ಪ್ರಚಾರಕ್ಕಾಗಿ ರೈತರಿಂದ ಪ್ರತಿಭಟನೆ: ವಿವಾದ ಸೃಷ್ಟಿಸಿದ ಕೇಂದ್ರ ಕೃಷಿ ಸಚಿವ
ನವದೆಹಲಿ, ಜೂನ್ 4: ಮಾಧ್ಯಮದ ಗಮನ ಸೆಳೆಯುವ ಸಲುವಾಗಿಯೇ ರೈತರು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ ಎಂದು ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
'ಯಾವುದೇ ರೈತರ ಸಂಘಟನೆ 1,000-2,000 ಸದಸ್ಯರನ್ನು ಹೊಂದಿರುವುದು ಸಹಜ. ಮಾಧ್ಯಮದಲ್ಲಿ ಪ್ರಚಾರ ಪಡೆದುಕೊಳ್ಳಲು ಅಸಹಜವಾದ ಕೃತ್ಯ ಮಾಡುವುದು ಅವರಿಗೆ ಅನಿವಾರ್ಯವಾಗಿರುತ್ತದೆ' ಎಂದು ಅವರು ಹೇಳಿದ್ದಾರೆ.
ವಿವಿಧ ರೈತಾಪಿ ಸಂಘಟನೆಗಳಿಂದ ಭಾರತ್ ಬಂದ್ ಗೆ ಕರೆ
ಸಂಪೂರ್ಣ ಸಾಲ ಮನ್ನಾ, ಉತ್ಪನ್ನಗಳಿಗೆ ಅಧಿಕ ಬೆಂಬಲ ಬೆಲೆ ನಿಗದಿ, ರೈತರ ಉತ್ಪನ್ನಗಳಿಗೆ ಹೆಚ್ಚು ಮಾರುಕಟ್ಟೆ ಬೆಲೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸುಮಾರು 22 ರಾಜ್ಯಗಳಲ್ಲಿ 130ಕ್ಕೂ ಹೆಚ್ಚು ವಿವಿಧ ರೈತ ಸಂಘಟನೆಗಳು ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿವೆ.
ಇದರಿಂದ ಹಾಲು, ತರಕಾರಿಗಳು ಸೇರಿದಂತೆ ದೈನಂದಿನ ಬಳಕೆಯ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.
ಪ್ರತಿಭಟನೆಗೆ ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಸಚಿವ ರಾಧಾ ಮೋಹನ್ ಸಿಂಗ್, 'ದೇಶದಲ್ಲಿ ಕೋಟ್ಯಂತರ ರೈತರಿದ್ದಾರೆ. ಅವರಲ್ಲಿ ಕೆಲವೇ ಮಂದಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅದಕ್ಕೆ ಯಾವ ಮಹತ್ವವೂ ಇಲ್ಲ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಮಧ್ಯಪ್ರದೇಶದಲ್ಲಿರುವ ಬಿಜೆಪಿ ಸರ್ಕಾರ ರೈತರ ಪರವಾಗಿದೆ. ರೈತರ ಹಿತಕ್ಕಾಗಿ ಸಾಕಷ್ಟು ಒಳ್ಳೆಯ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದು ಸಮರ್ಥಿಸಿಕೊಂಡರು.
ಹರಿಯಾಣ ಮುಖ್ಯಮಂತ್ರಿ ಮೋಹನ್ ಲಾಲ್ ಖಟ್ಟರ್ ಅವರೂ ಶನಿವಾರ ಇದೇ ರೀತಿಯ ಹೇಳಿಕೆ ನೀಡಿದ್ದರು. ಹರಿಯಾಣದಲ್ಲಿನ ರೈತರ ಪ್ರತಿಭಟನೆಗೆ ಕಾರಣವೇ ಇಲ್ಲ ಮತ್ತು ಅನಗತ್ಯವಾದದ್ದು ಎಂದು ಅವರು ಟೀಕಿಸಿದ್ದರು.
Nagpur: Protesters spilled milk on road against Union Agriculture Minister Radha Mohan Singh's remark on the ongoing farmers' strike; distributed milk to locals who came up with utensils requesting for it #Maharashtra pic.twitter.com/ke71cKYJpm
— ANI (@ANI) 4 June 2018
ರಾಧಾ ಮೋಹನ್ ಸಿಂಗ್ ಅವರ ಹೇಳಿಕೆಯಿಂದ ಕುಪಿತರಾದ ರೈತರು ನಾಗಪುರದಲ್ಲಿ ಹಾಲನ್ನು ರಸ್ತೆಗೆ ಚೆಲ್ಲುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪಾತ್ರೆಗಳನ್ನು ಹಿಡಿದುಬಂದ ಜನಸಾಮಾನ್ಯರಿಗೆ ಅವರು ಉಚಿತವಾಗಿ ಹಾಲನ್ನು ಹಂಚಿದರು.
ಪ್ರಕರಣ ದಾಖಲು: ರಾಧಾ ಮೋಹನ್ ಸಿಂಗ್ ಅವರ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ರೈತರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ತಮ್ಮ ಪ್ರತಿಭಟನೆ ವಿರುದ್ಧ ಅವಹೇಳನಕಾರಿ ಹೇಳಿಕೆ ದಾಖಲಿಸಿದ್ದನ್ನು ವಿರೋಧಿಸಿ ಬಿಹಾರದ ಮುಜಫ್ಫರ್ಪುರದಲ್ಲಿ ಕೇಂದ್ರ ಸಚಿವರ ವಿರುದ್ಧ ರೈತರು ದೂರು ನೀಡಿದ್ದರು.