ಬಕ್ರೀದ್ ಮುನ್ನ ಮುಸ್ಲಿಮರಿಗೆ ಮೌಲಾನಾ ಮಾಡಿದ ಅಪರೂಪದ ಮನವಿ
ನವದೆಹಲಿ, ಆ 4: ಸೋಮವಾರ, ಆಗಸ್ಟ್ ಹನ್ನೆರಡರಂದು ಆಚರಿಸಲಾಗುವ ಮುಸ್ಲಿಮರ ಪವಿತ್ರ ಬಕ್ರೀದ್ (ಈದು-ಉಲ್-ಅದಾ) ಹಬ್ಬದಾಚರಣೆ ಸಂಬಂಧ ಮೌಲಿಯೊಬ್ಬರು ಮುಸ್ಲಿಮರಿಗೆ ಮನವಿಯೊಂದನ್ನು ಮಾಡಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ, ಮೌಲಾನಾ ಕೆ ಅರ್ ಫಿರಂಗಿ ಮಹಾಲಿ, ' ಬಕ್ರೀದ್ ಹಬ್ಬದಾಚರಣೆ ಸಂಬಂಧ ಎಲ್ಲಾ ಮುಸ್ಲಿಮರಲ್ಲಿ ನನ್ನ ಮನವಿ. ಹೋದ ವರ್ಷದಂತೆ, ಈ ವರ್ಷವೂ ನಡೆದುಕೊಳ್ಳೋಣ'.
'ಸರಕಾರ ಯಾವ ಪ್ರಾಣಿಯ ಬಲಿದಾನ ಮಾಡಲು ಅವಕಾಶ ನೀಡಿದೆಯೋ ಅದನ್ನು ಮಾತ್ರ ಬಳಸಿಕೊಳ್ಳೋಣ' ಎಂದು ಫಿರಂಗಿ ಮಹಾಲಿ ಮುಸ್ಲಿಮರಲ್ಲಿ ಮನವಿ ಮಾಡಿದ್ದಾರೆ.
ಬಲಿದಾನದ ಹೆಸರಿನಲ್ಲಿ ಯಾಕೆ ಪ್ರಾಣಿಯನ್ನು ಕೊಲ್ಲುತ್ತೀರಾ, ಹಬ್ಬವನ್ನು ಸಿಹಿ ತಿನ್ನುವ ಮೂಲಕ ಅಥವಾ ಸಿಹಿ ಹಂಚುವ ಮೂಲಕ, ಯಾಕೆ ಆಚರಿಸಿಕೊಳ್ಳಬಾರದೆಂದು ಮೌಲಾನಾ ಮನವಿಗೆ, ಟ್ವೀಟ್ ಮೂಲಕ ಕೆಲವರು ಕಾಮೆಂಟ್ ಮಾಡಿದ್ದಾರೆ.
'ಬಕ್ರೀದ್ ಹಬ್ಬದಂದು, ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರಾಣಿಬಲಿ ಕೊಡುವ ಪದ್ದತಿ ನಮ್ಮಲಿದೆ. ಈ ವೇಳೆ, ವಾಹನಗಳಲ್ಲಿ ಪ್ರಾಣಿ ಸಾಗಣೆಗೆ ಯಾರಿಂದಲೂ ತೊಂದರೆ ಬರದಂತೆ ರಕ್ಷಣೆ ನೀಡಬೇಕೆಂದು' ಕೆಲವು ಶಾಸಕರು, ಕರ್ನಾಟಕದ ಮುಖ್ಯಮಂತ್ರಿಗಳಿಗೆ ಪತ್ರ ಮುಖೇನ ಮನವಿ ಮಾಡಿದ್ದರು.
ಮೈಸೂರು, ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಪತ್ರ ಮೂಲಕ ಮುಖ್ಯಮಂತ್ರಿಗಳಿಗೆ ಮಾಡಿದ್ದ ಈ ಮನವಿಗೆ ಎನ್ ಎ ಹ್ಯಾರಿಸ್, ನಜೀರ್ ಅಹಮದ್, ಸಿಎಂ ಇಬ್ರಾಹಿಂ, ರಹೀಂ ಖಾನ್ ಮುಂತಾದರು ಸಹಿ ಮಾಡಿದ್ದರು.