ಕಾಂಗ್ರೆಸ್ ಖಜಾಂಚಿಯಾಗಿ ಅಹ್ಮದ್ ಪಟೇಲ್ ರನ್ನು ನೇಮಿಸಿದ ರಾಹುಲ್
ನವದೆಹಲಿ, ಆಗಸ್ಟ್ 21: ಲೋಕಸಭೆ ಚುನಾವಣೆಗೆ ಇನ್ನು ಒಂದು ವರ್ಷಕ್ಕಿಂತ ಕಡಿಮೆ ಅವಧಿ ಬಾಕಿ ಇರುವಂತೆ ಬದಲಾವಣೆ ಆರಂಭವಾಗಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ಅಹ್ಮದ್ ಪಟೇಲ್ ರನ್ನು ಪಕ್ಷದ ಖಜಾಂಚಿಯಾಗಿ ನೇಮಕ ಮಾಡಿದ್ದಾರೆ. ಅಹ್ಮದ್ ಪಟೇಲ್ ಒಂದು ಕಾಲಕ್ಕೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿಯಾಗಿ ತುಂಬಾ ಪ್ರಭಾವಿಯಾದವರು.
ಸದ್ಯಕ್ಕೆ ಮೋತಿಲಾಲ್ ವೋರಾ ಖಜಾಂಚಿಯಾಗಿದ್ದರು. ಅವರನ್ನು ಪಕ್ಷದ ಆಡಳಿತ ನಿರ್ವಹಣೆಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಪಕ್ಷದ ವಿದೇಶಿ ಘಟಕದ ಹೊಸ ಮುಖ್ಯಸ್ಥರಾಗಿ ಆನಂದ್ ಶರ್ಮಾ ಅವರನ್ನು ನಿಯೋಜಿಸಲಾಗಿದೆ.
ಕಾಂಗ್ರೆಸ್ಸಿನ ಅತ್ಯುತ್ತಮ ಪ್ರಧಾನಿ ಅಭ್ಯರ್ಥಿ ಯಾರು? ಚಿತ್ರದಲ್ಲಿ ನೋಡಿ
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಿಂದ ದಿಗ್ವಿಜಯ್ ಸಿಂಗ್, ಸುಶೀಲ್ ಕುಮಾರ್ ಶಿಂಧೆ, ಜನಾರ್ದನ್ ದ್ವಿವೇದಿಯಂಥ ಕೆಲವು ಹಿರಿಯ ನಾಯಕರನ್ನು ಕೈ ಬಿಟ್ಟ ಮೇಲೆ ಹೊಸಬರ ನೇಮಕ ಮಾಡಲಾಗಿದೆ. ಇನ್ನೇನು ಬರುವ ಲೋಕಸಭೆ ಚುನಾವಣೆ ಇದ್ದು, ಆ ಹಿನ್ನೆಲೆಯಲ್ಲಿ ಅನುಭವಿಗಳು ಹಾಗೂ ಹೊಸಬರ ತಂಡವೊಂದನ್ನು ಕಟ್ಟಲು ರಾಹುಲ್ ಮುಂದಾಗಿದ್ದಾರೆ ಎಂಬ ಸೂಚನೆ ಸಿಕ್ಕಿದೆ.
ಕಳೆದ ಜುಲೈನಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ನ ಕಾರ್ಯಕಾರಿ ಸಮಿತಿಗೆ ಸದಸ್ಯರನ್ನು ನೇಮಿಸಿದ್ದರು. ಅದರಲ್ಲಿ ಎ.ಕೆ.ಆಂಟನಿ, ಅಹ್ಮದ್ ಪಟೇಲ್, ಅಂಬಿಕಾ ಸೋನಿ, ಮೋತಿಲಾಲ್ ವೋರಾ, ಗುಲಾಬ್ ನಬಿ ಆಜಾದ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಆನಂದ್ ಶರ್ಮ ಮತ್ತಿತರರು ಸಮಿತಿಯಲ್ಲಿ ಇದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಒಟ್ಟು ಇಪ್ಪತ್ಮೂರು ಸದಸ್ಯರಿದ್ದು, ಹತ್ತೊಂಬತ್ತು ಶಾಶ್ವತ ಆಹ್ವಾನಿತರು ಹಾಗೂ ಒಂಬತ್ತು ವಿಶೇಷ ಆಹ್ವಾನಿತರಿದ್ದಾರೆ.