ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ 'ಕಮರಿದ' ಇನ್ನೊಂದು ಹೆಸರು
Recommended Video
ಶತಮಾನಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಬಹುಷಃ ಈ ರೀತಿಯ ಸನ್ನಿವೇಶವನ್ನು ಹಿಂದೆ ಎದುರಿಸಿರಲಿಕ್ಕಿಲ್ಲ. ಲೋಕಸಭಾ ಚುನಾವಣಾ ಫಲಿತಾಂಶದ ನಂತರ ರಾಹುಲ್ ಗಾಂಧಿಯವರಿಂದ ತೆರವಾದ ಈ ಆಯಕಟ್ಟಿನ ಜಾಗಕ್ಕೆ ಇನ್ನೂ ಯಾರ ಹೆಸರೂ ಅಂತಿಮವಾಗಿಲ್ಲ.
ಗಾಂಧಿ - ನೆಹರೂ ಕುಟುಂಬದವರನ್ನೇ ಪರಿಗಣಿಸಬೇಕು ಎನ್ನುವ ಕಾಂಗ್ರೆಸ್ ಹಿರಿಯ ಮುಖಂಡರ ಒತ್ತಾಯ ಫಲ ನೀಡುತ್ತಿಲ್ಲ. ನೀವೇ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂದು ರಾಹುಲ್ ಅವರನ್ನು ಹಲವು ಬಾರಿ ಮನವೊಲಿಸುವ ಪ್ರಯತ್ನವೂ ವರ್ಕೌಟ್ ಆಗಲಿಲ್ಲ.
ಪಕ್ಷಾಧ್ಯಕ್ಷರ ಆಯ್ಕೆ ವಿಳಂಬವಾದಷ್ಟೂ ಪಕ್ಷಕ್ಕೇ ಅಪಾಯ: ಶಶಿ ತರೂರ್
ಅನಾರೋಗ್ಯದ ಕಾರಣದಿಂದಾಗಿ ಸೋನಿಯಾ ಗಾಂಧಿಯೂ ಮತ್ತೆ ಆ ಪಟ್ಟಕೇರಲು ಮನಸ್ಸು ಮಾಡುತ್ತಿಲ್ಲ. ಸಚಿನ್ ಪೈಲಟ್, ಜ್ಯೋತಿರಾದಿತ್ಯ ಸಿಂಧಿಯಾ..ಹೀಗೆ ಹಲವು ಹೆಸರುಗಳು ಈ ಹುದ್ದೆಗೆ ಕೇಳಿಬಂದರೂ, ಇನ್ನೂ ಯಾರನ್ನೂ ಅಂತಿಮವಾಗಿ ಆಯ್ಕೆ ಮಾಡಬೇಕು ಎನ್ನುವ ಗೊಂದಲದಲ್ಲಿ ಕಾಂಗ್ರೆಸ್ ಇದ್ದಂತಿದೆ.
ಪ್ರಿಯಾಂಕಾ ಗಾಂಧಿ ವಾದ್ರಾ ಹೆಗಲಿಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟ?!
ಪ್ರಿಯಾಂಕಾ ಗಾಂಧಿಯನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಬೇಕು ಒತ್ತಾಯಕ್ಕೆ ಪ್ರಿಯಾಂಕ, ಗುರುವಾರ (ಆ 1) ಅತ್ಯಂತ ಸ್ಪಷ್ಟವಾಗಿ 'ನೋ' ಎಂದಿದ್ದಾರೆ. ಆ ಮೂಲಕ, ತನ್ನ ಹಳೆಯ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಪ್ರಿಯಾಂಕ ಸಾರಿದ್ದಾರೆ.
ರಾಜೀವ್ ಗಾಂಧಿಯವರ 75ನೇ ಜನ್ಮದಿನಾಚರಣೆ
ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ 75ನೇ ಜನ್ಮದಿನಾಚರಣೆ (ಆ 20) ಸಂಬಂಧ, ಗುರುವಾರ ಕರೆಯಲಾಗಿದ್ದ ಸಭೆಯಲ್ಲಿ, ' ಅಧ್ಯಕ್ಷ ಹುದ್ದೆಗೆ ಪ್ರಿಯಾಂಕ ಗಾಂಧಿಯೇ ಸೂಕ್ತ ಆಯ್ಕೆ' ಎನ್ನುವ ಒತ್ತಾಯ ಕೇಳಿ ಬಂದಿದೆ. ಇದಕ್ಕೆ,' ಅಧ್ಯಕ್ಷ ಹುದ್ದೆಗೆ ಯಾವ ಕಾರಣಕ್ಕೂ ನನ್ನ ಹೆಸರನ್ನು ಎಳೆದು ತರಬೇಡಿ' ಎಂದು ಪ್ರಿಯಾಂಕ ತಾಕೀತು ಮಾಡಿದ್ದಾರೆಂದು ವರದಿಯಾಗಿದೆ.
