ದೆಹಲಿ ತಲುಪಿದ ತಮಿಳುನಾಡು ಕಾವೇರಿ ಹೋರಾಟ, ಅಡಕತ್ತರಿಯಲ್ಲಿ ಕೇಂದ್ರ
ನವದೆಹಲಿ, ಮಾರ್ಚ್ 19: ಕಾವೇರಿ ನಿರ್ವಹಣಾ ಮಂಡಳಿ ಮತ್ತು ಕಾವೇರಿ ನೀರು ಮೇಲುಸ್ತುವಾರಿ ಸಮಿತಿ ರಚನೆ ಮಾಡುವಂತೆ ಕೇಂದ್ರದ ಮೇಲೆ ಒತ್ತಡ ಹೇರುತ್ತಿರುವ ತಮಿಳುನಾಡು ಸಂಸದರು ಇಂದು ಸಂಸತ್ ಆವರಣದಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಗುರುವಾರ ನಡೆದ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಕಾವೇರಿ ನಿರ್ವಹಣಾ ಮಂಡಳಿ ಮತ್ತು ಕಾವೇರಿ ನೀರು ಮೇಲುಸ್ತುವಾರಿ ಸಮಿತಿ ರಚನೆ ಮಾಡುವಂತೆ ಕೇಂದ್ರದ ಮೇಲೆ ಒತ್ತಡ ಹೇರುವ ನಿರ್ಣಯವನ್ನು ತಮಿಳುನಾಡು ತೆಗೆದುಕೊಂಡಿತ್ತು. ಅದರ ಅನ್ವಯ ಇದೀಗ ದೆಹಲಿಯಲ್ಲಿ ಎಐಎಡಿಎಂಕೆ ಸಂಸದರು ಪ್ರತಿಭಟನೆ ಆರಂಭಿಸಿದ್ದಾರೆ.
ಕಾವೇರಿ ನಿರ್ವಹಣಾ ಮಂಡಳಿಗಾಗಿ ಎಐಎಡಿಎಂಕೆ ಸಂಸದರ ಪ್ರತಿಭಟನೆ
ಈ ಸಂಬಂಧ ಇಂದು ವಿಧಾನಸಭೆಯಲ್ಲಿ ಮಾತನಾಡಿದ ತಮಿಳುನಾಡು ಉಪಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ, "ನಮ್ಮ ತಮಿಳುನಾಡು ಸರಕಾರ ಎಂದಿಗೂ ರಾಜ್ಯವನ್ನು ಕೆಳಗಿಳಿಸುವುದಿಲ್ಲ. ಸುಪ್ರೀಂ ಕೋರ್ಟ್ ಸರಕಾರ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ 6 ವಾರಗಳ ಸಮಯ ನೀಡಿದೆ. ಏನೂ ನಡೆಯದೇ ಇದ್ದಲ್ಲಿ ನಾವೆಲ್ಲಾ ಚರ್ಚೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳೋಣ," ಎಂದು ಹೇಳಿದ್ದಾರೆ.
ಅಡಕತ್ತರಿಯಲ್ಲಿ ಕೇಂದ್ರ
ಒಂದೆಡೆ ತಮಿಳುನಾಡು ಕಾವೇರಿ ನಿರ್ವಹಣಾ ಮಂಡಳಿ ಮತ್ತು ಕಾವೇರಿ ನೀರು ಮೇಲುಸ್ತುವಾರಿ ಸಮಿತಿ ರಚನೆಗೆ ಪಟ್ಟು ಹಿಡಿದಿದ್ದರೆ ಕರ್ನಾಟಕ ಮಂಡಳಿ ರಚನೆಗೆ ವಿರೋಧ ವ್ಯಕ್ತಪಡಿಸಿದೆ.
ಈ ಕುರಿತು ಕರ್ನಾಟಕದಲ್ಲಿ ನಡೆದಿದ್ದ ಸರ್ವಪಕ್ಷ ಸಭೆಯಲ್ಲಿ ಇತ್ತೀಚೆಗೆ ನಿರ್ಣಯ ಕೈಗೊಳ್ಳಲಾಗಿತ್ತು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಈ ಸಂಬಂಧ ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿ ಮನವಿಯನ್ನೂ ಸಲ್ಲಿಸಿದ್ದರು.
ಹೀಗಿರುವಾಗ ಒಂದೊಮ್ಮೆ ಕೇಂದ್ರ ಮಂಡಳಿ ಮತ್ತು ಸಮಿತಿ ರಚಿಸಿದರೆ ಕರ್ನಾಟಕದ ಜನರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಕರ್ನಾಟಕದಲ್ಲಿ ಸದ್ಯದಲ್ಲೇ ಚುನಾವಣೆ ಬರಲಿರುವುದರಿಂದ ಮಂಡಳಿ ಮತ್ತು ಸಮಿತಿ ರಚಿಸಿ ಕನ್ನಡಿಗರ ವಿರೋಧ ಕಟ್ಟಿಕೊಳ್ಳಲು ಕೇಂದ್ರ ಸರಕಾರ ಸಿದ್ಧವಿಲ್ಲ.
ಈ ಎಲ್ಲಾ ಕಾರಣಗಳಿಂದ ಕಾವೇರಿ ಕೇಂದ್ರ ಸರಕಾರದ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.