ಜಯಾ ಅನಾರೋಗ್ಯ: ಎಐಎಡಿಎಂಕೆ ಎಂಪಿಯಿಂದ ಸಿಬಿಐ ತನಿಖೆಗೆ ಒತ್ತಾಯ
ಚೆನ್ನೈ, ಅ 11: ಕಳೆದ ಕೆಲವು ವಾರಗಳಿಂದ ಆಸ್ಪತ್ರೆಗೆ ದಾಖಲಾಗಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಆರೋಗ್ಯದ ಬಗ್ಗೆ ಸಿಬಿಐ ತನಿಖೆಗೆ ಆದೇಶ ನೀಡಬೇಕೆಂದು ಉಚ್ಚಾಟಿತ ಎಐಎಡಿಎಂಕೆ ಸಂಸದೆ ಶಶಿಕಲಾ ಆಗ್ರಹಿಸಿದ್ದಾರೆ.
ಜಯಾ ಆರೋಗ್ಯದ ವಿಚಾರದಲ್ಲಿ ಕಾರ್ಯಕರ್ತರಲ್ಲಿ ಮತ್ತು ಅವರ ಅಭಿಮಾನಿಗಳಲ್ಲಿ ಸಾಕಷ್ಟು ಗೊಂದಲವಿದೆ. ಸರಕಾರದ ದೈನಂದಿನ ಕೆಲಸದ ಮೇಲೆ ಜಯಾ ಗೆಳತಿ ಶಶಿಕಲಾ ನಟರಾಜನ್ ಹಿಡಿತ ಸಾಧಿಸಿದ್ದಾರೆ ಎಂದು ಶಶಿಕಲಾ ಪುಷ್ಪಾ ಆರೋಪಿಸಿದ್ದಾರೆ. (ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಳ್ವಿಕೆ ತನ್ನಿ)
ಆರೋಗ್ಯವಾಗಿದ್ದ ಜಯಲಲಿತಾ ಇದ್ದಕ್ಕಿದ್ದಂತೇ ಅನಾರೋಗ್ಯ ಪೀಡಿತರಾಗಲು ಕಾರಣವೇನು, ಇದು ನನ್ನಂತೇ ಪಕ್ಷದ ಮತ್ತು ತಮಿಳುನಾಡು ಜನರನ್ನು ಕಾಡುತ್ತಿರುವ ಪ್ರಶ್ನೆ, ಈ ಬಗ್ಗೆ ಸಿಬಿಐ ತನಿಖೆ ನಡೆಸಿದರೆ ಸತ್ಯ ಹೊರಬೀಳಲಿದೆ ಎಂದು ಶಶಿಕಲಾ ಅಭಿಪ್ರಾಯ ಪಟ್ಟಿದ್ದಾರೆ.
ಜಯಾ ಆರೋಗ್ಯ ಸ್ವಾಭಾವಿಕವಾಗಿ ಹದೆಗೆಟ್ಟಿದ್ದೋ ಅಥವಾ ಉದ್ದೇಶಪೂರ್ವಕವಾಗಿ ಹದೆಗೆಡಿಸಿದ್ದೋ ಎನ್ನುವುದು ಖಾತ್ರಿಯಾಗಬೇಕಿದೆ. ಸತ್ಯಾಂಸ ಹೊರಬೀಳಬೇಕಾದರೆ ಸಿಬಿಐ ತನಿಖೆಯೇ ಸೂಕ್ತ ಎಂದು ಶಶಿಕಲಾ ಹೇಳಿದ್ದಾರೆ.
ಸೋಮವಾರ (ಅ10) ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಶಶಿಕಲಾ ಪುಷ್ಪಾ, ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಹೊಂದಿರುವ ಆಸ್ತಿಯ ಬಗ್ಗೆಯೂ ತನಿಖೆ ನಡೆಯಬೇಕೆಂದು ಸರಕಾರವನ್ನು ಒತ್ತಾಯಿಸಿದ್ದಾರೆ. (ದಸರಾ ನಂತರ ಜಯಾಗೆ ಅಕ್ರಮ ಆಸ್ತಿ ಕಂಟಕ ಶುರು)
ಜಯಲಲಿತಾ ಅನಾರೋಗ್ಯ, ಇತ್ತೀಚಿನ ಬೆಳವಣಿಗೆಗಳು, ಮುಂದೆ ಓದಿ..
