ಕ್ರಿಶ್ಚಿಯನ್ ನಿಂದ ಕುಟುಂಬಕ್ಕೆ ಹಣ ಸಂದಾಯ! ಆ 'ಕುಟುಂಬ' ಯಾವುದು?
ಬೆಂಗಳೂರು, ಡಿಸೆಂಬರ್ 06 : ಅಗಸ್ಟಾವೆಸ್ಟ್ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣದಲ್ಲಿ ಬಂಧಿತನಾಗಿರುವ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಭಾರತದ 'ಕುಟುಂಬ'ಕ್ಕೆ 22,000 ಯುರೋಗಳನ್ನು ಎರಡು ಕಂತಿನಲ್ಲಿ ಸಂದಾಯ ಮಾಡಿರುವ ದಾಖಲೆಗಳು ದಕ್ಕಿವೆ.
57 ವರ್ಷದ ಬ್ರಿಟನ್ ಮೂಲದ ದಲ್ಲಾಳಿ ಕ್ರಿಶ್ಚಿಯನ್ ಮೈಕೆಲ್ ನನ್ನು ದುಬೈನಿಂದ ಭಾರತಕ್ಕೆ ಹಸ್ತಾಂತರಿಸಲಾಗಿದ್ದು, ಆತನನ್ನು ಸಿಬಿಐನ ವಶಕ್ಕೆ ವಿಚಾರಣೆಗೆಂದು ದೆಹಲಿಯ ವಿಶೇಷ ಸಿಬಿಐ ನ್ಯಾಯಾಲಯ ನೀಡಿದೆ. ವಿಚಾರಣೆ ತ್ವರಿತ ಗತಿಯಲ್ಲಿ ಸಾಗುತ್ತಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ರಹಸ್ಯಗಳು ಬಯಲಾಗುವ ಸಾಧ್ಯತೆಗಳಿವೆ.
ಆಗಸ್ಟಾವೆಸ್ಟ್ಲ್ಯಾಂಡ್ ಹಗರಣ : ಭಾರತದ ವಶಕ್ಕೆ ಆರೋಪಿ ಮೈಕೆಲ್
ವಿವಿಐಪಿ ಹೆಲಿಕಾಪ್ಟರ್ ಗಳನ್ನು ತಯಾರಿಸುವ ಅಗಸ್ಟಾ ವೆಸ್ಟ್ ಲ್ಯಾಂಡ್ ಕಂಪನಿಯಿಂದ 12 ಹೆಲಿಕಾಪ್ಟರ್ ಕೊಳ್ಳಲೆಂದು ಭಾರತದ ವಾಯುಸೇನೆ ಜೊತೆ 2010ರಲ್ಲಿ ಒಪ್ಪಂದವಾಗಿತ್ತು. ಈ ಡೀಲ್ ಕುದುರಿಸಲೆಂದು ಭಾರತದ ರಾಜಕಾರಣಿ ಮತ್ತು ಅಧಿಕಾರಿಗಳಿಗೆ ಲಂಚ ನೀಡಲೆಂದು ಮೈಕೆಲ್ ಗೆ ಅಗಸ್ಟಾ ವೆಸ್ಟ್ ಲ್ಯಾಂಗ್ 225 ಕೋಟಿ ರುಪಾಯಿ ಲಂಚ ನೀಡಿತ್ತು ಎಂಬುದು ಆರೋಪ.
ಆಗಸ್ಟಾ ಹಗರಣ : 5 ದಿನಗಳ ಸಿಬಿಐ ಕಸ್ಟಡಿಗೆ ಕ್ರಿಶ್ಚಿಯನ್ ಮೈಕೆಲ್
36,000 ಕೋಟಿ ರುಪಾಯಿ ಹಗರಣದಲ್ಲಿ ಇಟಲಿ ಮೂಲದ ರಾಜಕೀಯ ಮುಖಂಡರೊಬ್ಬರ ಹೆಸರು ತಳಕುಹಾಕಿಕೊಂಡಿದೆ. ಅವರು ಯಾರು, ಅವರಿಗೂ ಈ ಹಗರಣಕ್ಕೂ ಏನು ಸಂಬಂಧ? ಒಂದು ಮೂಲದ ಪ್ರಕಾರ, ಬಂಧಿತನಾಗಿರುವ ಕ್ರಿಶ್ಚಿಯನ್ ಮೈಕೆಲ್ ಅವರ ತಂದೆ ಭಾರತದ ಪುರಾತನ ರಾಜಕೀಯ ಕುಟುಂಬದೊಡನೆ ಅತ್ಯಂತ ಸಾಮೀಪ್ಯದ ಸಂಬಂಧ ಹೊಂದಿದ್ದರು. ಅವರು ಯಾರು? ತೀರ್ಪು ಬರುವವರೆಗೆ ಕಾದು ನೋಡೋಣ.