ಕಾಂಗ್ರೆಸ್ಸಿನ ಕಾರ್ಯಕಾರಿಣಿ ಸಮಿತಿ (CWC)
ಹಾಲೀ ಲೋಕಸಭಾ ಅಧಿವೇಶನ ಮುಗಿದ ನಂತರ, ಕಾಂಗ್ರೆಸ್ಸಿನ ಕಾರ್ಯಕಾರಿಣಿ ಸಮಿತಿ (CWC) ನಡೆಯಲಿದೆ ಎಂದು ಕಾಂಗ್ರೆಸ್ ಪ್ರಕಟಿಸಿತ್ತು. ಹಾಗಾಗಿ, ಗುರುವಾರದ (ಆ 1) ಸಭೆಯಲ್ಲಿ, ಅಧ್ಯಕ್ಷರು ಯಾರಾಗಬಹುದು ಎನ್ನುವ ಸ್ಪಷ್ಟ ಸುಳಿವು ಸಿಗಬಹುದು ಎನ್ನುವ ಮಾತು ಕೇಳಿ ಬರುತ್ತಿತ್ತು. ಜೊತೆಗೆ, ಪ್ರಿಯಾಂಕ ಗಾಂಧಿ ವಾದ್ರಾ ಅವರ ಹೆಸರು ಅಂತಿಮವಾಗಬಹುದು ಎನ್ನುವ ಸುದ್ದಿ ಹರಿದಾಡುತ್ತಿತ್ತು.
ಆ ಹುದ್ದೆಗೆ ನನ್ನನ್ನು ಪರಿಗಣಿಸಬೇಡಿ, ಪ್ರಿಯಾಂಕ
ಈಗ, 'ಆ ಹುದ್ದೆಗೆ ನನ್ನನ್ನು ಪರಿಗಣಿಸಬೇಡಿ' ಎಂದು ಪ್ರಿಯಾಂಕ, ಖಡಾಖಂಡಿತವಾಗಿ ಹೇಳುವ ಮೂಲಕ, ರಾಹುಲ್ ಗಾಂಧಿಯವರ ಜಾಗಕ್ಕೆ ಯಾರು ಎನ್ನುವ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಗುತ್ತಿಲ್ಲ. ಹಲವು ಕಾಂಗ್ರೆಸ್ ಮುಖಂಡರು, ಅಧ್ಯಕ್ಷರ ಆಯ್ಕೆ ತುರ್ತಾಗಿ ಆಗಬೇಕಿದೆ ಎಂದು ಒತ್ತಾಯಿಸುತ್ತಲೇ ಬರುತ್ತಿದ್ದಾರೆ.
ತಿರುವನಂತಪುರಂ ಕ್ಷೇತ್ರದ ಕಾಂಗ್ರೆಸ್ ಸಂಸದ ಶಶಿ ತರೂರ್ ಎಚ್ಚರಿಕೆ
"ಅಧ್ಯಕ್ಷ ಪಟ್ಟ ಹಲವು ದಿನಗಳ ಕಾಲ ಖಾಲಿ ಉಳಿದರೆ ಅದು ಪಕ್ಷಕ್ಕೇ ಅಪಾಯಕಾರಿ, ಅದರಿಂದ ಪಕ್ಷದಲ್ಲಿ ಬಿರುಕು ಮೂಡಬಹುದು" ಎಂದು ತಿರುವನಂತಪುರಂ ಕ್ಷೇತ್ರದ ಕಾಂಗ್ರೆಸ್ ಸಂಸದ ಶಶಿ ತರೂರ್ ಎಚ್ಚರಿಕೆ ನೀಡಿದ್ದರು. 'ಪ್ರಿಯಾಂಕಾ ಗಾಂಧಿ ಅವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆರಿಸುವ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ನೀಡಿದ ಹೇಳಿಕೆಯನ್ನು ನಾನು ಬೆಂಬಲಿಸುತ್ತೇನೆ. ಆದರೆ ಪ್ರಿಯಾಂಕಾ ಗಾಂಧಿ ಅವರು ಆಯ್ಕೆ ಮಾಡಿದ ಅಧ್ಯಕ್ಷರಾಗಬೇಕು, ನೇಮಿಸಿದ ಅಧ್ಯಕ್ಷರಾಗಬಾರದು" ಎಂದು ಶಶಿ ತರೂರ್ ಹೇಳಿದ್ದರು.
ಪಂಜಾಬ್ ಮುಖ್ಯಮಂತ್ರಿ ಕ್ಯಾ.ಅಮರೀಂದರ್ ಸಿಂಗ್ ಕೂಡಾ ಬೆಂಬಲ
"ಇದನ್ನು ಸ್ಥಾನ ತ್ಯಜಿಸುತ್ತಿರುವ ಅಧ್ಯಕ್ಷರು ನಿರ್ಧರಿಸಬೇಕು. ಪ್ರಿಯಾಂಕಾ ಗಾಂಧಿ ಅವರು ಅಧ್ಯಕ್ಷರಾಗುವುದಾದರೆ ಅದಕ್ಕೆ ನಮ್ಮೆಲ್ಲರ ಬೆಂಬಲವಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪಕ್ಷದ ಅಧ್ಯಕ್ಷರಾಗುವುದಾದರೆ ಅದಕ್ಕೆ ಪಕ್ಷದ ಎಲ್ಲರೂ ಬೆಂಬಲ ಸೂಚಿಸುತ್ತೇವೆ" ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾ.ಅಮರೀಂದರ್ ಸಿಂಗ್ ಕೂಡಾ ಬೆಂಬಲ ವ್ಯಕ್ತ ಪಡಿಸಿದ್ದರು.