ಜಯಾ ಆರೋಗ್ಯ ಸುಧಾರಿಸಲಿದೆ
ತಮಿಳುನಾಡಿಗೆ ಉಪಮುಖ್ಯಮಂತ್ರಿಯ ಅವಶ್ಯಕತೆಯಿಲ್ಲ. ಎಲ್ಲಾ ಎಐಎಡಿಎಂಕೆ ಕಾರ್ಯಕರ್ತರು ಜಯಾ ಮತ್ತೆ ಸಕ್ರಿಯವಾಗಲಿದ್ದಾರೆ ಎನ್ನುವ ನಂಬಿಕೆಯನ್ನು ಹೊಂದಿದ್ದಾರೆ. ನನ್ನನ್ನು ಉಚ್ಚಾಟಿಸಲಾಗಿದ್ದರೂ, ಪಕ್ಷದ ಮತ್ತು ಜಯಲಲಿತಾ ಬಗ್ಗೆ ಮಾತಾನಾಡುವ ಅಧಿಕಾರವನ್ನು ಹೊಂದಿದ್ದೇನೆ - ಶಶಿಕಲಾ ಪುಷ್ಪಾ.
ಸೋಮವಾರದ ಪತ್ರಿಕಾ ಪ್ರಕಟಣೆ
ವಿಶೇಷ ವೈದ್ಯರ ತಂಡ ಜಯಲಲಿತಾ ಆರೋಗ್ಯದ ಬಗ್ಗೆ ತೀವ್ರ ನಿಗಾ ವಹಿಸಿದೆ. ಏಮ್ಸ್ ಆಸ್ಪತ್ರೆಯ ವೈದ್ಯ ಡಾ. ಖಿಲಾನಿ ಎರಡು ಬಾರಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಪುದುಚೇರಿ ಮುಖ್ಯಮಂತ್ರಿ
ಪುದುಚೇರಿ ಮುಖ್ಯಮಂತ್ರಿ ನಾರಾಯಣಸ್ವಾಮಿ, ಸಿಪಿಐ ಮುಖಂಡ ಡಿ ರಾಜಾ, ತಮಿಳುನಾಡು ಕಾಂಗ್ರೆಸ್ ಮುಖಂಡ ಜಿ ಕೆ ವಾಸನ್, ತಿರುನಾವುಕ್ಕರುಸರ್ ಸೇರಿದಂತೆ ಹಲವು ರಾಜಕೀಯ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಆರೋಗ್ಯ ವಿಚಾರಣೆ
ತಮಿಳುನಾಡು ವಿರೋಧ ಪಕ್ಷದ ನಾಯಕ ಎಂ ಕೆ ಸ್ಟಾಲಿನ್ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರ ಬಳಿ ಜಯಲಲಿತಾ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಜಯಾ ಆರೋಗ್ಯ ಸುಧಾರಿಸಲಿ ಎಂದು ಸ್ಟಾಲಿನ್ ಹಾರೈಸಿದ್ದಾರೆ.
ಸಾಫ್ಟ್ ವೇರ್ ಉದ್ಯೋಗಿಗಳು
ಜಯಲಲಿತಾ ಆರೋಗ್ಯದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದ ಇಬ್ಬರು ಸಾಫ್ಟ್ ವೇರ್ ಉದ್ಯೋಗಿಗಳನ್ನು ಚೆನ್ನೈ ಕ್ರೈಂ ಬ್ರಾಂಚಿನವರು ಸೋಮವಾರ (ಅ 10) ಬಂಧಿಸಿದ್ದಾರೆ. ಸಾಮಾಜಿಕ ತಾಣದಲ್ಲಿ ಸುಳ್ಳು ಸುದ್ದಿಯನ್ನು ಇಬ್ಬರು ಹರಿಸುತ್ತಿದ್ದಾರೆ ಎನ್ನುವುದು ಇವರ ಮೇಲಿರುವ ಆರೋಪ.
ಸಾಮೂಹಿಕ ಪ್ರಾರ್ಥನೆ
ಜಯಲಲಿತಾ ಆರೋಗ್ಯ ಸುಧಾರಿಸಲಿ ಎಂದು ತಮಿಳುನಾಡಿನಾದ್ಯಂತ ಹೋಮ, ಹವನ, ಸಾಮೂಹಿಕ ಪ್ರಾರ್ಥನೆ ಮುಂದುವರಿದಿದೆ. ಎಐಎಡಿಎಂಕೆ ಕಾರ್ಯಕರ್ತರು ದೇವಾಲಯ, ಮಸೀದಿ, ಚರ್ಚುಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.