ಕುಟುಂಬಕ್ಕೆ ಎರಡು ಕಂತಿನಲ್ಲಿ ಹಣ ಸಂದಾಯ
'ಕುಟಂಬ'ಕ್ಕೆ ಹಣ ಸಂದಾಯವಾಗಿರುವುದು ಇಟಲಿಯ ಮಿಲಾನ್ ಕೋರ್ಟ್ ಆಫ್ ಅಪೀಲ್ಸ್ ನೀಡಿರುವ ತೀರ್ಪಿನಲ್ಲಿ ದಾಖಲಾಗಿದೆ. ಸ್ವಿಸ್ ಅಧಿಕಾರಿಗಳು ಕಾನೂನಾತ್ಮಕವಾಗಿ ತರಿಸಿಕೊಂಡಿರುವ ಆ ದಾಖಲೆ ಪ್ರಕಾರ, 'ಕುಟುಂಬ'ಕ್ಕೆ ಎರಡು ತಿಂಗಳಲ್ಲಿ 11,000 ಯುರೋಗಳಂತೆ ಎರಡು ಕಂತಿನಲ್ಲಿ ಹಣ ಸಂದಾಯವಾಗಿದೆ. ಇದು ನಿಜವೇ ಆಗಿದ್ದಲ್ಲಿ ವಿಚಾರಣೆಯಲ್ಲಿ ಈ ಬಗ್ಗೆ ಸಿಬಿಐ ಕ್ರಿಶ್ಚಿಯನ್ ಮೈಕೇಲ್ ನಿಂದ ಸತ್ಯ ಸಂಗತಿ ಬಗೆದು ಹಾಕಲಿದೆ. ಆದರೆ, ಯಾವ ಕಾರಣಕ್ಕೆ ಹಣ ಸಂದಾಯವಾಗಿದೆ ಎಂಬುದರ ಬಗ್ಗೆ ಅದರಲ್ಲಿ ವಿವರಣೆಗಳಿಲ್ಲ.
ಮಿಲಿಯನ್ ಡಾಲರ್ ಪ್ರಶ್ನೆ
ಆ ಕುಟುಂಬ ಯಾವುದು? ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ. ಆ ಕುಟುಂಬಕ್ಕೂ ಈ ಹಗರಣಕ್ಕೂ ಅಥವಾ ದಲ್ಲಾಳಿಗೂ ಏನು ಸಂಬಂಧ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ಈ ಕಾರಣದಿಂದಾಗಿಯೇ ರಾಜಸ್ಥಾನದಲ್ಲಿ, ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರದ ಅಂತಿಮ ದಿನ, ಭಾಷಣ ಮಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಈ ದಲ್ಲಾಳಿ ಅನೇಕ ರಹಸ್ಯ ಸಂಗತಿಗಳನ್ನು ಹೊರಹಾಕಲಿದ್ದಾನೆ, ಕಾದು ನೋಡಿ ಎಂದು ಮಾರ್ಮಿಕವಾಗಿ ನುಡಿದಿದ್ದರು. ಇದಕ್ಕೆ ಪ್ರತಿಯಾಗಿ, ಮೋದಿಯವರೇ ಈ ಹಗರಣದಲ್ಲಿ ಲಾಭ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಆಗಸ್ಟಾ ಮಧ್ಯವರ್ತಿ ಎಲ್ಲ 'ರಹಸ್ಯ' ಬಯಲು ಮಾಡಲಿದ್ದಾನೆ : ನರೇಂದ್ರ ಮೋದಿ
ಪರಿಹಾರ ರೂಪವಾಗಿ ಕುಟುಂಬಕ್ಕೆ ಹಣ
ಈ ಹಗರಣಕ್ಕೆ ಸಂಬಂಧಿಸದಂತೆ ದಕ್ಕಿರುವ ಮೊದಲ ದಾಖಲೆ ಮಿಲಾನ್ ಕೋರ್ಟ್ ತೀರ್ಪು. ಅದರಲ್ಲಿ ಸಂಕೇತ ರೂಪದಲ್ಲಿ 'ಕುಟುಂಬ'ಕ್ಕೆ ಹಣ ನೀಡಿರುವುದಾಗಿ ನಮೂದಿಸಲಾಗಿದೆ. ಕ್ರಿಶ್ಚಿಯನ್ ಮೈಕೆಲ್ ಒಂದು ಪತ್ರವನ್ನು ಮತ್ತೊಬ್ಬ ದಲ್ಲಾಳಿ ಗುಯ್ಡೋ ಹಶ್ಕೆ ಎಂಬುವವರಿಗೆ ಪತ್ರವೊಂದನ್ನು ಬರೆದಿದ್ದು, ಅದರಲ್ಲಿ 'ಪರಿಹಾರ' ರೂಪವಾಗಿ 'ಕುಟುಂಬ'ಕ್ಕೆ ಹಣ ಸಂದಾಯವಾಗಿದೆ ಎಂದು ಬರೆದಿರುವುದಾಗಿ ಕೋರ್ಟ್ ದಾಖಲೆ ತಿಳಿಸಿದೆ. ಏನಿದು ಪರಿಹಾರ? ಆದರೆ, ಇಡೀ ತೀರ್ಪಿನಲ್ಲಿ ಆ 'ಕುಟುಂಬ' ಯಾವುದು ಎಂಬ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂಬುದೇ ಕುತೂಹಲಕರ ಮತ್ತು ರೋಚಕ ಸಂಗತಿ.
