋರ್ಟ್ ಕಾಂಗ್ರೆಸ್ (ಎಐಎಂಟಿಸಿ) ಬೆಂಬಲ ಯಶಸ್ವಿಯಾಗಿದ್ದು, ಕಾರ್ಯಾಚರಣೆ ಸ್ಥಗಿತಗೊಳಿಸಿದ ಕಾರಣ 2,000 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಎಐಎಂಟಿಸಿ ಹೇಳಿದೆ.
ಸುಮಾರು 95 ಲಕ್ಷ ಟ್ರಕ್ಗಳು ಸೇರಿದಂತೆ ಇತರೆ ವಾಹನಗಳನ್ನು ಪ್ರತಿನಿಧಿಸುವ ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್ಪೋರ್ಟ್ ಕಾಂಗ್ರೆಸ್ (ಎಐಎಂಟಿಸಿ) ರೈತರ ಹೋರಾಟವನ್ನು ಬೆಂಬಲಿಸಲು ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿತ್ತು.
''ರೈತರಿಗೆ ನೀಡಿದ ಬೆಂಬಲವು ಅತ್ಯಂತ ಯಶಸ್ವಿಯಾಗಿದೆ. ಸುಮಾರು 90 ಲಕ್ಷ ಟ್ರಕ್ಗಳು, ಟೆಂಪೊ, ಟ್ರೇಲರ್ಗಳು ಎಐಎಂಟಿಸಿ ನೀಡಿದ ಕರೆಯ ಮೇರೆಗೆ ಇಂದು ನಿಂತಿದೆ. ಪರಿಣಾಮ ಸಾರಿಗೆ ಉದ್ಯಮವು ಸುಮಾರು 2,000 ಕೋಟಿ ನಷ್ಟವನ್ನು ಅನುಭವಿಸಿದೆ" ಎಂದು ಎಐಎಂಟಿಸಿ ಅಧ್ಯಕ್ಷ ಕುಲ್ತಾರ್ನ್ ಸಿಂಗ್ ಅಟ್ವಾಲ್ ಹೇಳಿದ್ದಾರೆ.
ಜೊತೆಗೆ ರೈತರಿಗೆ ಬೆಂಬಲ ನೀಡುವುದನ್ನು ಮುಂದುವರಿಸುವುದಾಗಿ ಎಐಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ದೇಶದ ಎಲ್ಲಾ 739 ಜಿಲ್ಲೆಗಳು ಮತ್ತು ತಾಲ್ಲೂಕುಗಳ ಸಾರಿಗೆ ಸಂಘಗಳು ಮತ್ತು ಸಂಘಗಳ ಮುಖಂಡರು ಸಹ ಮುಂದೆ ಬಂದು ಎಐಎಂಟಿಸಿಯ ಬ್ಯಾನರ್ ಅಡಿಯಲ್ಲಿ ಶಾಂತಿಯುತ ಪ್ರತಿಭಟನೆಗೆ ಎಐಎಂಟಿಸಿ ಕರೆ ನೀಡಿತ್ತು.