ಲೋಕಸಭಾ ಚುನಾವಣೆ: ಅಮೇಥಿಯಿಂದ ಮಹಾರಾಷ್ಟ್ರದತ್ತ ರಾಹುಲ್ ಗುಳೆ?
ಒಂದು ಕಾಲದಲ್ಲಿ ನೆಹರೂ-ಗಾಂಧಿ ಕುಟುಂಬದ ಭದ್ರಕೋಟೆಯಾಗಿದ್ದ ಉತ್ತರಪ್ರದೇಶದಲ್ಲಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಮೈತ್ರಿ ಮಾಡಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದರೂ, ಕಾಂಗ್ರೆಸ್ ಜೊತೆ ಮೈತ್ರಿ ಎಸ್ಪಿ ಮತ್ತು ಬಿಎಸ್ಪಿಗೆ ಬೇಕಾಗಿಲ್ಲ.
ಕಳೆದ ಚುನಾವಣೆಯಲ್ಲಿ ಅಮೇಠಿ ಮತ್ತು ರಾಯ್ ಬರೇಲಿ ಕ್ಷೇತ್ರವನ್ನು ಮಾತ್ರ ಗೆದ್ದಿದ್ದ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಅದನ್ನು ಉಳಿಸಿಕೊಳ್ಳುವುದೂ ದುಸ್ತರವಾಗಿ ಕಾಣುತ್ತಿದೆ. ಹಾಗಾಗಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ದೇಶದ ಪಶ್ಚಿಮ ಭಾಗದ ಕಾಂಗ್ರೆಸ್ಸಿನ ಭದ್ರಕೋಟೆಯೊಂದರಿಂದ ಸ್ಪರ್ಧಿಸುವ ಸಾಧ್ಯತೆಯಿದೆ.
ಸಕ್ರಿಯ ರಾಜಕಾರಣದಿಂದ ದೂರ ಉಳಿದಿರುವ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಬಾರಿ ಕಣಕ್ಕಿಳಿಯುವುದು ಅನುಮಾನ. ಹಾಗಾಗಿ, ರಾಯ್ ಬರೇಲಿಯಿಂದ ಪಕ್ಷದ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವ ಪ್ರಶ್ನೆಗೆ, ಪ್ರಿಯಾಂಕ ವಾಧ್ರ ಕಡೆಗೆ ಬೊಟ್ಟು ತೋರಿಸಲಾಗುತ್ತಿದೆ.
'ಸಾಕ್ಷ್ಯ ಇಲ್ಲಿದೆ ನೋಡಿ ರಾಹುಲ್, ಈಗ ದೇಶದ ಜನರ ಕ್ಷಮೆ ಕೇಳ್ತೀರಾ?'
ರಾಹುಲ್ ಗಾಂಧಿ ಕರ್ನಾಟಕದ ಬೀದರ್ ನಿಂದ ಸ್ಪರ್ಧಿಸಬಹುದು ಎನ್ನುವ ಸುದ್ದಿ ಹರಿದಾಡುತ್ತಿತ್ತು. ಈಗ, ರಾಹುಲ್ ಗಾಂಧಿ ಮಹಾರಾಷ್ಟ್ರದ ಕಾಂಗ್ರೆಸ್ ಪ್ರಭಲ ಕೋಟಿಯೊಂದರಿಂದ ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನುವ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ.
ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದರು
ಆಂತರಿಕ ಸಮೀಕ್ಷೆಯ ಪ್ರಕಾರ, ಕಳೆದ ಚುನಾವಣೆಯಲ್ಲಿ ರಾಹುಲ್ ಗಾಂಧಿ, ತಮ್ಮ ಬಿಜೆಪಿ ಪ್ರತಿಸ್ಪರ್ಧಿ ಸ್ಮೃತಿ ಇರಾನಿ ಎದುರು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದರೂ, ಈಗಿನ ಪರಿಸ್ಥಿತಿ ಎಐಸಿಸಿ ಅಧ್ಯಕ್ಷರಿಗೆ ಅಷ್ಟೊಂದು ಪೂರಕವಾಗಿಲ್ಲ. ಹಾಗಾಗಿ, ರಿಸ್ಕ್ ತೆಗೆದುಕೊಳ್ಳಲು ಮುಂದಾಗದೇ, ಸೇಫ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ ಎನ್ನುವ ಕಾರಣಕ್ಕಾಗಿ ರಾಹುಲ್, ಮಹಾರಾಷ್ಟ್ರದತ್ತ ಚಿತ್ತ ಹರಿಸಿದ್ದಾರೆ.
ನೋಟ್ ಬ್ಯಾನ್ ಮೂಲಕ ದೇಶದ ಪ್ರಗತಿ ನಾಶ ಮಾಡಿದ ಮೋದಿ: ರಾಹುಲ್
ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಸ್ಮೃತಿ ಇರಾನಿಯವರನ್ನು ಘೋಷಿಸಿತ್ತು
ಅಮೇಠಿಯಲ್ಲಿ ಕಳೆದ ಬಾರಿ, ಚುನಾವಣೆಗೆ ಸ್ವಲ್ಪದಿನಗಳ ಮುನ್ನ ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಸ್ಮೃತಿ ಇರಾನಿಯವರನ್ನು ಘೋಷಿಸಿತ್ತು. ಸ್ವಲ್ಪ ಸಮಯದಲ್ಲೇ ಉತ್ತಮ ಪ್ರಚಾರ ಮಾಡಿದ್ದ ಸ್ಮೃತಿ, ಮೂರು ಲಕ್ಷಕ್ಕೂ ಹೆಚ್ಚಿನ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಚುನಾವಣೆಗೆ ಪೂರ್ವತಯಾರಿ ಮತ್ತು ಸಂಘಟಿತ ಪ್ರಯತ್ನ ನಡೆಸಿದ್ದರೆ, ರಾಹುಲ್ ಗಾಂಧಿಗೆ ಸೋಲಾಗುತ್ತಿತ್ತು ಎನ್ನುವ ಸುದ್ದಿ ಆ ವೇಳೆ ಚಾಲ್ತಿಯಲ್ಲಿತ್ತು.