ಕುಟುಂಬವೆಂದರೆ ಎಸ್ಪಿ ತ್ಯಾಗಿ ಕುಟುಂಬವೆ?
ಈ ಪ್ರಕರಣದಲ್ಲಿ ಅಂದು ವಾಯುಸೇನೆ ಚೀಫ್ ಆಗಿದ್ದ ಎಸ್ಪಿ ತ್ಯಾಗಿ, ಅವರ ಸಂಬಂಧಿಗಳಾದ ಸಂದೀಪ್, ಜೂಲಿ ಮತ್ತು ತೋಸ್ಕಾ ತ್ಯಾಗಿ ಎಂಬುವವರ ಹೆಸರುಗಳು ಕೂಡ ಕೇಳಿಬಂದಿವೆ. ಈ 'ಕುಟುಂಬ'ದ ಶಿಫಾರಸಿನ ಮೇರೆಗೇ ಅಗಸ್ಟಾ ವೆಸ್ಟ್ ಲ್ಯಾಂಗ್ ಡೀಲ್ ಅಂತಿಮವಾಗಿತು ಎಂಬ ವಾದವೂ ಇದೆ. ಆದರೆ, ಈ ದಾಖಲೆಯಲ್ಲಿ ಎಪಿ ಎಂದು ಸಂಕೇತಾಕ್ಷರ ನಮೂದಿಸಲಾಗಿದ್ದು, ಈಗಾಗಲೆ ಇದು ಅಹ್ಮದ್ ಪಟೇಲ್ ಇರಬಹುದಾ ಎಂದು ಬಿಜೆಪಿ ಹೆಸರನ್ನು ಗಾಳಿಯಲ್ಲಿ ತೂರಿಬಿಟ್ಟಿದೆ. ಆದರೆ, ಇದನ್ನು ಅಹ್ಮದ್ ಪಟೇಲ್ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.
ಅಗಸ್ಟಾ ವೆಸ್ಟ್ ಲ್ಯಾಂಡ್: ಮೈಕಲ್ ಬಂಧನ ಕಾಂಗ್ರೆಸ್ಗೆ ಉರುಳಾಗಲಿದೆಯೇ? 10 ಅಂಶಗಳು
ಆರೋಪ ಸಾಬೀತು ಮಾಡುವಲ್ಲಿ ಸಿಬಿಐ ಯಶಸ್ವಿಯಾಗುವುದೆ?
ತಮಾಷೆಯ ಸಂಗತಿಯೆಂದರೆ, ಕ್ರಿಶ್ಚಿಯನ್ ಮೈಕೆಲ್ ಮತ್ತು ಇತರ ಆರೋಪಿಗಳ ವಿರುದ್ಧ ಯಾವುದೇ ಆರೋಪ ಸಾಬೀತಾಗದ ಕಾರಣ ಎಲ್ಲರನ್ನೂ ದೋಷಮುಕ್ತ ಮಾಡಿ ಜನವರಿಯಲ್ಲಿ ಇಟಲಿಯ ಮಿಲಾನ್ ಕೋರ್ಟ್ ಆಫ್ ಅಪೀಲ್ ತೀರ್ಪು ನೀಡಿದೆ. ಕ್ರಿಶ್ಚಿಯನ್ ಮೈಕೆಲ್ ವಿರುದ್ಧ ಮಾಡಲಾಗಿರುವ ಭ್ರಷ್ಟಾಚಾರದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಇಟಲಿಯ ಕೋರ್ಟ್ ತೀರ್ಪು ನೀಡಿದೆ. ಆದರೆ, ಈಗ ಚಾಲೆಂಜ್ ಇರುವುದೇ ಸಿಬಿಐ ಮತ್ತು ತನಿಖೆ ನಡೆಸುತ್ತಿರುವ ಇನ್ನೊಂದು ಸಂಸ್ಥೆ ಜಾರಿ ನಿರ್ದೇಶನಾಲಯದ ಮೇಲೆ. ಇಟಲಿ ಕೋರ್ಟ್ ಅಲ್ಲಗಳೆದ ಆರೋಪವನ್ನು ಸಿಬಿಐ ಮತ್ತು ಇಡಿಗಳು ಹೇಗೆ ಸಾಬೀತುಪಡಿಸಲಿವೆ?