ಎಂಜಿನಿಯರಿಂಗ್ ಪದವಿ ಪ್ರವೇಶಕ್ಕೆ ಗಣಿತ, ಭೌತಶಾಸ್ತ್ರ ಕಡ್ಡಾಯವಲ್ಲ: ಎಐಸಿಟಿಇ
ನವದೆಹಲಿ, ಮಾರ್ಚ್ 12: ಬಿ.ಇ ಹಾಗೂ ಬಿ.ಟೆಕ್ ಕೋರ್ಸ್ಗಳ ದಾಖಲಾತಿಗಾಗಿ 2021-22ನೇ ಸಾಲಿನಿಂದ 12ನೇ ತರಗತಿಯಲ್ಲಿ (ದ್ವಿತೀಯ ಪಿಯು) ಗಣಿತ ಹಾಗೂ ಭೌತಶಾಸ್ತ್ರ ವಿಷಯಗಳನ್ನು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಐಚ್ಛಿಕ ವಿಷಯಗಳನ್ನಾಗಿಸಿದೆ. ಇದು ದೇಶದಲ್ಲಿ ಸೃಷ್ಟಿಯಾಗುವ ಎಂಜಿನಿಯರ್ಗಳ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಭೀತಿ ಎದುರಾಗಿದ್ದು, ಈ ನಡೆ ವಿವಾದ ಸೃಷ್ಟಿಸಿದೆ.
ಇಲ್ಲಿಯವರೆಗೂ ಎಂಜಿನಿಯರಿಂಗ್ ಹಾಗೂ ತಾಂತ್ರಿಕ ಶಿಕ್ಷಣದ ಪದವಿ ಕೋರ್ಸ್ಗಳಲ್ಲಿನ ಪ್ರವೇಶಕ್ಕೆ ಗಣಿತ ಹಾಗೂ ಭೌತಶಾಸ್ತ್ರದ ವಿಷಯಗಳು 12ನೇ ತರಗತಿ ಮಟ್ಟದಲ್ಲಿ ಕಡ್ಡಾಯವಾಗಿದ್ದವು. ಎಐಸಿಟಿಇದ ಹೊಸ ನಿರ್ಧಾರ ವಿದ್ಯಾರ್ಥಿಗಳಿಗೆ ನೆಮ್ಮದಿ ನೀಡುವಂತಿದ್ದರೂ, ಇದರಿಂದ ಎಂಜಿನಿಯರಿಂಗ್ ಗುಣಮಟ್ಟ ಕುಸಿಯಲಿದೆ ಎಂಬ ಆತಂಕ ವ್ಯಕ್ತವಾಗಿದೆ.
ಜೆಇಇ ಮೇನ್ ಪರೀಕ್ಷೆ ಫಲಿತಾಂಶ: ಆರು ಮಂದಿಗೆ ಶೇ 100ರಷ್ಟು ಅಂಕ
ಎಐಸಿಟಿಇ ಬಿಡುಗಡೆ ಮಾಡಿರುವ 2021-22ನೇ ಸಾಲಿನ ಅನುಮೋದಿತ ಪ್ರಕ್ರಿಯೆ ಕೈಪಿಡಿಯಲ್ಲಿ, ಯು.ಜಿ. ದಾಖಲಾತಿಯಲ್ಲಿನ ಅರ್ಹತಾ ಮಾನದಂಡಗಳನ್ನು ಬದಲಿಸಿದೆ. ಈಗ ವಿದ್ಯಾರ್ಥಿಗಳು 10+2 ತರಗತಿಯನ್ನು ಭೌತಶಾಸ್ತ್ರ/ಗಣಿತ/ಜೀವಶಾಸ್ತ್ರ/ರಾಸಾಯನಶಾಸ್ತ್ರ/ಕಂಪ್ಯೂಟರ್ ವಿಜ್ಞಾನ/ಎಲೆಕ್ಟ್ರಾನಿಕ್ಸ್/ಮಾಹಿತಿ ತಂತ್ರಜ್ಞಾನ/ಇನ್ಫಾರ್ಮ್ಯಾಟಿಕ್ಸ್ ಪ್ರಾಕ್ಟೀಸಸ್/ಜೈವಿಕ ತಂತ್ರಜ್ಞಾನ/ತಾಂತ್ರಿಕ ವಿಷಯ/ಕೃಷಿ/ಎಂಜಿನಿಯರಿಂಗ್ ಗ್ರಾಫಿಕ್ಸ್/ಬ್ಯುಸಿನೆಸ್ ಸ್ಟಡೀಸ್/ಎಂಟರ್ಪ್ರಿನರ್ಶಿಪ್- ಈ ವಿಷಯಗಳಲ್ಲಿ ಯಾವುದೇ ಮೂರು ವಿಷಯಗಳಲ್ಲಿ ಉತ್ತೀರ್ಣರಾದರೆ ಸಾಕು ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.
