ಅಗಸ್ಟಾ ವೆಸ್ಟ್ ಲ್ಯಾಂಡ್: ಎರಡನೇ ಆರೋಪಿ ಸಕ್ಸೇನ ದುಬೈನಿಂದ ಭಾರತಕ್ಕೆ
vಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ವ್ಯವಹಾರದಲ್ಲಿ ನಡೆದಿದೆ ಎನ್ನಲಾದ 3600 ಕೋಟಿ ರುಪಾಯಿ ಭ್ರಷ್ಟಾಚಾರದ ಆರೋಪಿಯನ್ನು ಬುಧವಾರ ಯುಎಇಯಿಂದ ಭಾರತಕ್ಕೆ ಕರೆತರಲಾಗಿದೆ. ಹೆಸರು ಬಹಿರಂಗ ಮಾಡಬಾರದು ಎಂಬ ಷರತ್ತಿನ ಮೇಲೆ ಆತನ ವಕೀಲರು ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ದುಬೈ ಮೂಲದ ರಾಜೀವ್ ಸಕ್ಸೇನ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಕರೆತಂದ ಎರಡನೇ ಆರೋಪಿ. ಅದು ಕೂಡ ಎರಡು ತಿಂಗಳೊಳಗೆ. ಇದಕ್ಕೂ ಮುನ್ನ ಬ್ರಿಟಿಷ್ ನಾಗರಿಕ- ಈ ವ್ಯವಹಾರದಲ್ಲಿ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸಿದ ಆರೋಪ ಹೊತ್ತಿರುವ ಮೈಖೇಲ್ ಕ್ರಿಶ್ಚಿಯನ್ ನನ್ನು ದುಬೈನಿಂದ ದೇಶಕ್ಕೆ ಕರೆತರಲಾಗಿದೆ. ಆತ ಸದ್ಯ ನ್ಯಾಯಾಂಗ ಬಂಧನದಲ್ಲಿ ಇದ್ದಾನೆ.
ತಲೆಮರೆಸಿಕೊಂಡಿದ್ದ ಆಗಸ್ಟಾವೆಸ್ಟ್ಲ್ಯಾಂಡ್ ಹಗರಣದ ಆರೋಪಿ ಭಾರತಕ್ಕೆ
ಮೂವರು ಮಧ್ಯವರ್ತಿಗಳ ಪೈಕಿ ಮೈಖೇಲ್ ಕೂಡ ಒಬ್ಬ. ಹನ್ನೆರಡು ದುಬಾರಿ ವಿವಿಐಪಿ ಹೆಲಿಕಾಪ್ಟರ್ ಖರೀದಿ ವ್ಯವಹಾರದಲ್ಲಿ ಲಂಚ ನೀಡಿದ ಆರೋಪ ಈತನ ಮೇಲಿದೆ. ಅಂದ ಹಾಗೆ ಹೆಲಿಕಾಪ್ಟರ್ ಖರೀದಿ ವ್ಯವಹಾರ ಐದು ವರ್ಷದ ಹಿಂದೆಯೇ ರದ್ದಾಗಿದೆ.
ದುಬೈನಿಂದ ಸಕ್ಸೇನ ಬಂದ ಕೂಡಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಆತನನ್ನು ಹಸ್ತಾಂತರಿಸಲಾಯಿತು ಎಂದು ತಿಳಿದುಬಂದಿದ್ದು, ನಾವು ಯಾವುದೇ ತಂಡವನ್ನು ಯುಎಇಗೆ ಕಳುಹಿಸಿಲ್ಲ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
ಬುಧವಾರ ಬೆಳಗ್ಗೆ ಒಂಬತ್ತು ಗಂಟೆ ಹೊತ್ತಿಗೆ ದುಬೈನ ಸ್ಥಳೀಯ ಪೊಲೀಸ್ ಅಧಿಕಾರಿಗಳು ಸಕ್ಸೇನನನ್ನು ಕರೆಸಿಕೊಂಡರು. ಆರಂಭದಲ್ಲಿ ಆತನ ಕುಟುಂಬದವರು ಕೇಳಿದಾಗ ಪೊಲೀಸರು ವಿಚಾರ ತಿಳಿಸಲಿಲ್ಲ. ಆ ನಂತರ, ಭಾರತಕ್ಕೆ ಕರೆದೊಯ್ಯುತ್ತಿರುವುದನ್ನು ತಿಳಿಸಿದ್ದಾಗಿ ವಕೀಲರು ಮಾಹಿತಿ ನೀಡಿದ್ದಾರೆ.
ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ : 34 ಮಂದಿ ವಿರುದ್ಧ ಚಾರ್ಜ್ ಶೀಟ್
ದುಬೈ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ನಿಂದ ಖಾಸಗಿ ವಿಮಾನದಲ್ಲಿ ಸಕ್ಸೇನನನ್ನು ಭಾರತಕ್ಕೆ ಕರೆದೊಯ್ಯಲಾಯಿತು. ದೆಹಲಿ ಹೈಕೋರ್ಟ್ ನಿಂದ ಆತನ ವಿರುದ್ಧ ಜಾಮೀನು ರಹಿತ ವಾರಂಟ್ ಇದೆ. ಅದನ್ನು ಈಗಾಗಲೇ ಪ್ರಶ್ನಿಸಲಾಗಿದೆ. ಆತನನ್ನು ಭಾರತಕ್ಕೆ ಕರೆದೊಯ್ದಿರುವುದು ಕಾನೂನಿಗೆ ವಿರುದ್ಧ ಎಂದು ವಕೀಲರು ತಿಳಿಸಿದ್ದಾರೆ.
ಆತ ನಾಲ್ಕನೇ ಹಂತದ ಕ್ಯಾನ್ಸರ್ ರೋಗಿ. ಆತನಿಗೆ ಈಗ ಏನು ಬೇಕಾದರೂ ಆಗಬಹುದು ಎಂದು ಕೂಡ ಹೇಳಿದ್ದಾರೆ. ಇದೇ ವೇಳೆ ತಲ್ಲೆ ತಪ್ಪಿಸಿಕೊಂಡಿದ್ದ ಮತ್ತೊಬ್ಬ ವಾಂಟೆಡ್ ದೀಪಕ್ ತಲ್ವಾರ್ ನ ಕೂಡ ಅದೇ ವಿಮಾನದಲ್ಲಿ ದೆಹಲಿಗೆ ಕರೆತರಲಾಗಿದೆ ಎನ್ನಲಾಗುತ್ತಿದೆ. ಈ ದೀಪಕ್ ತಲ್ವಾರ್ ಜಾರಿ ನಿರ್ದೇಶನಾಲಯದ ಮತ್ತೊಂದು ಪ್ರಕರಣದಲ್ಲಿ ಶಂಕಿತ.
ಅಗಸ್ಟಾ ವೆಸ್ಟ್ ಲ್ಯಾಂಡ್ ಡೀಲ್, ಮಧ್ಯವರ್ತಿ ತಿಂದ ದುಡ್ಡೆಷ್ಟು?
ಸಕ್ಸೇನ ದುಬೈನ ಪಾಮ್ ಜುಮೈರ ವಾಸಿ. ಆತನ ಪತ್ನಿ ಶಿವಾನಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಹಲವು ಬಾರಿ ಬಂಧನಕ್ಕೆ ಒಳಗಾಗಿದ್ದಳು. ಸದ್ಯಕ್ಕೆ ಆಕೆ ಜಾಮೀನಿನ ಮೇಲೆ ಇದ್ದಾಳೆ.