ಅಗ್ನಿಪಥ್; ಜೂ. 24ರಂದು ದೇಶವ್ಯಾಪಿ ಪ್ರತಿಭಟನೆಗೆ ಎಸ್ಕೆಎಂ ಕರೆ
ನವದೆಹಲಿ ಜೂ.21: ಅಗ್ನಿಪಥ್ ನೇಮಕಾತಿ ಯೋಜನೆ ವಿರುದ್ಧ ಪ್ರತಿಭಟನೆ ಮಾಡುತ್ತಿರುವವರನ್ನು ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಬೆಂಬಲಿಸಿದೆ. ಮೋರ್ಚಾ ಜೂನ್ 24ರಂದು ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಿದೆ.
ಸೋಮವಾರ ಕರೆ ನೀಡಿದ್ದ ಭಾರತ್ ಬಂದ್ ಬೆಂಬಲಿಸಿದ್ದ ಸಂಯುಕ್ತ ಕಿಸಾನ್ ಮೋರ್ಚಾ ರೈತ ಮುಖಂಡರ ಸಭೆಯಲ್ಲಿ ದೇಶವ್ಯಾಪಿ ಹೋರಾಟಕ್ಕೆ ತೀರ್ಮಾನ ಕೈಗೊಂಡಿದೆ.
ದೇಶ ವಿರೋಧಿ, ಮಿಲಿಟರಿ ಮತ್ತು ರೈತ ವಿರೋಧಿ ಆಗಿರುವ ಅಗ್ನಿಪಥ್ ಯೋಜನೆ ವಿರುದ್ಧ ಶಾಂತಿಯುತವಾಗಿ ಹೋರಾಟ ಆರಂಭಿಸಲಿದೆ. ಜೈ ಜವಾನ್ ಜೈ ಕಿಸಾನ್ ಧ್ಯೆಯವಾಕ್ಯವನ್ನು ಕೇಂದ್ರ ಸರ್ಕಾರ ನಾಶಮಾಡಲು ಹೊರಟಿದೆ. ಕೇಂದ್ರದ ಈ ನಡೆ ವಿರುದ್ಧ ಧ್ವನಿ ಎತ್ತುವುದು ನಮ್ಮ ಕರ್ತವ್ಯ ಎಂದು ಸಂಘಟನೆಯ ಪ್ರಕಟಣೆ ಹೇಳಿದೆ.
ಈಗಾಗಲೇ ದೇಶದ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಸೋಮವಾರ ಕರೆ ನೀಡಿದ್ದ ಭಾರತ್ ಬಂದ್ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ. ಈಗ ಸಂಯುಕ್ತ ಕಿಸಾನ್ ಮೋರ್ಚಾ ದೇಶವ್ಯಾಪಿ ಹೋರಾಟಕ್ಕೆ ಮುಂದಾಗಿದೆ.
ಕೇಂದ್ರ ಸರ್ಕಾರ ಚೆಲ್ಲಾಟ?
ಅಗ್ನಿಪಥ್ ಯೋಜನೆ ಮೂಲಕ ಕೇಂದ್ರ ಸರ್ಕಾರ ಸೇನೆಯೊಂದಿಗೆ ಮಾತ್ರವಲ್ಲದೆ ನಿರುದ್ಯೋಗಿ ಯುವಕರು ಮತ್ತು ರೈತರ ಕುಟುಂಬಗಳ ಜೊತೆಗೆ ಆಟವಾಗುತ್ತಿದೆ. ದೇಶ ವಿರೋಧಿ ಯೋಜನೆ ಜಾರಿ ಮೂಲಕ ನಿರುದ್ಯೋಗಿಗಳ ಕನಸಿಗೆ ತಣ್ಣಿರು ಎರಚುತ್ತಿದೆ. ದೇಶ ಸೇವೆಯಲ್ಲಿ ತೊಡಗಿರುವ ಬಹುತೇಕ ಸೈನಿಕರು ರೈತ ಕುಟುಂಬದಿಂದಲೇ ಬಂದವರು. ಸೇನೆಯ ಸೇವೆ ಮೇಲೆಯೆ ಲಕ್ಷಾಂತರ ಕುಟುಂಬಗಳು ಬದುಕು ಸಾಗಿಸುತ್ತಿವೆ. ಆ ಕುಟುಂಬಗಳಿಗೆ ಈ ಯೋಜನೆ ಮೂಲಕ ಸರ್ಕಾರ ಅನ್ಯಾಯ ಮಾಡಲು ಹೊರಟಿದೆ ಎಂದು ಕಿಸಾನ್ ಮೋರ್ಚಾ ಆರೋಪಿಸಿದೆ.