ಪ್ರತಿಯೊಬ್ಬ ಭಾರತೀಯನು ಪ್ರಧಾನಿ ಮೋದಿಗೆ ಈ ಪ್ರಶ್ನೆಯನ್ನು ಕೇಳಬೇಕಿದೆ, ರಾಹುಲ್
ಮಹಾರಾಷ್ಟ್ರದ ನಾಂದೇಡ್ ಕ್ಷೇತ್ರದಿಂದ ರಾಹುಲ್
ಕೆಲವು ಮೂಲಗಳ ಪ್ರಕಾರ, ರಾಹುಲ್ ಗಾಂಧಿ ಮಹಾರಾಷ್ಟ್ರದ ನಾಂದೇಡ್ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆಯಿದೆ. ಕಾಂಗ್ರೆಸ್ಸಿನ ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ, ಲೋಕಸಭಾ ಚುನಾವಣೆಯ ಇತಿಹಾಸಲ್ಲಿ ಇದುವರೆಗೆ ಎರಡು ಬಾರಿ ಮಾತ್ರ ಕಾಂಗ್ರೆಸ್ ಸೋತಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್, ಮಹಾರಾಷ್ಟ್ರದಲ್ಲಿ ಗೆದ್ದಿದ್ದು ಎರಡೇ ಕ್ಷೇತ್ರದಲ್ಲಿ, ಅದರಲ್ಲಿ ಒಂದು ನಾಂದೇಡ್ ಇನ್ನೊಂದು ಹಿಂಗೋಳಿ. ನಾಂದೇಡ್ ಕ್ಷೇತ್ರದ ಹಾಲೀ ಸಂಸದ ಅಶೋಕ್ ಚವಾಣ್.
ಬಿಜೆಪಿ-ಶಿವಸೇನೆ ಮೈತ್ರಿಯಾಗದೇ ಇದ್ದ ಪಕ್ಷದಲ್ಲಿ
ಮಹಾರಾಷ್ಟ್ರದಲ್ಲಿ ಒಂದು ವೇಳೆ ಬಿಜೆಪಿ-ಶಿವಸೇನೆ ಮೈತ್ರಿಯಾಗದೇ ಇದ್ದ ಪಕ್ಷದಲ್ಲಿ, ಕಾಂಗ್ರೆಸ್ಸಿಗೆ ಅಲ್ಲಿ ಕಳೆದ ಚುನಾವಣೆಗಿಂತ ಉತ್ತಮ ಸಾಧನೆ ತೋರುವ ಅವಕಾಶವಿರುತ್ತದೆ. ಎನ್ಸಿಪಿ ಜೊತೆ ಮೈತ್ರಿ ಮಾಡಿಕೊಳ್ಳುವುದು ಬಹುತೇಕ ಅಂತಿಮವಾಗಿರುವಾಗ, ಕಾಂಗ್ರೆಸ್ ಇಲ್ಲಿ ಹೆಚ್ಚಿನ ಸೀಟು ಗೆಲ್ಲಲು ಪ್ರಯತ್ನ ನಡೆಸದೇ ಇರದು. ಜೊತೆಗೆ, ರಾಹುಲ್ ಗಾಂಧಿಗೂ ಸೇಫ್ ಸೀಟಿನ ಅವಶ್ಯಕತೆಯಿದೆ. ಹಾಗಾಗಿ, ಕಾಂಗ್ರೆಸ್, ನಾಂದೇಡ್ ನಿಂದ ರಾಹುಲ್ ಅವರನ್ನು ಕಣಕ್ಕಿಳಿಸಬಹುದು.
ಅಮೇಠಿಯಿಂದ ವರುಣ್, ರಾಯ್ ಬರೇಲಿಯಿಂದ ಪ್ರಿಯಾಂಕ
ಉತ್ತರಪ್ರದೇಶದಲ್ಲಿ ಹರಿದಾಡುತ್ತಿರುವ ಸುದ್ದಿಯಂತೆ, ಒಂದು ವೇಳೆ ವರುಣ್ ಗಾಂಧಿ, ಬಿಜೆಪಿಗೆ ಗುಡ್ ಬೈ ಹೇಳಿ, ಕಾಂಗ್ರೆಸ್ ಪಕ್ಷಕ್ಕೆ ಸೇರಿದರೆ, ಅವರನ್ನು ಅಮೇಠಿಯಿಂದ ಕಣಕ್ಕಿಳಿಸಿ, ಪ್ರಿಯಾಂಕ ವಾಧ್ರಾರನ್ನು ರಾಯ್ ಬರೇಲಿಯಿಂದ ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಬಹುದು. ಬಿಎಸ್ಪಿ-ಎಸ್ಪಿ ಮೈತ್ರಿಯ ನಂತರ, ಉತ್ತರಪ್ರದೇಶದಲ್ಲಿ ಕಾಂಗ್ರೆಸ್ಸಿಗೆ ಅಷ್ಟೇನೂ ಉತ್ತಮ ವಾತಾವರಣವಿಲ್ಲ ಎನ್ನುವುದನ್ನು ಕಾಂಗ್ರೆಸ್ ಕೂಡಾ ಅರಿತಿದೆ.