ರೈತ ಆತ್ಮಹತ್ಯೆಗೆ ಪ್ರೇಮ ವೈಫಲ್ಯ ಕಾರಣ ಅಂದ್ರು ಕೃಷಿ ಸಚಿವರು
ನವದೆಹಲಿ, ಜುಲೈ 24 : 'ಪ್ರೇಮ ವೈಫಲ್ಯ, ವರದಕ್ಷಿಣೆ ಮುಂತಾದ ಕಾರಣಗಳಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ' ಎಂದು ಕೇಂದ್ರ ಕೃಷಿ ಸಚಿವರು ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡುವ ಮೂಲಕ ಹೊಸ ವಿವಾದ ಹುಟ್ಟು ಹಾಕಿದ್ದಾರೆ.
ಶುಕ್ರವಾರದ ರಾಜ್ಯಸಭೆ ಕಲಾಪದಲ್ಲಿ ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಅವರು ಇಂತಹ ಹೇಳಿಕೆ ನೀಡಿ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 2014ರಲ್ಲಿ ದೇಶದಲ್ಲಿ 1,400 ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಚಿವರು ಲಿಖಿತ ಉತ್ತರ ನೀಡಿದ್ದಾರೆ. ಈಗಾಗಲೇ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಕಲಾಪಕ್ಕೆ ಅಡ್ಡಿ ಮಾಡುತ್ತಿರುವ ಪ್ರತಿಪಕ್ಷಗಳಿಗೆ ಈ ಹೇಳಿಕೆ ಹೊಸ ಅಸ್ತ್ರವನ್ನು ಕೊಟ್ಟಂತಾಗಿದೆ.
ದೇಶದಲ್ಲಿನ ರೈತರ ಆತ್ಮಹತ್ಯೆಗೆ ಕಾರಣವೇನು? ಎಂಬ ಪ್ರಶ್ನೆಗೆ ಕೃಷಿ ಸಚಿವರು ನೀಡಿದ ಲಿಖಿತ ಉತ್ತರವಿದು. ನ್ಯಾಷನಲ್ ಕ್ರೈಂ ಬ್ಯೂರೋ ದಾಖಲೆಗಳ ಪ್ರಕಾರ ರೈತರ ಆತ್ಮಹತ್ಯೆಗೆ ಈ ಕಾರಣಗಳನ್ನು ಸಚಿವರು ನೀಡಿದ್ದಾರೆ. ಪ್ರೇಮ ವೈಫಲ್ಯ, ಡ್ರಗ್ಸ್, ಕೌಟುಂಬಿಕ ಸಮಸ್ಯೆ, ಅನಾರೋಗ್ಯ ಮತ್ತು ಸಾಲಬಾಧೆಯಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಸಚಿವರು ರಾಜ್ಯಸಭೆಗೆ ವಿವರಣೆ ನೀಡಿದ್ದಾರೆ.
ರೈತರ ಆತ್ಮಹತ್ಯೆಗೆ ಸಾಲಬಾಧೆಯೂ ಕಾರಣ ಎಂದು ಕೃಷಿ ಸಚಿವರು ಒಪ್ಪಿಕೊಂಡಿದ್ದಾರೆ. ಪ್ರತಿಪಕ್ಷ ಜೆಡಿಯು ಕೃಷಿ ಸಚಿವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇಂತಹ ಹೇಳಿಕೆಗಳನ್ನು ಬಿಜೆಪಿ ಬಿಟ್ಟು ಬೇರೆ ಯಾವುದೇ ಪಕ್ಷಗಳು ನೀಡಲು ಸಾಧ್ಯವಿಲ್ಲ ಎಂದು ಟೀಕಿಸಿದೆ.
* ಸಾಲಕ್ಕೆ ಸಾವು ಪರಿಹಾರವಲ್ಲ, ಯಾದಗಿರಿಯಲ್ಲೊಂದು ಅಭಿಯಾನ