ಯೋಜನೆ ವಿರುದ್ಧ ಆಕ್ರೋಶ
ಪ್ರಧಾನಿ ನರೇಂದ್ರ ಮೋದಿ One Rank One Pension ಯೋಜನೆ ಅಭಿಯಾನ ಆರಂಭಿಸಿ ನಿವೃತ್ತ ಸೈನಿಕರಿಗೆ ಪಿಂಚಣಿ ಕುರಿತು ಭರವಸೆ ನೀಡಿದ್ದರು. ಇದೀಗ ಅಗ್ನಿಪಥ್ ಯೋಜನೆ ಜಾರಿ ಮೂಲಕ ನೋ rank ನೋ ಪೆಂನ್ಷನ್ ಯೋಜನೆಗೆ ಚಾಲನೆ ನೀಡಿದಂತಾಗಿದೆ ಎಂದು ಕಿಸಾನ್ ಮೋರ್ಚಾದ ರೈತ ಮುಖಂಡರು ವ್ಯಂಗ್ಯವಾಡಿದ್ದಾರೆ.
ಸೇನಾ ಪೂರ್ಣಾವಧಿ ಸೇವೆ ಹೊಡೆತ
ಅಲ್ಪಾವಧಿಯ ಈ ಅಗ್ನಿಪಥ್ ಯೋಜನೆಯಿಂದ ಸೇನೆಯಲ್ಲಿ ಪೂರ್ಣಾವಧಿ ಸೇವೆ ಮಾಡಲು ಕನಸು ಕಂಡ ಲಕ್ಷಾಂತರ ರೈತರ ಮಕ್ಕಳ ಕನಸಿಗೆ ಹೊಡೆತ ನೀಡುತ್ತದೆ. ಅಲ್ಲದೇ ತಮ್ಮ ಹಕ್ಕಿಗಾಗಿ ರೈತ ಚಳವಳಿಯಲ್ಲಿ ಪಾಲ್ಗೊಂಡಿದ್ದ ಕೃಷಿಕರು ಇರುವ ಪ್ರದೇಶದಲ್ಲಿ ಇನ್ನ ಮುಂದೆ ಸೇನಾ ನೇಮಕಾತಿ ಆಗುವುದಕ್ಕೆ ಯೋಜನೆ ಅಡ್ಡಿಪಡಿಸಲಿದೆ ಎಂದು ಹೇಳಿದೆ.
ಗಡಿಯಲ್ಲಿ ತಿಂಗಳುಗಟ್ಟಲೇ ಹೋರಾಟ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ವಿವಿಧ ರಾಜ್ಯಗಳ ರೈತರು ಜಯ ಸಾಧಿಸಿದ್ದರು. ಅದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರ ಅಗ್ನಿಪಥ್ ಯೋಜನೆ ಜಾರಿಗೆ ತಂದು ಸೇಡು ತೀರಿಸಿಕೊಳ್ಳುವ ಹುನ್ನಾರ ನಡೆಸಿದೆ ಎಂದು ಸಂಘಟನೆ ದೂರಿದೆ.
ಜೂ.24 ಪ್ರತಿಭಟನಾ ದಿನ
ಕೇಂದ್ರ ರಕ್ಷಣಾ ಇಲಾಖೆ ಅಗ್ನಿಪಥ್ ನೇಮಕಾತಿ ಯೋಜನೆ ಜಾರಿಗೊಳಿಸಿದ ದಿನವನ್ನು ರಾಷ್ಟ್ರವ್ಯಾಪಿ ಪ್ರತಿಭಟನಾ ದಿನವನ್ನಾಗಿ ಆಚರಿಸಲು ಕಿಸಾನ್ ಮೋರ್ಚಾ ನಿರ್ಧರಿಸಿದೆ. ಈ ಸಂಬಂಧ ದೇಶಾದ್ಯಂತ ಶಾಂತಿಯುತ ಪ್ರತಿಭಟನೆ ನಡೆಸಲಾಗುತ್ತದೆ. ಪ್ರತಿ ಜಿಲ್ಲೆಗಳಲ್ಲಿ ಶಾಂತಿಯುತವಾಗಿ ಹೋರಾಟ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ.
ರಾಷ್ಟ್ರವ್ಯಾಪಿ ಹೋರಾಟದಲ್ಲಿ ವಿವಿಧ ಸಂಘಟನೆಗಳು, ರೈತರ ಮುಖಂಡರು, ಯುವಕರು ಪಾಲ್ಗೊಳ್ಳಬೇಕು. ಮೋರ್ಚಾದ ಮುಂದಿನ ಸಭೆ ಜುಲೈ 3ರಂದು ನಿಗದಿಯಾಗಿದ್ದು, ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಮಾಡಲಾಗುತ್ತದೆ.