ಶೇ 45ರಷ್ಟು ಅಂಕಗಳು ಅಗತ್ಯ
ವಿದ್ಯಾರ್ಥಿಗಳು ಈ ಮೇಲಿನವುಗಳಲ್ಲಿ ಯಾವುದೇ ಮೂರು ವಿಷಯಗಳಲ್ಲಿ ಒಟ್ಟಾರೆ ಶೇ 45ರಷ್ಟು ಅಂಕಗಳನ್ನು (ಮೀಸಲಾತಿಯ ವಿದ್ಯಾರ್ಥಿಗಳಿಗೆ ಶೇ 40ರಷ್ಟು ಅಂಕ) ಪಡೆಯಬೇಕು. ವೈವಿಧ್ಯಮಯ ಹಿನ್ನೆಲೆಗಳಿಂದ ಎಂಜನಿಯರಿಂಗ್ಗೆ ಬರುವ ವಿದ್ಯಾರ್ಥಿಗಳಲ್ಲಿನ ಈ ಕೋರ್ಸ್ ಕಲಿಕೆಯ ಸಾಧನೆಯ ಫಲಿತಾಂಶವನ್ನು ಉತ್ತಮಪಡಿಸಲು ವಿಶ್ವವಿದ್ಯಾಲಯಗಳು ಗಣಿತ, ಭೌತಶಾಸ್ತ್ರ, ಎಂಜಿನಿಯರಿಂಗ್ ಡ್ರಾಯಿಂಗ್ನಂತಹ ಬ್ರಿಡ್ಜ್ ಕೋರ್ಸ್ಗಳನ್ನು ಕಲ್ಪಿಸಬಹುದಾಗಿದೆ ಎಂದು ಎಐಸಿಟಿಇ ತಿಳಿಸಿದೆ.
ಬ್ರಿಡ್ಜ್ ಕೋರ್ಸ್ ಪರಿಹಾರವಲ್ಲ
ಎಐಸಿಟಿಇಯ ಈ ನಿರ್ಧಾರಕ್ಕೆ ತೀವ್ರ ಟೀಕೆಗಳು ವ್ಯಕ್ತವಾಗಿವೆ. 'ಗಣಿತದಲ್ಲಿ ಹಿಂದಿರುವವರಿಗೆ ಬ್ರಿಡ್ಜ್ ಕೋರ್ಸ್ಗಳು ಪರಿಹಾರವಾಗಲಾರವು. ಇದು ಉನ್ನತ ಮಟ್ಟದ ಗಣಿತವನ್ನು ಕಲಿಸಲಾರದು. ಎಂಜಿನಿಯರಿಂಗ್ ಪದವಿಗಳಿಗೆ ಗಣಿತ ಮೂಲ ನೆಲೆಗಟ್ಟಿನ ವಿಷಯವಾಗಿದೆ' ಎಂದು ಸಾಸ್ತ್ರಾ ವಿಶ್ವವಿದ್ಯಾಲಯದ ಉಪ ಕುಲಪತಿ ಎಸ್ ವೈದ್ಯಸುಬ್ರಮಣಿಯಮ್ ಹೇಳಿದ್ದಾರೆ.
ಗ್ರಾಮೀಣ ಎಂಜಿನಿಯರಿಂಗ್ ಕಾಲೇಜುಗಳ ಸುಮಾರು 1200 ಬೋಧಕರಿಗೆ ನಿರುದ್ಯೋಗ ಭೀತಿ
ಎಐಸಿಟಿಇ ಸಮರ್ಥನೆ
'ಇದು ಆಯ್ಕೆಯ ಪ್ರಶ್ನೆಯಲ್ಲ. ಎಂಜಿನಿಯರಿಂಗ್ ಶಿಕ್ಷಣದ ಒಳವಿಚಾರಗಳ ವಿಸ್ತರಣೆಯ ಅಗತ್ಯವಾಗಿ ಈ ಮೂರು ಕಡ್ಡಾಯ ಕೋರ್ಸ್ಗಳ ಆಯ್ಕೆಯು ಬೇಕಾಗಿವೆ. ಹೀಗಾಗಿ ಮೂರು ವಿಭಿನ್ನ ಕಡ್ಡಾಯ ಕೋರ್ಸ್ಗಳಿಗೆ ಮೂರು ವಿಭಿನ್ನ ವಿಷಯಗಳು ಇರಬಹುದು' ಎಂದು ಎಐಸಿಟಿಇ ಅಧ್ಯಕ್ಷ ಅನಿಲ್ ಸಹಸ್ರಬುಧೆ ಸಮರ್ಥಿಸಿಕೊಂಡಿದ್ದಾರೆ.
ಬ್ರಿಡ್ಜ್ ಕೋರ್ಸ್ ನೆರವಾಗಲಿದೆ
'ಗಣಿತ ವಿಷಯ ಕಲಿಯದ ವಿದ್ಯಾರ್ಥಿ ಎಂಜಿನಿಯರಿಂಗ್ಗೆ ಪ್ರವೇಶ ಪಡೆದರೆ, ಆತ ಮೊದಲ ವರ್ಷ ಗಣಿತದ ಮೇಲೆ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಇದಕ್ಕೂ ಮುನ್ನ ಡಿಪ್ಲೊಮಾ ಪದವಿಯಿಂದ ನೇರ ಎರಡನೆಯ ವರ್ಷಕ್ಕೆ ಪ್ರವೇಶ ಪಡೆದವರಿಗೆ ಕೂಡ ಹೆಚ್ಚುವರಿ ಗಣಿತ ಕೋರ್ಸ್ ಬೇಕಾಗುತ್ತಿತ್ತು. ಇದು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಾಕಷ್ಟು ಹೊಂದಾಣಿಕೆಯನ್ನು ತರುತ್ತದೆ. ಎಂಜಿನಿಯರಿಂಗ್ ಅರ್ಥಮಾಡಿಕೊಳ್ಳಲು ಗಣಿತ, ಭೌತಶಾಸ್ತ್ರದ ಅಗತ್ಯ ಇರುವವರು, ಭೌತಶಾಸ್ತ್ರ ಮತ್ತು ಗಣಿತದಲ್ಲಿ ಕಲಿತವರ ಮಟ್ಟಕ್ಕೆ ಬರಲು ಬ್ರಿಡ್ಜ್ ಕೋರ್ಸ್ಗಳನ್ನು ಪಡೆಯಬೇಕಾಗುತ್ತದೆ' ಎಂದಿದ್ದಾರೆ.
ವಿಜ್ಞಾನದ ಕಲಿಕೆಯೇ ದುರ್ಬಲವಾಗುತ್ತದೆ
'ಗಣಿತ ಹಾಗೂ ಭೌತಶಾಸ್ತ್ರವಿಲ್ಲದೆ ವಿಜ್ಞಾನದ ಮೂಲಭೂತ ಕಲಿಕೆ ಬಹಳ ದುರ್ಬಲವಾಗಿರುತ್ತದೆ. ವಿಜ್ಞಾನದಲ್ಲಿ ಗಟ್ಟಿಯಾದ ಬುನಾದಿಯಿಲ್ಲದೆ ನಮ್ಮ ಭವಿಷ್ಯದ ಎಂಜಿನಿಯರ್ಗಳು ಸೂಕ್ತ ಎಂಜಿನಿಯರಿಂಗ್ ಮಾಡಲು ಸಾಧ್ಯವಾಗದು. ಅದು ಆವಿಷ್ಕಾರ ಬಳಿಕ ಕೆಟ್ಟ ಪರಿಣಾಮ ಬೀರಲಿದೆ' ಎಂದು ಮದ್ರಾಸ್ ವಿಶ್ವವಿದ್ಯಾಲಯದ ಭೌತವಿಜ್ಞಾನದ ಮುಖ್ಯಸ್ಥೆ ರೀಟಾ ಜಾನ್ ಹೇಳಿದ್ದಾರೆ.